Categories: ಲೇಖನ

ದೇವರು ಮತ್ತು ಗಲಭೆಗಳು…..ಇದೊಂದು ವಿಚಿತ್ರ…

ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ನಡೆಯುವ ಗಲಭೆಗಳಿಗೆ ಕಾರಣವೇನಿರಬಹುದು ಮತ್ತು ಯಾರ ನಡುವೆ ಈ ಗಲಭೆಗಳು ನಡೆಯುತ್ತವೆ…..

ಇದೊಂದು ವಿಚಿತ್ರ ಮತ್ತು ಮಿಲಿಯನ್ ಡಾಲರ್ ಪ್ರಶ್ನೆ……

ಇದು,
ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯೇ,
ಅಥವಾ
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಘರ್ಷಣೆಯೇ, ಅಥವಾ
ಗಣೇಶ ಮತ್ತು ಅಲ್ಲಾಹು ನಡುವಿನ ಘರ್ಷಣೆಯೇ, ಅಥವಾ
ಪೊಲೀಸರು ಮತ್ತು ಸಾಮಾನ್ಯ ಜನರ ನಡುವಿನ ಘರ್ಷಣೆಯೇ,
ಅಥವಾ
ಧರ್ಮ ಮತ್ತು ಸಂವಿಧಾನದ ನಡುವಿನ ಘರ್ಷಣೆಯೇ,
ಅಥವಾ
ನಾಗರಿಕರು ಮತ್ತು ಅನಾಗರಿಕರ ನಡುವಿನ ಘರ್ಷಣೆಯೇ,
ಅಥವಾ
ಶಾಂತಿ ಪ್ರಿಯರು ಮತ್ತು ಗಲಭೆ ಕೋರರ ನಡುವಿನ ಘರ್ಷಣೆಯೇ,
ಅಥವಾ
ಕಿಡಿಗೇಡಿಗಳು, ಸುಪಾರಿ ಕಿಲ್ಲರ್ ಗಳು ಹಾಗು ರಾಜಕೀಯ ದಲ್ಲಾಳಿಗಳ ಸಂಚೇ….. ??
ಇದರಲ್ಲಿ ಯಾವುದಿರಬಹುದು !!!!

ನಿನ್ನೆ ಮೊನ್ನೆ ನಡೆದ ನಾಗಮಂಗಲದ ಗಲಭೆ ಮಾತ್ರವಲ್ಲ, ಅನೇಕ ವರ್ಷಗಳಿಂದ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಆಗಾಗ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕೇವಲ ಗಣೇಶೋತ್ಸವ ಮಾತ್ರವಲ್ಲ ಬೇರೆ ಉತ್ಸವಗಳ ಅಥವಾ ಉರಸ್ ಗಳ ಸಂದರ್ಭದಲ್ಲಿ ಸಹ ಈ ರೀತಿಯ ಕ್ಷೋಭೆಗಳು ನಡೆಯುತ್ತಲೇ ಇರುತ್ತವೆ…

ದೇವನೊಬ್ಬ ನಾಮ ಹಲವು,
ದೇವರು ಸರ್ವಾಂತರ್ಯಾಮಿ, ದೇವರು ಇಡೀ ಜಗತ್ತಿನ ಒಬ್ಬನೇ ಸೃಷ್ಟಿಕರ್ತ ಎಂದು ಹೇಳುವ ಇದೇ ಧಾರ್ಮಿಕ ನಂಬುಗೆಯ ಸಮಾಜದಲ್ಲಿ ದೇವರ ಉತ್ಸವಗಳಲ್ಲಿಯೇ ಈ ರೀತಿ ಗಲಭೆಗಳು ನಡೆಯುವುದಾದರೆ ದೇವರ ಅಸ್ತಿತ್ವವನ್ನು, ಜನರ ಭಕ್ತಿ ಮತ್ತು ನಂಬಿಕೆಯನ್ನು ಮತ್ತೆ ಮತ್ತೆ ಪ್ರಶ್ನಿಸಬೇಕಾಗುತ್ತದೆ. ನಿಜಕ್ಕೂ ದೇವನೊಬ್ಬನೇ ಆದರೆ ಎಲ್ಲಾ ದೇವಮಂದಿರಗಳು ಒಂದೇ ಅಲ್ಲವೇ.. ?

ಹಾಗಿದ್ದಲ್ಲಿ ಮಸೀದಿಗಳಿಗೆ ಹಿಂದೂ ಮುಸ್ಲಿಮರು ಕ್ರಿಶ್ಚಿಯನ್ನರು ಕೈಮುಗಿಯಬಹುದು, ಹಾಗೆಯೇ ದೇವಸ್ಥಾನಗಳಿಗೆ ಈ ಎಲ್ಲರೂ ಪ್ರಾರ್ಥನೆ ಸಲ್ಲಿಸಬಹುದು, ಚರ್ಚ್ಗಳಿಗೂ ಇದೇ ರೀತಿಯ ಗೌರವ ಭಕ್ತಿ ತೋರಬಹುದಲ್ಲವೇ ? ಹಾಗೆ ಮಾಡದೆ ಮಸೀದಿಯನ್ನು ದ್ವೇಷಿಸುವ ಒಂದು ಜನಾಂಗ, ದೇವಸ್ಥಾನಗಳನ್ನು ದ್ವೇಷಿಸುವ ಇನ್ನೊಂದು ಜನಾಂಗ, ಚರ್ಚ್ ಗಳನ್ನು ದ್ವೇಷಿಸುವ ಮತ್ತೊಂದು ಜನಾಂಗ ಇದೆಲ್ಲವೂ ಏನನ್ನು ತೋರಿಸುತ್ತದೆ. ಅಲ್ಲಾ ಬೇರೆ, ಗಣೇಶ ಬೇರೆ, ಯೇಸು ಬೇರೆ ಎಂದಾದರೆ ಇದು ಮೂರ್ಖರ ಸಾಮ್ರಾಜ್ಯವಲ್ಲವೇ ?….

ಇವರಿಗೆ ನಿಜವಾಗಲೂ ದೇವರ ಮೇಲೆ ನಂಬಿಕೆ ಇಲ್ಲ, ಕೇವಲ ತಮ್ಮ ಸ್ವಾರ್ಥಕ್ಕಾಗಿ, ಕಪಟ ನಾಟಕ ಅಥವಾ ಮುಖವಾಡದ ಮರೆಯಲ್ಲಿ ಬದುಕುತ್ತಿದ್ದಾರೆ. ದೇವರು ಇವರನ್ನು ಸೃಷ್ಟಿಸಿಲ್ಲ, ಇವರೇ ದೇವರನ್ನು ಸೃಷ್ಟಿಸಿ ಅದನ್ನು ಇವರೇ ಶ್ರೇಷ್ಠವೆಂದು, ಅತಿ ಮಾನುಷ ಶಕ್ತಿ ಎಂದು ಆರೋಪಿಸಿ, ಅದರ ಉಳಿವಿಗಾಗಿ ತಮ್ಮ ತಮ್ಮಲ್ಲೇ ಹೊಡೆದಾಡುವ ಸ್ವಾರ್ಥಿಗಳು, ವಂಚಕರು, ಮೋಸಗಾರರು ಎಂದು ಕರೆಯಬಹುದಲ್ಲವೇ…..?

ದೇವರ ಪೂಜೆ, ಉತ್ಸವ, ಮೆರವಣಿಗೆಗಳನ್ನು ಸರಿಯಾಗಿ ಮಾಡಲು ಬರುವುದಿಲ್ಲ, ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಾಗುವುದಿಲ್ಲ, ಸಮಾಜವನ್ನು ಜಾತಿ, ಧರ್ಮ ರಹಿತವಾಗಿ, ಕೇವಲ ಮನುಷ್ಯ ಧರ್ಮವಾಗಿ ಮಾಡಲು ಸಾಧ್ಯವಾಗುವುದಿಲ್ಲ, ಮಹಿಳೆಯರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ,
ಕೊಲೆ, ಅತ್ಯಾಚಾರ, ದರೋಡೆ, ಕಳ್ಳತನವನ್ನು ತಡೆಯಲು ಸಾಧ್ಯವಾಗುತ್ತಿಲ್ಲ,
ಶುದ್ಧ ಗಾಳಿ, ನೀರು, ಆಹಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಯಾವುದೇ ವ್ಯಾಪಾರ ವ್ಯವಹಾರಗಳನ್ನು ಪ್ರಾಮಾಣಿಕವಾಗಿ ಮಾಡಲು ಸಾಧ್ಯವಾಗುತ್ತಿಲ್ಲ…..

ಆದರೆ ಬಹುತೇಕ ಎಲ್ಲರೂ ಮಹಾನ್ ದೈವಭಕ್ತರು, ಧರ್ಮದ ಆರಾಧಕರು.

ಒಂದು ನಾಗರಿಕ ಸಮಾಜ ನೆಮ್ಮದಿಯಿಂದ, ಸುರಕ್ಷತೆಯಿಂದ, ಸ್ವಾತಂತ್ರ್ಯದಿಂದ, ಸಮಾನತೆಯಿಂದ, ಮಾನವೀಯತೆಯಿಂದ ಇರಲು ಸಾಧ್ಯವಾಗದಿದ್ದರೆ ಅದು ಹುಚ್ಚರ ಸಂತೆಯಂತೆ,
ಕಳ್ಳರ ಸಂತೆಯಂತೆ,
ಕಪಟಿಗಳ ಮುಖವಾಡದಂತೆ, ಹೀಗೆ ನಡೆಯುತ್ತಲೇ ಇರುತ್ತದೆ…..

ದೇವರು ಮತ್ತು ಧರ್ಮದ ಪರಿಕಲ್ಪನೆ ಸೃಷ್ಟಿಯಾಗಿರುವುದು ಈ ಸಮಾಜ ಕ್ರಮಬದ್ಧವಾಗಿ ಶಾಂತಿಯುತವಾಗಿ ಮುಂದುವರಿಯಲು. ಅದು ವಿಫಲವಾದ ಅಥವಾ ಸಂಪೂರ್ಣವಾಗಿ ಯಶಸ್ವಿಯಾಗದ ಕಾರಣದಿಂದಲೇ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ಕಾನೂನು ಕಟ್ಟಳೆಗಳು ಜಾರಿಯಾಗಿದೆ…

ಈಗ ಅದನ್ನಾದರೂ ಸರಿಯಾಗಿ ಗೌರವದಿಂದ ಪಾಲಿಸುವ ಮೂಲಕ ನಾವೆಲ್ಲರೂ ಒಂದಷ್ಟು ನೆಮ್ಮದಿಯಿಂದ ಬದುಕೋಣ. ಇಲ್ಲದಿದ್ದರೆ ನಾಗಮಂಗಲದಂತ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾದರೆ, ಇದನ್ನು ನಾಗರಿಕ ಸಮಾಜ ಎನ್ನಲು ಸಾಧ್ಯವಾಗುವುದಿಲ್ಲ. ಇದೊಂದು ಮಾನಸಿಕ ರೋಗಿಗಳ ಅಸ್ವಸ್ಥ ಸಮಾಜ ಎನ್ನುವುದೇ ಹೆಚ್ಚು ಸೂಕ್ತವಾಗುತ್ತದೆ….

ದಯವಿಟ್ಟು ಎಲ್ಲಾ ಸಾರ್ವಜನಿಕರು ದೇವರು ಧರ್ಮಗಳ ಬಗ್ಗೆ, ಅತಿರೇಕದ ಉತ್ಸವಗಳ ಬಗ್ಗೆ ಮತ್ತೊಮ್ಮೆ ಯೋಚಿಸಿ. ಮನುಷ್ಯ ಮನುಷ್ಯನನ್ನು ಪ್ರೀತಿಸದೆ ಇಲ್ಲದಿರುವ ಇನ್ಯಾರನ್ನೋ ಪೂಜಿಸಿದರೆ ಈ ರೀತಿಯ ಸಮಸ್ಯೆಗಳೇ ಸೃಷ್ಟಿಯಾಗುವುದು. ಆಳವಾಗಿ ಧೈರ್ಯದಿಂದ ಯೋಚಿಸಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಆರ್‌ಒ ಘಟಕಗಳ ನೀರಿನ ಗುಣಮಟ್ಟ ಪ್ರಮಾಣಪತ್ರ ಪ್ರದರ್ಶನಕ್ಕೆ ಸದಸ್ಯರ ಆಗ್ರಹ

ದೊಡ್ಡಬಳ್ಳಾಪುರ: ನಗರದಲ್ಲಿನ ಎಲ್ಲಾ ಆರ್‌ಒ ಕುಡಿಯುವ ನೀರಿನ ಘಟಕಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ, ಅದರ ಪ್ರಮಾಣಪತ್ರವನ್ನು ಸಾರ್ವಜನಿಕರ ವೀಕ್ಷಣೆಗೆ…

4 hours ago

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ದೊಡ್ಡಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ರ‍್ಯಾಂಕ್ ಪಡೆದ…

6 hours ago

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56…

6 hours ago

ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಕೆ ರಾಜೀನಾಮೆ: ಜಿಲ್ಲಾಧಿಕಾರಿ ಅಂಗೀಕಾರ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಕೆ. ಆನಂದ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಜಿಲ್ಲಾಧಿಕಾರಿ ಡಾ. ಕೆ. ಅನುರಾಧಾ…

14 hours ago

NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ನಗದು-ಚಿನ್ನ ಪತ್ತೆ‌..!

ದಾವಣಗೆರೆ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮೂವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ…

1 day ago

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: MLC ಚುನಾವಣೆ, ಎಸ್‌ಐಆರ್ ಕುರಿತ ಚರ್ಚೆ

ಬಿಡದಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು, ಮುಂಬರುವ ವಿಧಾನ…

1 day ago