ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ನಡೆಯುವ ಗಲಭೆಗಳಿಗೆ ಕಾರಣವೇನಿರಬಹುದು ಮತ್ತು ಯಾರ ನಡುವೆ ಈ ಗಲಭೆಗಳು ನಡೆಯುತ್ತವೆ…..
ಇದೊಂದು ವಿಚಿತ್ರ ಮತ್ತು ಮಿಲಿಯನ್ ಡಾಲರ್ ಪ್ರಶ್ನೆ……
ಇದು,
ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯೇ,
ಅಥವಾ
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಘರ್ಷಣೆಯೇ, ಅಥವಾ
ಗಣೇಶ ಮತ್ತು ಅಲ್ಲಾಹು ನಡುವಿನ ಘರ್ಷಣೆಯೇ, ಅಥವಾ
ಪೊಲೀಸರು ಮತ್ತು ಸಾಮಾನ್ಯ ಜನರ ನಡುವಿನ ಘರ್ಷಣೆಯೇ,
ಅಥವಾ
ಧರ್ಮ ಮತ್ತು ಸಂವಿಧಾನದ ನಡುವಿನ ಘರ್ಷಣೆಯೇ,
ಅಥವಾ
ನಾಗರಿಕರು ಮತ್ತು ಅನಾಗರಿಕರ ನಡುವಿನ ಘರ್ಷಣೆಯೇ,
ಅಥವಾ
ಶಾಂತಿ ಪ್ರಿಯರು ಮತ್ತು ಗಲಭೆ ಕೋರರ ನಡುವಿನ ಘರ್ಷಣೆಯೇ,
ಅಥವಾ
ಕಿಡಿಗೇಡಿಗಳು, ಸುಪಾರಿ ಕಿಲ್ಲರ್ ಗಳು ಹಾಗು ರಾಜಕೀಯ ದಲ್ಲಾಳಿಗಳ ಸಂಚೇ….. ??
ಇದರಲ್ಲಿ ಯಾವುದಿರಬಹುದು !!!!
ನಿನ್ನೆ ಮೊನ್ನೆ ನಡೆದ ನಾಗಮಂಗಲದ ಗಲಭೆ ಮಾತ್ರವಲ್ಲ, ಅನೇಕ ವರ್ಷಗಳಿಂದ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಆಗಾಗ ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕೇವಲ ಗಣೇಶೋತ್ಸವ ಮಾತ್ರವಲ್ಲ ಬೇರೆ ಉತ್ಸವಗಳ ಅಥವಾ ಉರಸ್ ಗಳ ಸಂದರ್ಭದಲ್ಲಿ ಸಹ ಈ ರೀತಿಯ ಕ್ಷೋಭೆಗಳು ನಡೆಯುತ್ತಲೇ ಇರುತ್ತವೆ…
ದೇವನೊಬ್ಬ ನಾಮ ಹಲವು,
ದೇವರು ಸರ್ವಾಂತರ್ಯಾಮಿ, ದೇವರು ಇಡೀ ಜಗತ್ತಿನ ಒಬ್ಬನೇ ಸೃಷ್ಟಿಕರ್ತ ಎಂದು ಹೇಳುವ ಇದೇ ಧಾರ್ಮಿಕ ನಂಬುಗೆಯ ಸಮಾಜದಲ್ಲಿ ದೇವರ ಉತ್ಸವಗಳಲ್ಲಿಯೇ ಈ ರೀತಿ ಗಲಭೆಗಳು ನಡೆಯುವುದಾದರೆ ದೇವರ ಅಸ್ತಿತ್ವವನ್ನು, ಜನರ ಭಕ್ತಿ ಮತ್ತು ನಂಬಿಕೆಯನ್ನು ಮತ್ತೆ ಮತ್ತೆ ಪ್ರಶ್ನಿಸಬೇಕಾಗುತ್ತದೆ. ನಿಜಕ್ಕೂ ದೇವನೊಬ್ಬನೇ ಆದರೆ ಎಲ್ಲಾ ದೇವಮಂದಿರಗಳು ಒಂದೇ ಅಲ್ಲವೇ.. ?
ಹಾಗಿದ್ದಲ್ಲಿ ಮಸೀದಿಗಳಿಗೆ ಹಿಂದೂ ಮುಸ್ಲಿಮರು ಕ್ರಿಶ್ಚಿಯನ್ನರು ಕೈಮುಗಿಯಬಹುದು, ಹಾಗೆಯೇ ದೇವಸ್ಥಾನಗಳಿಗೆ ಈ ಎಲ್ಲರೂ ಪ್ರಾರ್ಥನೆ ಸಲ್ಲಿಸಬಹುದು, ಚರ್ಚ್ಗಳಿಗೂ ಇದೇ ರೀತಿಯ ಗೌರವ ಭಕ್ತಿ ತೋರಬಹುದಲ್ಲವೇ ? ಹಾಗೆ ಮಾಡದೆ ಮಸೀದಿಯನ್ನು ದ್ವೇಷಿಸುವ ಒಂದು ಜನಾಂಗ, ದೇವಸ್ಥಾನಗಳನ್ನು ದ್ವೇಷಿಸುವ ಇನ್ನೊಂದು ಜನಾಂಗ, ಚರ್ಚ್ ಗಳನ್ನು ದ್ವೇಷಿಸುವ ಮತ್ತೊಂದು ಜನಾಂಗ ಇದೆಲ್ಲವೂ ಏನನ್ನು ತೋರಿಸುತ್ತದೆ. ಅಲ್ಲಾ ಬೇರೆ, ಗಣೇಶ ಬೇರೆ, ಯೇಸು ಬೇರೆ ಎಂದಾದರೆ ಇದು ಮೂರ್ಖರ ಸಾಮ್ರಾಜ್ಯವಲ್ಲವೇ ?….
ಇವರಿಗೆ ನಿಜವಾಗಲೂ ದೇವರ ಮೇಲೆ ನಂಬಿಕೆ ಇಲ್ಲ, ಕೇವಲ ತಮ್ಮ ಸ್ವಾರ್ಥಕ್ಕಾಗಿ, ಕಪಟ ನಾಟಕ ಅಥವಾ ಮುಖವಾಡದ ಮರೆಯಲ್ಲಿ ಬದುಕುತ್ತಿದ್ದಾರೆ. ದೇವರು ಇವರನ್ನು ಸೃಷ್ಟಿಸಿಲ್ಲ, ಇವರೇ ದೇವರನ್ನು ಸೃಷ್ಟಿಸಿ ಅದನ್ನು ಇವರೇ ಶ್ರೇಷ್ಠವೆಂದು, ಅತಿ ಮಾನುಷ ಶಕ್ತಿ ಎಂದು ಆರೋಪಿಸಿ, ಅದರ ಉಳಿವಿಗಾಗಿ ತಮ್ಮ ತಮ್ಮಲ್ಲೇ ಹೊಡೆದಾಡುವ ಸ್ವಾರ್ಥಿಗಳು, ವಂಚಕರು, ಮೋಸಗಾರರು ಎಂದು ಕರೆಯಬಹುದಲ್ಲವೇ…..?
ದೇವರ ಪೂಜೆ, ಉತ್ಸವ, ಮೆರವಣಿಗೆಗಳನ್ನು ಸರಿಯಾಗಿ ಮಾಡಲು ಬರುವುದಿಲ್ಲ, ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಾಗುವುದಿಲ್ಲ, ಸಮಾಜವನ್ನು ಜಾತಿ, ಧರ್ಮ ರಹಿತವಾಗಿ, ಕೇವಲ ಮನುಷ್ಯ ಧರ್ಮವಾಗಿ ಮಾಡಲು ಸಾಧ್ಯವಾಗುವುದಿಲ್ಲ, ಮಹಿಳೆಯರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ,
ಕೊಲೆ, ಅತ್ಯಾಚಾರ, ದರೋಡೆ, ಕಳ್ಳತನವನ್ನು ತಡೆಯಲು ಸಾಧ್ಯವಾಗುತ್ತಿಲ್ಲ,
ಶುದ್ಧ ಗಾಳಿ, ನೀರು, ಆಹಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಯಾವುದೇ ವ್ಯಾಪಾರ ವ್ಯವಹಾರಗಳನ್ನು ಪ್ರಾಮಾಣಿಕವಾಗಿ ಮಾಡಲು ಸಾಧ್ಯವಾಗುತ್ತಿಲ್ಲ…..
ಆದರೆ ಬಹುತೇಕ ಎಲ್ಲರೂ ಮಹಾನ್ ದೈವಭಕ್ತರು, ಧರ್ಮದ ಆರಾಧಕರು.
ಒಂದು ನಾಗರಿಕ ಸಮಾಜ ನೆಮ್ಮದಿಯಿಂದ, ಸುರಕ್ಷತೆಯಿಂದ, ಸ್ವಾತಂತ್ರ್ಯದಿಂದ, ಸಮಾನತೆಯಿಂದ, ಮಾನವೀಯತೆಯಿಂದ ಇರಲು ಸಾಧ್ಯವಾಗದಿದ್ದರೆ ಅದು ಹುಚ್ಚರ ಸಂತೆಯಂತೆ,
ಕಳ್ಳರ ಸಂತೆಯಂತೆ,
ಕಪಟಿಗಳ ಮುಖವಾಡದಂತೆ, ಹೀಗೆ ನಡೆಯುತ್ತಲೇ ಇರುತ್ತದೆ…..
ದೇವರು ಮತ್ತು ಧರ್ಮದ ಪರಿಕಲ್ಪನೆ ಸೃಷ್ಟಿಯಾಗಿರುವುದು ಈ ಸಮಾಜ ಕ್ರಮಬದ್ಧವಾಗಿ ಶಾಂತಿಯುತವಾಗಿ ಮುಂದುವರಿಯಲು. ಅದು ವಿಫಲವಾದ ಅಥವಾ ಸಂಪೂರ್ಣವಾಗಿ ಯಶಸ್ವಿಯಾಗದ ಕಾರಣದಿಂದಲೇ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ಕಾನೂನು ಕಟ್ಟಳೆಗಳು ಜಾರಿಯಾಗಿದೆ…
ಈಗ ಅದನ್ನಾದರೂ ಸರಿಯಾಗಿ ಗೌರವದಿಂದ ಪಾಲಿಸುವ ಮೂಲಕ ನಾವೆಲ್ಲರೂ ಒಂದಷ್ಟು ನೆಮ್ಮದಿಯಿಂದ ಬದುಕೋಣ. ಇಲ್ಲದಿದ್ದರೆ ನಾಗಮಂಗಲದಂತ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾದರೆ, ಇದನ್ನು ನಾಗರಿಕ ಸಮಾಜ ಎನ್ನಲು ಸಾಧ್ಯವಾಗುವುದಿಲ್ಲ. ಇದೊಂದು ಮಾನಸಿಕ ರೋಗಿಗಳ ಅಸ್ವಸ್ಥ ಸಮಾಜ ಎನ್ನುವುದೇ ಹೆಚ್ಚು ಸೂಕ್ತವಾಗುತ್ತದೆ….
ದಯವಿಟ್ಟು ಎಲ್ಲಾ ಸಾರ್ವಜನಿಕರು ದೇವರು ಧರ್ಮಗಳ ಬಗ್ಗೆ, ಅತಿರೇಕದ ಉತ್ಸವಗಳ ಬಗ್ಗೆ ಮತ್ತೊಮ್ಮೆ ಯೋಚಿಸಿ. ಮನುಷ್ಯ ಮನುಷ್ಯನನ್ನು ಪ್ರೀತಿಸದೆ ಇಲ್ಲದಿರುವ ಇನ್ಯಾರನ್ನೋ ಪೂಜಿಸಿದರೆ ಈ ರೀತಿಯ ಸಮಸ್ಯೆಗಳೇ ಸೃಷ್ಟಿಯಾಗುವುದು. ಆಳವಾಗಿ ಧೈರ್ಯದಿಂದ ಯೋಚಿಸಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…