Categories: ಲೇಖನ

ದಿವ್ಯಾಂಗ ಚೇತನರೊಂದಿಗೆ ನಾವು, ನೀವು, ಎಲ್ಲರೂ……….

ವಿಶ್ವ ದಿವ್ಯಾಂಗ ಚೇತನರ ದಿನ ಡಿಸೆಂಬರ್ 3
(world disabled day)

ಈ ಬಾರಿಯ ವಿಶ್ವಸಂಸ್ಥೆಯ ಈ ವರ್ಷದ ಘೋಷವಾಕ್ಯ
” ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ಅಂಗವಿಕಲರನ್ನು ಒಳಗೊಂಡ ಸಮಾಜಗಳನ್ನು ಪೋಷಿಸುವುದು “.
” Fostering disability inclusive societies for advancing social progress”.

ಅಂದರೆ ವಿಶೇಷ ಚೇತನರನ್ನು ಮುಖ್ಯವಾಹಿನಿಯ ಅಭಿವೃದ್ಧಿಯ ಪಥದಲ್ಲಿ ಒಳಗೊಂಡ ಸಮಾಜ ನಿರ್ಮಾಣ ನಮ್ಮೆಲ್ಲರ ಆಶಯವಾಗಬೇಕು. ಅವರನ್ನು ಹೊರತುಪಡಿಸಿ ಸಮಾಜದ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಅದು ಸಹಜವೂ ಅಲ್ಲ.

ಕಳೆದ ಅಕ್ಟೋಬರ್ ಒಂಬತ್ತರಿಂದ ಹದಿಮೂರರವರೆಗೆ ಗೋವಾದ ಅಂತಾರಾಷ್ಟ್ರೀಯ ಫಿಲಂ ಸೊಸೈಟಿ ಆವರಣದಲ್ಲಿ ವಿಶ್ವ ದಿವ್ಯಾಂಗ ಚೇತನರ ಸಮಾವೇಶ ” ಪರ್ಪಲ್ ಫೆಸ್ಟ್ ” ಏರ್ಪಡಿಸಲಾಗಿತ್ತು. ಆ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ‌. ಇತರ ಎಲ್ಲಾ ಚಟುವಟಿಕೆಗಳ ಜೊತೆಗೆ ಇಡೀ ನಾಲ್ಕು ದಿನ ಅಲ್ಲಿನ ಮುಖ್ಯ ಸಭಾಂಗಣದಲ್ಲಿ ದಿವ್ಯಾಂಗ ಚೇತನರ ಕುರಿತು ಸಮಸ್ಯೆ, ಪರಿಹಾರ, ಇತಿಹಾಸ, ವರ್ತಮಾನ, ಭವಿಷ್ಯ ಎಲ್ಲವನ್ನು ಪರಿಣಿತರು, ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿಚಾರ ಸಂಕೀರ್ಣದಲ್ಲಿ ಚರ್ಚಿಸಿದರು ಪ್ರಶ್ನೋತ್ತರ ಕಾರ್ಯಕ್ರಮವೂ ಇತ್ತು.

ಅಲ್ಲಿ ಚರ್ಚೆಸಲಾದ ಒಂದು ಮಾಹಿತಿ ಪ್ರಕಾರ ಇಡೀ ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ 21 ರೀತಿಯ ವಿಶೇಷ ಚೇತನ ಗುಂಪಿನಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಕಣ್ಣಿಗೆ ಕಾಣುವ ಅಥವಾ ಅದೃಶ್ಯವಾದ ವಿಶೇಷ ಚೇತನರ ಒಟ್ಟು ಸಂಖ್ಯೆ ಶೇಕಡಾ 10 ರಿಂದ 15ರ ಆಸು ಪಾಸಿನಲ್ಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಈ ಸಂಖ್ಯೆ ಬಹಳ ದೊಡ್ಡದಿದೆ. ದುರದೃಷ್ಟವಶಾತ್ ಸರ್ಕಾರದ ಒಟ್ಟು ಯೋಜನಾ ವೆಚ್ಚದಲ್ಲಿ ನಿಜಕ್ಕೂ ಈ ಅತ್ಯಂತ ಅವಶ್ಯಕ ಇರುವ ದಿವ್ಯಾಂಗ ಚೇತನರಿಗೆ ಸಲ್ಲಬೇಕಾದ ಪಾಲು ಸಲ್ಲುತ್ತಿಲ್ಲ. ಅವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕೇವಲ ಮಾತು, ಭಾಷಣ, ಉಪನ್ಯಾಸಗಳಲ್ಲಿ ಅವರ ಬಗ್ಗೆ ತೀವ್ರ ಸಹಾನುಭೂತಿ ವ್ಯಕ್ತವಾಗುತ್ತಿದೆಯೇ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.

ಈ ಬಗ್ಗೆ ಸರ್ಕಾರ, ಸಮಾಜ, ಮಾಧ್ಯಮ, ಧಾರ್ಮಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ. ದಿವ್ಯಾಂಗ ಚೇತನರ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಪಟ್ಟಿ ಮಾಡಲು ನಮ್ಮೊಳಗೆ ಒಂದು ತಂಡ ಮಾಡಿ ಚರ್ಚಿಸಲಾಗುತ್ತಿದೆ. ಅದು ಸಿದ್ಧವಾದ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ಸಲಹೆ ಸೂಚನೆಗಳಿದ್ದರೆ ದಯವಿಟ್ಟು ನಮಗೆ ಮಾಹಿತಿ ನೀಡಿ. ಸಂಪರ್ಕಿಸಬೇಕಾದ ಸಂಖ್ಯೆ : ಶ್ರೀ ವಿಕ್ಟರಿ ವೀರೇಶ್ 99004 90718…..

ಕಣ್ಣಿದ್ದು ಕುರುಡರು ನಾವು………..

ಅನುಕಂಪದ ಜೊತೆ ಅವಕಾಶವನ್ನೂ ನೀಡಿ,
ಸಹಾನುಭೂತಿಯ ಜೊತೆ ಸದಾಶಯವೂ ಇರಲಿ,
ಕರುಣೆಯ ಜೊತೆ ಸಹಕಾರವೂ ಇರಲಿ……..

ಅಂಗವಿಕಲರು, ಅಂಗ ವೈಕಲ್ಯರು, ಅಂಗ ಊನರು, ವಿಕಲ ಚೇತನರು, ವಿಕಲಾಂಗ ಚೇತನರು, ದಿವ್ಯಾಂಗಿಗಳು, ದಿವ್ಯಾಂಗ ಚೇತನರು, ವಿಶಿಷ್ಟ ಚೇತನರು, ವಿಶೇಷ ಚೇತನರರು, ಕಣ್ಣು ಕಾಣದವರು, ಕಿವಿ ಕೇಳದವರು, ಮಾತು ಬಾರದವರು, ಬುದ್ದಿ ಮಾಂದ್ಯರು, ಕುಸುಮ ರೋಗಿಗಳು, ಆಟಿಸಂ, ಎಳವರು ಹೀಗೆ,…
ಒಟ್ಟಿನಲ್ಲಿ ಮನುಷ್ಯ ದೇಹ ಮತ್ತು ಮನಸ್ಸು ಸಹಜತೆಯಲ್ಲದ ಕೆಲವು ಕೊರತೆಗಳನ್ನು ಹೊಂದಿರುವವರನ್ನು ಹೀಗೆ ಕರೆಯಲಾಗುತ್ತದೆ.

ಅಂಗವಿಕಲರನ್ನು ಈಗ ದಿವ್ಯಾಂಗ ಚೇತನರು ಎಂದು ಅಧಿಕೃತವಾಗಿ, ಗೌರವಪೂರ್ವಕವಾಗಿ ಕರೆಯಲಾಗುತ್ತದೆ…..

ಸಹಜತೆಯನ್ನು ಹೊರತುಪಡಿಸಿ ಅಂಗವಿಕಲತೆಯು ವಿವಿಧ ರೀತಿಯಲ್ಲಿ ಇರುತ್ತದೆ. ಹುಟ್ಟಿನಿಂದ ಬರುವ ಅಂಗವೈಕಲ್ಯ, ತದ ನಂತರ ಅನಾರೋಗ್ಯದಿಂದ ಬರುವ ಅಂಗವೈಕಲ್ಯ, ಅಪಘಾತ ಮತ್ತು ಅನಿರೀಕ್ಷಿತ ಘಟನೆಗಳಿಂದ ಆಗುವ ಅಂಗವೈಕಲ್ಯ…..

ಇದರಲ್ಲೂ ಹಲವಾರು ವಿಧಗಳಿವೆ. ಕಣ್ಣು, ಕಿವಿ, ಮೂಗು, ಬಾಯಿ, ಕಾಲು ಸೇರಿ ದೇಹದ ಯಾವುದೇ ಭಾಗದ ನ್ಯೂನತೆಯೂ ಅಂಗವಿಕಲವೇ. ಇದರಲ್ಲಿ ಶೇಕಡಾ 1% ನಿಂದ 100% ವರೆಗೂ ಅಂಗವಿಕಲತೆಯ ಪ್ರಮಾಣ ಬೇರೆ ಬೇರೆಯಾಗಿರುತ್ತದೆ.

ಯಾವುದೇ ವ್ಯಕ್ತಿಗೆ ಅಂಗವೈಕಲ್ಯ ಜೀವನದ ಉಳಿದ ಅವಧಿಗೆ ಶಾಶ್ವತ ಎಂದಾದರೆ ಅದು ಮೊದಲಿಗೆ ಒಂದು ಯಾತನಾಮಯ ಸನ್ನಿವೇಶ. ಆದರೆ ಅದು ಅನಿವಾರ್ಯ ಎಂದು ಅರ್ಥಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ನಮ್ಮ ಸಮಾಜದಲ್ಲಿ ಬಹುದೊಡ್ಡ ಸವಾಲು…

ಪೋಷಕರು ಇದ್ದು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಇಬ್ಬರೂ ಸ್ವಲ್ಪ ಮಟ್ಟಿಗೆ ತಿಳಿವಳಿಕೆಯುಳ್ಳವರಾಗಿದ್ದರೆ ಆಗ ಅಂಗವೈಕಲ್ಯವನ್ನು ಇರುವುದರಲ್ಲಿ ಒಂದಷ್ಟು ಆತ್ಮವಿಶ್ವಾಸದಿಂದ ಎದುರಿಸಬಹುದು…

ಒಂದು ವೇಳೆ ಪೋಷಕರು ಇಲ್ಲದಿದ್ದರೆ ಅಥವಾ ಇದ್ದೂ ಆರ್ಥಿಕವಾಗಿ ದುರ್ಬಲರಾಗಿದ್ದರೆ, ಅಂಗವೈಕಲ್ಯ ತೀವ್ರವಾಗಿದ್ದರೆ ಅವರ ಪರಿಸ್ಥಿತಿ ತುಂಬಾ ಶೋಚನೀಯ….

ಅಂಗವಿಕಲತೆ ಎಂಬ ನ್ಯೂನತೆಯ ಜೊತೆ ಬಡತನ, ಅಸಹಾಯಕತೆ ಮತ್ತು ಕೌಟುಂಬಿಕ ನಿರ್ಲಕ್ಷ್ಯ ಸೇರಿಕೊಂಡರೆ ಅದರ ತೀವ್ರತೆ ‌ಊಹಿಸುವುದು ಕಷ್ಟ.

ಇಲ್ಲಿ ಸಮಾಜ ಮತ್ತು ಸರ್ಕಾರದ ಸ್ಪಂದನೆ ಬಹಳ ಮುಖ್ಯ. ಸಮಾಜದ ಸಹಕಾರ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಇರುತ್ತದೆ. ಯಾರೋ ಕೆಲವರು ಒಂದಷ್ಟು ಸಹಾಯ ಮಾಡಬಹುದು. ವೈಯಕ್ತಿಕ ನೆಲೆಯಲ್ಲಿ ಇದು ಇರುತ್ತದೆ. ಅದನ್ನು ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಇಲ್ಲಿ ಮಹತ್ವದ್ದು.

ಸರ್ಕಾರಗಳು ವಿಕಲಚೇತನರಿಗಾಗಿ ಅನೇಕ ಉಪಯುಕ್ತ ಯೋಜನೆಗಳನ್ನು ಘೋಷಿಸಿವೆ. ಎಂದಿನಂತೆ ಸಮಸ್ಯೆ ಇರುವುದು ಅನುಷ್ಠಾನದಲ್ಲಿ.

ಈ ಭ್ರಷ್ಟ ವ್ಯವಸ್ಥೆ ವಿಕಲಚೇತನರನ್ನೂ ಬಿಟ್ಟಿಲ್ಲ. ಸಾಮಾನ್ಯ ಆರೋಗ್ಯವಂತ ಜನರೇ ಸರ್ಕಾರದ ಕೆಲಸ ಕಾರ್ಯಗಳಿಗೆ ಕಚೇರಿ ಅಲೆದು ಅಲೆದು ಹೈರಾಣಾಗುವಾಗ ಇನ್ನು ವಿಕಲಚೇತನರ ಪಾಡೇನು….

ಕಣ್ಣು ಕಾಣದವರು, ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡವರು, ಮಾತು ಬಾರದವರು ಸರ್ಕಾರದ ಯೋಜನೆಯ ಅನುಕೂಲ ಪಡೆಯಲು ದೂರದ ಸ್ಥಳಗಳಿಂದ ಒಂಟಿಯಾಗಿ ಬಸ್ಸು, ರೈಲುಗಳಲ್ಲಿ, ಈ ಗಿಜಿಗಿಜಿಯ ವಾಹನದ ಒತ್ತಡದ ನಡುವೆ ಎಷ್ಟು ಬಾರಿ ಕಚೇರಿ ಅಲೆಯಬೇಕು. ಎಷ್ಟು ಮೆಟ್ಟಿಲುಗಳನ್ನು ಏರಬೇಕು……

ಈ ಮನುಷ್ಯ ಪ್ರಾಣಿ ಎಷ್ಟೊಂದು ಅಮಾನವೀಯ ತಿಳಿದಿದೆಯಲ್ಲವೇ. ಆ ನತದೃಷ್ಟರ ಬಳಿಯೂ ಲಂಚಕ್ಕಾಗಿ ಪೀಡಿಸುತ್ತಾರೆ. ಅನೇಕ ಕಾರಣ – ನೆಪಗಳನ್ನು ಮುಂದೆ ಮಾಡಿ ಅಲೆದಾಡಿಸುತ್ತಾರೆ – ನಿರ್ಲಕ್ಷಿಸುತ್ತಾರೆ. ಸ್ವಲ್ಪ ಜೋರಾಗಿ ನ್ಯಾಯ ಕೇಳಿದರೆ ಅಂಗವಿಕಲರಿಗೆ ದುರಹಂಕಾರ ಜಾಸ್ತಿ ಎಂದು ಹಿಯಾಳಿಸುತ್ತಾರೆ, ಕುಟುಕುತ್ತಾರೆ, ವ್ಯಂಗ್ಯವಾಡುತ್ತಾರೆ.

ಸರ್ಕಾರದ ಸಂಬಳ ಪಡೆಯುವ ಗೆಳೆಯ/ಗೆಳತಿಯರೇ, ಅವರ ಬಂಧುಗಳೇ, ಅವರ ಪರಿಚಯದವರೇ, ಇನ್ನು ಮುಂದಾದರೂ ಕನಿಷ್ಠ ವಿಕಲಚೇತನರ ವಿಷಯದಲ್ಲಿ ಲಂಚಕ್ಕಾಗಿ ಯಾವುದೇ ಪೀಡನೆ ಬೇಡ ಎಂಬ ಸಂಕಲ್ಪ ಮಾಡಿ. ಅವರನ್ನು ಅಲೆದಾಡಿಸಬೇಡಿ, ನಿಯಮದ ಹೆಸರಲ್ಲಿ ನಿರ್ಲಕ್ಷಿಸಬೇಡಿ. ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ.

ಆಡಳಿತಗಾರರೇ, ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ವಿಷಯದಲ್ಲಿ ಹತ್ತು ಹೆಜ್ಜೆ ಮುಂದೆ ಇಡಿ. ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸಿ. ನಿಯಮಗಳನ್ನು ಮೀರಿ, ವಿವೇಚನೆ ಬಳಸಿ ಮಾನವೀಯ ದೃಷ್ಟಿಯಿಂದ ಅವರಿಗೆ ಸೌಕರ್ಯಗಳನ್ನು ಒದಗಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅವರಿಗೆ ಆರ್ಥಿಕ ಭದ್ರತೆ ಒದಗಿಸಿ ಅವರ ಕೌಟುಂಬಿಕ ಬದುಕನ್ನು ಸಹನೀಯಗೊಳಿಸಿ.

ನಾವುಗಳು ವೈಯಕ್ತಿಕ ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿಕಲಚೇತನರಲ್ಲಿ ಜೀವನೋತ್ಸಾಹ ತುಂಬಲು, ಅವರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಪ್ರತಿಫಲಾಪೇಕ್ಷೆ ಇಲ್ಲದೆ ಸಹಕಾರ ನೀಡೋಣ….

ಹೆಲೆನ್ ಕೆಲ್ಲರ್ ಎಂಬ ಅಂಗವಿಕಲ ಹೆಣ್ಣು ಮಗಳ ಜೀವನ ಚರಿತ್ರೆ ಓದಿದರೆ ( ಅದು ಕನ್ನಡದಲ್ಲಿ ಸಹ ಪ್ರಕಟವಾಗಿದೆ ) ಅಂಗವಿಕಲತೆ ಎಂಬುದು ಒಂದು ದಿವ್ಯಾಂಗ ಚೇತನ ಎಂದು ತುಂಬಾ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಾಮಾನ್ಯ ಜನರು ಸಹ ಸಾಧಿಸಲಾಗದ ಸಾಧನೆ ಅವರದು. ಅನೇಕ ಕಷ್ಟ ನಷ್ಟಗಳಿಗೆ ಒಳಗಾಗಿ ಭವಿಷ್ಯದ ಭರವಸೆ ಕಳೆದುಕೊಳ್ಳುವ ಜನರಿಗೆ ಈ ಪುಸ್ತಕ ಬಹುಶಃ ಜೀವನೋತ್ಸಾವ ಉಕ್ಕಿಸುವ, ಬದುಕಿನಲ್ಲಿ ಮತ್ತೆ ಆಸೆಯ ಅಲೆ ಎಬ್ಬಿಸುವ ಶಕ್ತಿ ಹೊಂದಿದೆ.

ಒಳ್ಳೆಯತನ ಒಂದು ಭಾವನೆಯಲ್ಲ,
ಒಳ್ಳೆಯತನ ಪ್ರದರ್ಶನದ ವಸ್ತುವಲ್ಲ,
ಒಳ್ಳೆಯತನ ಕೇವಲ ತಿಳಿವಳಿಕೆಯಲ್ಲ,
ಒಳ್ಳೆಯತನ ನಮ್ಮ ನಡವಳಿಕೆ….

ದಿವ್ಯಾಂಗ ಚೇತನರೊಂದಿಗೆ ನಾವು, ನೀವು, ಎಲ್ಲರೂ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

3 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

15 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

16 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

16 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

17 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

23 hours ago