Categories: ಕೋಲಾರ

ತಿಂಗಳೊಳಗೆ ಒಪಿಎಸ್ ಜಾರಿಗೆ ಪ್ರಯತ್ನ, ನೌಕರರ ಹಿತವೇ ಸಂಘದ ಗುರಿ -ಸಿ.ಎಸ್ ಷಡಾಕ್ಷರಿ ಭರವಸೆ

ಕೋಲಾರ: ರಾಜ್ಯ ಸರ್ಕಾರದಿಂದ ಮುಂದಿನ ತಿಂಗಳೊಳಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ರದ್ದು ಮಾಡಿ, ಹಳೇ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿಗೊಳಿಸಲು ಪ್ರಯತ್ನಿಸಲಾಗುತ್ತದೆ ನೌಕರರ ತೊಂದರೆಗೆ ಸಂಘವು ನೈತಿಕ ಶಕ್ತಿ ತುಂಬುವುದು ನಮ್ಮ ಗುರಿಯಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ಎರಡನೇ ಬಾರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೆ ಅಭಿನಂದನೆ ಮತ್ತು ಉತ್ತಮ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷವು ಒಪಿಎಸ್ ಜಾರಿಯೇ ಪ್ರಮುಖ ನಿರ್ಣಯವಾಗಿದೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ಒಂದು ಸಮಿತಿ ರಚಿಸಿದ್ದವು. ಆದರೆ, ಆ ಸರಕಾರಗಳು ಅಧಿಕಾರದಿಂದ ಕೆಳಗಿಳಿದ ಕಾರಣ ಹಾಗೆಯೇ ನನೆಗುದಿಗೆ ಬಿದ್ದಿತ್ತು ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಐದು ಜನ ಅಧಿಕಾರಿಗಳ ಒಳಗೊಂಡ ಸಮಿತಿ ರಚಿಸಿದೆ. ಈ ಸಮಿತಿ ಈಗಾಗಲೇ ಒಪಿಎಸ್‌ ಜಾರಿಗೆ ಸಂಬಂಧಿಸಿದ ರಾಜ್ಯಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ನೀಡಲಿದ್ದು ಸರ್ಕಾರದ ಮೇಲೆ ಒತ್ತಡ ತಂದು ಜಾರಿಗೊಳಿಸಿ ನೌಕರರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.

ಕಳೆದ ಐದು ವರ್ಷದಲ್ಲಿ ಸುಮಾರು 25 ಆದೇಶಗಳನ್ನು ನೌಕರರ ಪರವಾಗಿ ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಗಿದೆ ಇನ್ನೂ ಎರಡು ಮೂರು ತಿಂಗಳಲ್ಲಿ ನೌಕರರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ವಿಮೆಯೊಂದಿಗೆ ಡಯಾಲಿಸಿಸ್ ಹಾಗೂ ಕ್ಯಾನ್ಸರ್ ಅಂತಹ ಕಾಯಿಲೆಗಳಿಗೆ ಆರು ತಿಂಗಳ ರಜೆಯೊಂದಿಗೆ ಸಂಬಳ ನೀಡುವ ಆದೇಶವನ್ನು ಜಾರಿ ಮಾಡಲಾಗುತ್ತದೆ ಮುಂದಿನ ವರ್ಷ 2026 ರಲ್ಲಿ ಕೇಂದ್ರ ಸರ್ಕಾರದ ವೇತನ ಆಯೋಗದ ಜಾರಿ ರೀತಿಯಲ್ಲಿಯೇ ರಾಜ್ಯದಲ್ಲೂ 8 ನೇ ವೇತನ ಆಯೋಗವನ್ನು ಜಾರಿಗೊಳಿಸಲು ಪ್ರತಿಯೊಬ್ಬ ನೌಕರರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೌಕರರ ನಿರಂತರ ಚಟುವಟಿಕೆಗಳಿಗೆ ನೌಕರರ ಭವನಗಳು ಅವಶ್ಯಕತೆ ಇದ್ದು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಮೊದಲ ಅಧ್ಯತೆ ನೀಡಲಾಗುತ್ತದೆ ಅದರಂತೆ ಸರ್ಕಾರದಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ತಲಾ 50 ಲಕ್ಷ ಹಾಗೂ ತಾಲ್ಲೂಕು ಕೇಂದ್ರಕ್ಕೆ 25 ಲಕ್ಷ ರೂಗಳನ್ನು ಬಿಡುಗಡೆ ಮಾಡಿಸಲು ಒತ್ತಾಯಿಸಲಾಗುತ್ತದೆ ನೌಕರರ ಸಹಕಾರ ಹಾಗೂ ಸಂಘಟನೆ ಮೂಲಕ ನಮ್ಮ ಎಲ್ಲಾ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ರಾಜ್ಯ ಸರ್ಕಾರಿ ನೌಕರರ ಸಂಘವು ಶತಪ್ರಯತ್ನ ಮಾಡಲಾಗುವುದೆಂದು ಹೇಳಿದರು.

ರಾಜ್ಯ ಸಂಘದ ನೇತೃತ್ವದಲ್ಲಿ ಜಿಲ್ಲಾ ತಾಲೂಕು ಘಟಕದ ವತಿಯಿಂದ ನೌಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವು ಸಂಘಟನೆಯವರು ಎನ್‌ಪಿಎಸ್‌ ಸಮಸ್ಯೆಯನ್ನು ಜೀವಂತವಾಗಿಟ್ಟು, ಹೋರಾಟದ ಹೆಸರಿನಲ್ಲಿ ದೇಣಿಗೆ ಎತ್ತಬೇಕೆಂಬ ಮನಸ್ಥಿತಿ ಹೊಂದಿದ್ದಾರೆ. ನನ್ನ ಅವಧಿಯಲ್ಲಿ 7ನೇ ವೇತನ ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸುವುದು ಸೇರಿ ಒಟ್ಟು 25 ಸರಕಾರಿ ಆದೇಶಗಳನ್ನು ನಮ್ಮ ಅವಧಿಯಲ್ಲಿ ಜಾರಿ ಮಾಡಲಾಗಿದೆ ನಾವು ಎಲ್ಲೂ ಸಹ ಒಂದೇ, ಒಂದು ರೂಪಾಯಿ ದೇಣಿಗೆ ಎತ್ತಿಲ್ಲ 6 ಲಕ್ಷ ನೌಕರರಿಗೆ ಒಳ್ಳೆಯದು ಮಾಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ ಅ ಕೆಲಸವನ್ನು ಆಯ್ಕೆಯಾದ ಪ್ರತಿಯೊಬ್ಬ ಪದಾಧಿಕಾರಿಗಳು ನಿರ್ದೇಶಕರು ಮಾಡಬೇಕು ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸಂಘದ ಜಿಲ್ಲಾ ಅಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ ರಾಜ್ಯ ಸಂಘವು ನಿರಂತರ ಪ್ರಯತ್ನದಿಂದ ಸುಮಾರು 25 ನೌಕರರ ಸ್ನೇಹಿ ಆದೇಶಗಳನ್ನು ಜಾರಿ ಮಾಡಲಾಗಿದೆ ಮುಂದೆ ಆರೋಗ್ಯ ಸಂಜೀವಿನಿ, ಒಪಿಎಸ್ ಜಾರಿಗೆ ಜಿಲ್ಲಾ ಸಂಘವು ರಾಜ್ಯ ಸಂಘಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಕೋಲಾರ ಜಿಲ್ಲೆಯಲ್ಲಿನ ನೌಕರರ ಭವನಕ್ಕೆ ಅನುದಾನ ಕೊಡಿಸುವ ಜೊತೆಗೆ ಗಡಿನಾಡು ಉತ್ಸವ, ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್, ಪ್ರಧಾನ ಕಾರ್ಯದರ್ಶಿ ಹೆಚ್.ಗಿರಿಗೌಡ, ಖಜಾಂಚಿ ವಿ.ವಿ ಶಿವರುದ್ರಯ್ಯ, ರಾಜ್ಯ ಪರಿಷತ್ ಸದಸ್ಯರಾದ ಶ್ರೀನಿವಾಸರೆಡ್ಡಿ, ಕೆ.ಟಿ.ಸುರೇಶ್ ಬಾಬು, ಚೇತನ್, ಜ್ಞಾನಪ್ರಕಾಶ್, ಶಂಕರಪ್ಪ, ರಾಜೇಶ್, ಜಿಲ್ಲಾ ಖಜಾಂಚಿ ಮುರಳಿಮೋಹನ್, ಕಾರ್ಯದರ್ಶಿ ಸತೀಶ್ ಕುಮಾರ್, ಗೌರವಧ್ಯಕ್ಷ ಕೆ. ಎನ್. ಮಂಜುನಾಥ, ಹಿರಿಯ ಉಪಾಧ್ಯಕ್ಷರಾದ ನಾಗಮಣಿ, ಹರಿಕೃಷ್ಣ, ಡಾ. ತಬಸ್ಸುಮ್, ಕೆ. ವಿಜಯ್, ತಾಲೂಕು ಅಧ್ಯಕ್ಷರಾದ ವಿ.ಮುನೇಗೌಡ, ಕೆ.ಎನ್ ಅರವಿಂದ್, ಆರ್.ರವಿ, ಎಂ.ಬೈರೇಗೌಡ, ನರಸಿಂಹಮೂರ್ತಿ ಸೇರಿದಂತೆ ಜಿಲ್ಲಾ ಸಂಘದ ಪದಾಧಿಕಾರಿಗಳು ವೃಂದಸಂಘಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

ಎ.ಬಿ.ಬಸವರಾಜುಗೆ ಸಿಕ್ತು ಪೋಸ್ಟಿಂಗ್: ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕರಾಗಿ ಎ.ಬಿ.ಬಸವರಾಜು ನೇಮಕ

ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ನಿರ್ದೇಶಕರಾಗಿ ಎ.ಬಿ.ಬಸವರಾಜು ಅವರು ನೇಮಕಗೊಂಡಿದ್ದಾರೆ... ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದ ಎ.ಬಿ…

5 hours ago

ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ: ನೀರಿನ ಸಮಸ್ಯೆ ನೀಗಿಸುವಂತೆ ನಗರಸಭೆ ಸದಸ್ಯರ ಒತ್ತಾಯ

ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ ಆರಂಭವಾಗಿದ್ದು, ನಗರಸಭೆಯಿಂದ ವಾರಕ್ಕೊಮ್ಮೆ ಕೇವಲ ಅರ್ಧ ಗಂಟೆ ನೀರು ಬಿಡುತ್ತಿರುವುದು ಸರಿಯಲ್ಲ.…

17 hours ago

ಗೃಹ ಅನಿಲ ಸೀಮಿತ ಬಳಕೆಗೆ ಡಿಸಿ ಸಲಹೆ: ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕೆ ಎನ್ ಅನುರಾಧಾ

ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದಿಟ್ಟುಕೊಂಡು ಕಾಳ ಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಿದರೆ ಅಂತಹ ಗ್ಯಾಸ್…

18 hours ago

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ....…

1 day ago