Categories: ಕೋಲಾರ

ಜಲಾವೃತಗೊಂಡ ಜಮೀನು ವೀಕ್ಷಿಸಿದ ಸಂಸದ, ಶಾಸಕ: ಕೆ.ಸಿ.ವ್ಯಾಲಿ ಕಾಲುವೆ ದುರಸ್ತಿಗೆ ಒತ್ತಾಯ

ಕೋಲಾರ: ಕೆ.ಸಿ.ವ್ಯಾಲಿ ಕಾಲುವೆಯಲ್ಲಿ ಹರಿಯುತ್ತಿರುವ ನೀರು ಅವೈಜ್ಞಾನಿಕ ಕಾಮಗಾರಿಯಿಂದ ಉಕ್ಕಿ ಹರಿದು ಬೆಳೆಗಳು ನಾಶವಾಗಿದ್ದು ಕೂಡಲೇ ‌ಕಾಲುವೆ ನವೀಕರಣಗೊಳಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಒತ್ತಾಯಿಸಿದರು.

ತಾಲ್ಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುವನಹಳ್ಳಿ ಗ್ರಾಮದಲ್ಲಿ‌ ಜಲಾವೃತವಾಗಿರುವ ಜಮೀನುಗಳನ್ನು ಭಾನುವಾರ ವೀಕ್ಷಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು‌.

ಎಸ್.ಅಗ್ರಹಾರ, ಮುದುವಾಡಿ ಕೆರೆಯಿಂದ ಮಣಿಘಟ್ಟವರೆಗೆ ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯನ್ನು ನವೀಕರಣ‌ ಮಾಡಬೇಕು‌. ಕಾಲುವೆಗೆ 8 ಅಡಿ ಎತ್ತರದ‌ ತಡೆಗೋಡೆ ಹಾಗೂ ನೀರು ಸರಾಗವಾಗಿ ಹರಿಯಲು 30 ಅಡಿ ಅಗಲ ಮಾಡಬೇಕು ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಶೀಘ್ರದಲ್ಲಿಯೇ ರೈತರಿಗೆ‌ ಆಗಿರುವ ಹಾನಿಯನ್ನು ಸರಿಪಡಿಸಿಕೊಡುತ್ತೇವೆ ಎಂದು ಭರವಸೆ‌ ನೀಡಿದರು‌.

ಶ್ರೀನಿವಾಸಪುರ‌ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿದೆ. ಕಾಂಗ್ರೆಸ್ ಶಾಸಕರಿಗೆ ₹ 50 ಕೋಟಿ ಅನುದಾನ ₹ 25 ಕೊಡುವಿದಾಗಿ ಹೇಳಿದ್ದಾರೆ. ಹೀಗಾಗಿಯೇ, ನ್ಯಾಯಾಲಯ‌ ಮೊರೆ ಹೋಗಿದ್ದೇವೆ. ಕ್ಷೇತ್ರಕ್ಕೆ ₹ 100 ಕೋಟಿ ಬರಬೇಕು. ಈವರೆಗೆ ಒಂದೂ ಮನೆಯನ್ನೂ ಕೊಟ್ಟಿಲ್ಲ. ಅನುದಾನ ಬಿಡುಗಡೆ ಆದರೆ ಪ್ರತಿ ಗ್ರಾಮಕ್ಕೆ ಸೌಕರ್ಯ ಕಲ್ಪಿಸಲಾಗುವುದು. ನಾನು ಯಾವತ್ತೂ‌ ನಾಯಕ ಅಲ್ಲ; ಸೇವಕ‌ ಎಂದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೆ.ಸಿ.ವ್ಯಾಲಿ ನೀರಿನಿಂದ ಹಾನಿಗೆ ಒಳಗಾಗಿರುವ ಜಮೀನು ಪರಿಶೀಲನೆ ಮಾಡಿದ್ದೇವೆ. ಕೆ.ಸಿ ವ್ಯಾಲಿ ನೀರು‌ ಹರಿಯಲು ಕಾಲುವೆ ಸರಿಪಡಿಸಬೇಕಿದೆ.‌ ಕಾಲುವೆ ಹದಗೆಟ್ಟಿರುವುದರ ಜೊತೆಗೆ ಮಳೆ ಬಂದು ಉಕ್ಕಿ ಜಮೀನಿಗೆ ಹರಿದಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆ ಕಾಮಗಾರಿಯಲ್ಲಿ ಎಡವಟ್ಟಾಗಿದೆ ಎಂದು ಹೇಳಿದರು.

ಇದೇ 13ಕ್ಕೆ ದಿಶಾ ಸಭೆ ಇದೆ‌‌. ಅಷ್ಟರೊಳಗೆ ಅಧಿಕಾರಿಗಳು ಪರಿಶೀಲನೆ ಮಾಡಿ ವರದಿ ಕೊಡಬೇಕು. ವೆಂಕಟಶಿವಾರೆಡ್ಡಿ ಈ ವಿಚಾರದಲ್ಲಿ ಗಭೀರವಾಗಿ ಕೆಲಸ‌ ಮಾಡುತ್ತಿದ್ದಾರೆ ಈ ಭಾಗದಲ್ಲಿ ಹದೆಗೆಟ್ಟಿರುವ ರಸ್ತೆಗಳನ್ನು ಮೂರು ತಿಂಗಳಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ‌ನೀಡಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೆ.ಸಿ.ವ್ಯಾಲಿಯಿಂದ ರೈತರ ಜಮೀನಿಗೆ‌ ಆಗಿರುವ ಹಾನಿಯನ್ನು ನೇರವಾಗಿ ಪರಿಶೀಲನೆ ನಡೆಸಲಾಗಿದೆ. ನೀರು ಹರಿಸುವ ಮುನ್ನ ಸಾಧಕ ಬಾಧಕ ಬಗ್ಗೆ ಗಮನ ಹರಿಸಬೇಕಿತ್ತು. ಸರಿಯಾದ ಕಾಲುವೆ ಇಲ್ಲದೆ ಹರಿಸಿ ರೈತರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ನೀರು ರೈತರ ಜಮೀನುಗಳಿಗೆ‌ ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ ಎಂದರು.

ಕೆ.ಸಿ ವ್ಯಾಲಿಗೆ ವಿರೋಧ ಇಲ್ಲ. ಆದರೆ,‌ ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಬೇಕಿತ್ತು. ಶುದ್ಧೀಕರಣ ‌ಮಾಡದೆ ಹರಿಸಿ ಸಮಸ್ಯೆ ಉಂಟಾಗಿದೆ. ಕಲುಷಿತ ನೀರು ಸೇವಿಸಿ ಜನ,‌ ಜಾನುವಾರು,‌‌ ಪಕ್ಷಿ,‌ ಕೀಟಗಳಿಗೆ ಸಮಸ್ಯೆ ಉಂಟಾಗುತ್ತಿದೆ.‌ ರೋಗಗಳು ಬರುತ್ತಿವೆ. ಬೆಳೆ‌ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಕಾಲುವೆ‌ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಮಳೆ ಬಂದಿದ್ದರಿಂದ ಬಹುತೇಕ ಕೆರೆಗಳು ಉಕ್ಕಿ ಹರಿಯುತ್ತಿವೆ‌. ಯರಗೋಳ್ ಜಲಾಶಯಕ್ಕೆ ಕೆ.ಸಿ ವ್ಯಾಲಿ ನೀರು ಹರಿಯುತ್ತಿದೆ‌. ಆ ನೀರನ್ನು ಜನರು ಕುಡಿಯುತ್ತಿದ್ದು ಏನಾದರೂ ಸಮಸ್ಯೆ‌ ಉಂಟಾದರೆ ಯಾರು ಗತಿ? ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ಶಾಸಕರು ‌ನ್ಯಾಯಾಲಯಕ್ಕೆ‌ ಹೋಗಿ ಅನುದಾನ ಪಡೆಯುವಂಥ ಪರಿಸ್ಥಿತಿಯನ್ನು ಈ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಶೇಷಾಪುರ ಗೋಪಾಲ್ ಮಾತನಾಡಿ, ಅವೈಜ್ಞಾನಿಕವಾಗಿ ಕಾಲುವೆ ನಿರ್ಮಿಸಿ ನಾವೇ ಸೃಷ್ಟಿ ಮಾಡಿಕೊಂಡ ಸಮಸ್ಯೆ ಇದು. ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ‌ ಅನಾಹುತ ಆಗುತ್ತಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳಷ್ಟೇ ಸಾರ್ವಜನಿಕರು ಜವಾಬ್ದಾರರು. ಕೆಲವರ ಸ್ವಾರ್ಥಕ್ಕಾಗಿ ಯೋಜನೆ ಮೂಲ ಸ್ವರೂಪ ಬದಲಾಯಿಸಿದ್ದೇ ಕಾರಣ‌. ಮುದುವಾಡಿ ಕೆರೆಯಿಂದ ನೂರು ವರ್ಷಗಳಿಂದ ಕೆರೆ ತುಂಬಿ‌ ಹರಿದಿದೆ. ಅವೈಜ್ಞಾನಿಕವಾಗಿ ಚೆಕ್ ಡ್ಯಾಮ್ ನಿರ್ಮಿಸಲಾಗಿದೆ . ಕಮಿಷನ್ ಗಾಗಿ ಮನಬದಂತೆ ಕಾಮಗಾರಿ ನಡೆಸಲಾಗಿದೆ ಎಂದು ದೂರಿದರು.

ಈ ಸಂಬಂಧ‌ ಶಾಸಕ, ಸಂಸದರು ಸಣ್ಣ‌ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿದ್ದು, ಸಮಸ್ಯೆ ಸರಿ ಹೋಗುವ ವಿಶ್ವಾಸವಿದೆ ಎಂದು ‌ಹೇಳಿದರು.

ಕಾರ್ಯಕ್ರಮ ಆಯೋಜಕ ಶ್ರೀನಿವಾಸ್ ಮಾತನಾಡಿ, ಕೆ.ಸಿ.ವ್ಯಾಲಿ ನೀರು‌ ಉಕ್ಕಿ ಹರಿದು ರೈತರಿಗೆ ಆಗಿರುವ ಸಮಸ್ಯೆ ವಿವರಿಸಿದರು ಕೆ.ಸಿ.ವ್ಯಾಲಿ ಹೆಸರಲ್ಲಿ ರಮೇಶ್ ಕುಮಾರ್ ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ತೋರಿಸುತ್ತೇವೆ.‌ ಮುಂದೆ ಸಮ್ಮಿಶ್ರ ಸರ್ಕಾರ ‌ಬರಲಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ದಿಂಬ ನಾಗರಾಜಗೌಡ, ವಿಶ್ವನಾಥ್ ಗೌಡ, ರಾಮಚಂದ್ರೇಗೌಡ, ಕುಮಾರ್, ಶ್ರೀನಿವಾಸ್, ತಾ.ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಪ್ರಸನ್ನ,‌ ವೆಂಕಟೇಶ್ ಗೌಡ, ಕೇಶವ, ವೆಂಕಟೇಶ್, ರಘುನಾಥ್, ಮನೋಹರ್, ಸೋಮಣ್ಣ, ಸಂತೋಷ್ ಇದ್ದರು.

Ramesh Babu

Journalist

Recent Posts

‘SIR ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ಆರೋಪ: ಸಾಕ್ಷ್ಯಾಧಾರಗಳೊಂದಿಗೆ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು’- ಆರ್ ಅಶೋಕ್

ದೆಹಲಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರನ್ನು ಇಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶ್ರೀ…

5 hours ago

ಹಳಿ ದಾಟುವಾಗ ಯುವತಿಗೆ ರೈಲು ಡಿಕ್ಕಿ: ಸ್ಥಳದಲ್ಲೇ ಸಾವು

ದೇವನಹಳ್ಳಿ: ತನ್ನ ಗ್ರಾಮದ ಕಡೆಗೆ ತೆರಳಲು ಹೆದ್ದಾರಿ ಪಕ್ಕದ ರೈಲ್ವೇ ಹಳಿ ದಾಟಲು ಹೋದ ಕಾಲೇಜು ಯುವತಿ ರೈಲಿಗೆ ಸಿಲುಕಿ…

5 hours ago

ಸಚಿವ ಸ್ಥಾನ ನೀಡಿದರೆ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ- ಶಾಸಕಿ ನಯನಾ ಮೋಟಮ್ಮ

ದೊಡ್ಡಬಳ್ಳಾಪುರ: ಶಾಸಕಿ ನಯನಾ ಮೋಟಮ್ಮ ಅವರು ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ,…

5 hours ago

ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಿ, ಎಲ್ಲರ ಸಹಮತದೊಂದಿಗೆ ಮುಂದುವರಿಯಬೇಕು- ವಿನಯ್ ಗುರೂಜಿ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಶಾಸಕ ಶರವಣ ಹಾಗೂ ಶ್ರೀ…

6 hours ago

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ  ಟಿ.ಎ. ಶರವಣ ವಾಗ್ದಾಳಿ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.…

6 hours ago

ಅತಿವೇಗ: ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಕಾರು ಡಿಕ್ಕಿ – ಕಾರು ನುಜ್ಜುಗೊಜ್ಜು, ಇಬ್ಬರು ಯುವಕರು ಪವಾಡ ರೀತಿಯಲ್ಲಿ ಪಾರು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೊಡ್ಡಬಳ್ಳಾಪುರ: ಅತಿವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು…

8 hours ago