Categories: ಲೇಖನ

ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ….

 

ಘರ್ಷಣೆ ಮತ್ತು ಸೌಹಾರ್ದತೆ,
ಆಯ್ಕೆ ನಿಮ್ಮದು, ನಮ್ಮದು……

ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ – ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ……

ಇದು ಹಿಂದು – ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ……

ಸಾಮಾನ್ಯವಾಗಿ ಗಣೇಶ ಹಬ್ಬವು ವೈಯಕ್ತಿಕತೆಯ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಉತ್ಸವವಾಗಿ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ರಾಜಕೀಯ ಕಾರಣದಿಂದಾಗಿ ಒಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದೆ.

ಎರಡು ಬಹುಮುಖ್ಯ ಕಾರಣಗಳಿಗಾಗಿ ಈ ಸಂದರ್ಭದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಗಣೇಶನನ್ನು ಪ್ರತಿಷ್ಠಾಪಿಸುವ ಜಾಗ ಮತ್ತು ಮೆರವಣಿಗೆಯ ಹಾದಿ ಇಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನ ಗೊಳಿಸುತ್ತದೆ. ಮುಖ್ಯವಾಗಿ ಹಿಂದೂ ಮುಸ್ಲಿಮರ ನಡುವೆ….

ವಿಶ್ವದ ಬೃಹತ್ ಭೌಗೋಳಿಕ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಬಹುಶಃ ಏಳನೆಯ ಸ್ಥಾನ ಇರಬೇಕು. ಒಂದು ಸಣ್ಣ ಗಣೇಶ ಮೂರ್ತಿಯನ್ನು ಎಲ್ಲಿ ಬೇಕಾದರೂ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಕೆಲವು ದಿನಗಳಲ್ಲಿ ವಿಸರ್ಜಿಸಬಹುದು. ಆದರೆ ಕೆಲವು ಮೂಲಭೂತವಾದಿ ಮನಸ್ಥಿತಿಗಳು ಬೇಕಂತಲೇ ಉದ್ದೇಶಪೂರ್ವಕವಾಗಿ ಇಂತಹ ಸ್ಥಳದಲ್ಲಿಯೇ ಆಗಬೇಕು ಎಂದು ಹಠ ಮಾಡುತ್ತಾರೆ. ಅದರ ಹಿಂದೆ ರಾಜಕೀಯ ಮತ್ತು ಶ್ರೇಷ್ಠತೆಯ ವ್ಯಸನ ಇದ್ದೇ ಇರುತ್ತದೆ. ಅದನ್ನು ವಿರೋಧಿಸಲು ಇನ್ನೊಂದು ಅದೇ ರೀತಿಯ ಮನಸ್ಥಿತಿ ಸಿದ್ದವಾಗಿರುತ್ತದೆ. ಅಲ್ಲಿಗೆ ಘರ್ಷಣೆ ನಿಶ್ಚಿತ.

ಯಾರಾದರೊಬ್ಬರು ಹಠ ಮಾಡದೆ ಇದು ನಮ್ಮ ‌ದೇಶ, ಇಲ್ಲಿರುವವರು ನಮ್ಮ ಜನ, ಆದ್ದರಿಂದ ಯಾವುದೇ ವಿವಾದವಿಲ್ಲದ ಒಂದು ಖಾಲಿ ಇರುವ ಪ್ರದೇಶದಲ್ಲಿ ಮಾಡೋಣ. ಏಕೆಂದರೆ ದೇಶದ ಪ್ರಗತಿಗೆ ಶಾಂತಿ ಬಹಳ ಮುಖ್ಯ ಎಂಬ ಹೊಂದಾಣಿಕೆ ಮನೋಭಾವ ಪ್ರದರ್ಶಿಸಿದರೆ ಜಾಗದ ವಿಷಯದಲ್ಲಿ ವಿವಾದವೇ ಇರುವುದಿಲ್ಲ. ಆದರೆ ವಿಧ್ವಂಸಕ ಮತ್ತು ವಿಭಜನಾತ್ಮಕ ಮನಸ್ಸುಗಳಿಗೆ ಇದು ಬೇಡವಾಗಿದೆ. ಇಲ್ಲಿಯೇ ಮಾಡಬೇಕು ಎಂದು ಒಬ್ಬರು, ಇಲ್ಲ ಇಲ್ಲಿ ಮಾಡಲು ಬಿಡುವುದಿಲ್ಲ ಎಂದು ಇನ್ನೊಬ್ಬರು. ಅದಕ್ಕಾಗಿ ಪೊಲೀಸು, ನ್ಯಾಯಾಲಯ, ಹೊಡೆದಾಟ, ಬಂದ್ ಎಲ್ಲಾ ‌ಆಗಬೇಕು. ಹೊಸ ಹೊಸ ಪುಡಾರಿಗಳು ಸೃಷ್ಟಿಯಾಗಬೇಕು. ಮಾಧ್ಯಮಗಳಲ್ಲಿ ದಿನಗಟ್ಟಲೆ ಚರ್ಚೆ ಆಗಬೇಕು. ಒಟ್ಟಿನಲ್ಲಿ ದೇವರು ಧರ್ಮದ ಹೆಸರಿನಲ್ಲಿ ಒಂದಷ್ಟು ಜನ ಸಾಯಬೇಕು. ಆಗ ಕೆಲವರಿಗೆ ಸಮಾಧಾನ. ಇವರುಗಳಿಗೆ ದೇಶ ‌ಹಾಳಾದರೂ ಚಿಂತೆ ಇಲ್ಲ. ಅವರು ಗೆಲ್ಲಬೇಕಷ್ಟೆ.

 

ಗಲಭೆಗಳ ಇನ್ನೊಂದು ಕಾರಣ ಮೆರವಣಿಗೆಯ ಹಾದಿ. ಮುಸ್ಲಿಮರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿಯೇ ಮೆರವಣಿಗೆ ಮಾಡಬೇಕು. ಅದು ನಮ್ಮ ಭೂಮಿ ನಮಗೆ ಅಷ್ಟೂ ಸ್ವಾತಂತ್ರ್ಯವಿಲ್ಲವೇ ಎಂದು ಹಿಂದುಗಳೂ, ಅಯ್ಯೋ ಮೆರವಣಿಗೆ ಮಾಡಲು ಇನ್ನೂ ಸಾಕಷ್ಟು ಇತರೆ ಮಾರ್ಗಗಳು ಇರುವಾಗ ಇವರೇಕೆ ಉದ್ದೇಶಪೂರ್ವಕವಾಗಿ ನಮ್ಮನ್ನು ಅಣಕಿಸಲು ಇದೇ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮುಸ್ಲಿಮರೂ ಘರ್ಷಣೆಗೆ ಇಳಿಯುತ್ತಾರೆ. ಆಗ ಇನ್ಯಾರೋ ಎರಡೂ ಗುಂಪಿನ ಕಿಡಿಗೇಡಿಗಳು ಕಲ್ಲು ತೂರುತ್ತಾರೆ. ಅದು ಇನ್ನಷ್ಟು ಹಿಂಸೆಗೆ ತಿರುಗಿ ಒಂದೆರಡು ಹೆಣ ಬೀಳುತ್ತದೆ. ಅದಕ್ಕೆ ಒಂದಷ್ಟು ತನಿಖೆ, ಬಂದ್, ವ್ಯಾಪಾರ ನಷ್ಟ, ಶಾಲೆಗೆ ರಜಾ, ಪರಿಹಾರ ಘೋಷಣೆ. ರಾಜ್ಯದ ಬೊಕ್ಕಸಕ್ಕೆ ಹೊರೆ.

ನೋಡಿ ಹೇಗೆ ಒಂದು ಸಂಭ್ರಮದ ಹಬ್ಬ ಸೂತಕವಾಗಿ ಬದಲಾಗುತ್ತದೆ.

ಹಾಗಾದರೆ ಈ ದೇಶ ಯಾರದು ? ಇದನ್ನು ಯಾರು ರಕ್ಷಿಸಬೇಕು ? ಯಾರು ನಿಜವಾದ ಭಾರತೀಯರು ?…

ಯಾರು ದೇಶದ ಶಾಂತಿ ಮತ್ತು ಆ ಮೂಲಕ ಅಭಿವೃದ್ಧಿಗಾಗಿ ಸೋಲುತ್ತಾರೋ, ಸಹಿಸುತ್ತಾರೋ, ಹೊಂದಾಣಿಕೆ ಮಾಡಿಕೊಳ್ಳುತ್ತಾರೋ, ಸಮನ್ವಯ ಸಾಧಿಸುತ್ತಾರೋ, ತ್ಯಾಗ ಮಾಡುತ್ತಾರೋ, ಕರುಣೆ ತೋರುತ್ತಾರೋ, ಯಾರು ಕ್ಷಮಿಸುತ್ತಾರೋ ಅವರೇ ನಿಜವಾದ ದೇಶ ಭಕ್ತರು, ಧರ್ಮ ಪರಿಪಾಲಕರು,

ಯಾರು ಅನಾವಶ್ಯಕವಾಗಿ ಘರ್ಷಣೆಗೆ ಇಳಿಯುತ್ತಾರೋ, ಯಾರು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಕಂಟಕವಾಗುತ್ತಾರೋ ಅವರು ದೇಶದ್ರೋಹಿಗಳು.

ಇದರಲ್ಲಿ ಹಿಂದೂ ಮುಸ್ಲಿಂ ಇರುವುದಿಲ್ಲ. ಕೇವಲ ‌ದೇಶ ಪ್ರೇಮಿಗಳು ಮತ್ತು ‌ದೇಶ ವಿರೋಧಿಗಳು ಮಾತ್ರ ಇರುತ್ತಾರೆ.

ಮುಸ್ಲಿಮರೇ ದಯವಿಟ್ಟು ಯಾವುದೇ ವಿವಾದಗಳಿಗೆ ಆಸ್ಪದ ಕೊಡದೆ ಈ ಹಬ್ಬದಲ್ಲಿ ನೀವು ಸಹ ಭಾಗವಹಿಸಿ. ಇದು ನಿಮ್ಮ ದೇಶ. ಕೆಲವೇ ಕೆಲವು ಹಿಂದೂ ಮೂಲಭೂತವಾದಿಗಳ ಪ್ರಚೋದನೆಗೆ ಒಳಗಾಗಬೇಡಿ….

ಹಿಂದೂಗಳೇ ದಯವಿಟ್ಟು ಮುಸ್ಲಿಮರಿಗೆ ಅನಾವಶ್ಯಕವಾಗಿ ಪ್ರಚೋದಿಸದೇ ಅವರನ್ನು ಸಹ ಪ್ರೀತಿಯಿಂದ ಈ ಹಬ್ಬದಲ್ಲಿ ಭಾಗವಹಿಸುವಂತೆ ಆಹ್ವಾನಿಸಿ. ಇದು ನಿಮ್ಮ ದೇಶ.

ಒಳ್ಳೆಯತನ ಎಂಬುದು ಒಂದು ಘೋಷಣೆಯಲ್ಲ ಅಥವಾ ಪದವಲ್ಲ.
ಅದು ನಮ್ಮ ನಡವಳಿಕೆ. ಅದೇ ದೇಶ ಪ್ರೇಮ – ಅದೇ ಮಾನವೀಯ ಧರ್ಮ….

ಉಳಿದದ್ದು ನಿಮ್ಮ ವಿವೇಚನೆಗೆ‌ ಸೇರಿದ್ದು…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

6 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

2 days ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

3 days ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

4 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

4 days ago