ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ ಆತಂಕಕ್ಕೆ ಸಿಲುಕುತ್ತದೆ. ಇಂತಹ ಸಂದರ್ಭಗಳಲ್ಲಿ ವೈಜ್ಞಾನಿಕ ಮುನ್ಸೂಚನೆಗಳ ಜೊತೆಗೆ ಜನರು ತಮ್ಮ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳ ಮೊರೆ ಹೋಗುವುದು ಇಂದಿಗೂ ಹಲವು ಗ್ರಾಮಗಳಲ್ಲಿ ಕಾಣಸಿಗುವ ದೃಶ್ಯವಾಗಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆಯಾಗಲೆಂದು ಮಳೆರಾಯನ ಪೂಜೆ, ಚಂದಮಾಮನ ಪೂಜೆ, ಇಬ್ಬರು ಗಂಡು ಮಕ್ಕಳಿಗೆ ಮದುವೆ ಸಂಪ್ರದಾಯ, ವರುಣ ಯಾಗ, ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಮಳೆರಾಯನ ಹಾಡುಗಳನ್ನು ಹಾಡುವ ಮೂಲಕ ಗ್ರಾಮದೇವತೆಗಳಿಗೆ ವಿಶೇಷ ಪೂಜೆ, ನಗರ ಸಂಕೀರ್ತನೆ, ಅಭಿಷೇಕ ಮತ್ತು ಹರಕೆಗಳು ಸೇರಿದಂತೆ ಹಲವು ಆಚರಣೆಗಳನ್ನು ನಡೆಸಲಾಗುತ್ತದೆ.

ಇವು ಕೇವಲ ಧಾರ್ಮಿಕ ವಿಧಿವಿಧಾನಗಳಷ್ಟೇ ಅಲ್ಲ, ಗ್ರಾಮಸ್ಥರನ್ನು ಒಂದೇ ವೇದಿಕೆಗೆ ತರುವ ಸಾಮಾಜಿಕ ಕಾರ್ಯಕ್ರಮಗಳಾಗಿಯೂ ರೂಪುಗೊಂಡಿವೆ.

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಅನಿಯಮಿತ ಮಳೆ ಮತ್ತು ದೀರ್ಘ ಬರದ ಪರಿಸ್ಥಿತಿ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿ, ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವದಂತಹ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಲಾಗುತ್ತಿದೆ.

ಜನಪದ ನಂಬಿಕೆಗಳ ಪ್ರಕಾರ ಕಪ್ಪೆಗಳ ಮದುವೆ ಅಥವಾ ವರುಣ ಯಾಗ ನಡೆಸಿದರೆ ಮಳೆಯ ದೇವರು ಪ್ರಸನ್ನನಾಗಿ ಉತ್ತಮ ಮಳೆ ಸುರಿಸುತ್ತಾನೆ ಎಂಬ ವಿಶ್ವಾಸವಿದೆ. ಈ ನಂಬಿಕೆಗಳು ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಇಂದಿಗೂ ಕೆಲವು ಪ್ರದೇಶಗಳಲ್ಲಿ ಜೀವಂತವಾಗಿವೆ.

ವಿಜ್ಞಾನಿಗಳ ಪ್ರಕಾರ ಮಳೆ ವಾತಾವರಣದ ಉಷ್ಣತೆ, ಗಾಳಿಯ ಒತ್ತಡ, ತೇವಾಂಶ, ಮೋಡಗಳ ರಚನೆ ಹಾಗೂ ಮಾನ್ಸೂನ್ ಗಾಳಿಗಳಂತಹ ಪ್ರಕೃತಿ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪೂಜೆ–ಆಚರಣೆಗಳು ನೇರವಾಗಿ ಮಳೆಯನ್ನು ಉಂಟುಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೆ ಇವು ಜನರಲ್ಲಿ ಆಶಾವಾದ, ಧೈರ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವ ಸಾಂಸ್ಕೃತಿಕ ಆಚರಣೆಗಳಾಗಿ ಮಹತ್ವ ಪಡೆದಿವೆ.

ಮಳೆಯು ವಾತಾವರಣದ ಒತ್ತಡ, ತೇವಾಂಶ, ಗಾಳಿಯ ಚಲನೆ, ಮೋಡಗಳ ರಚನೆ ಮತ್ತು ಸಮುದ್ರದ ಉಷ್ಣಾಂಶ ಸೇರಿದಂತೆ ಹಲವು ವೈಜ್ಞಾನಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ಇಂತಹ ಆಚರಣೆಗಳು ಗ್ರಾಮೀಣ ಸಮಾಜದಲ್ಲಿ ಭರವಸೆ ಮೂಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಸಂಪ್ರದಾಯಗಳ ಜೊತೆಗೆ ಮಳೆನೀರು ಸಂಗ್ರಹಣೆ, ಕೆರೆಗಳ ಪುನಶ್ಚೇತನ, ಅರಣ್ಯ ಸಂರಕ್ಷಣೆ ಮತ್ತು ನೀರಿನ ಸಮರ್ಪಕ ಬಳಕೆಯಂತಹ ಶಾಶ್ವತ ಕ್ರಮಗಳಿಗೂ ಆದ್ಯತೆ ನೀಡಬೇಕಾಗಿದೆ. ನಂಬಿಕೆ ಮತ್ತು ವಿಜ್ಞಾನ ಎರಡನ್ನೂ ಸಮತೋಲನದಿಂದ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ನೀರಿನ ಸಂಕಷ್ಟವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಳೆಗಾಗಿ ಪೂಜೆ, ಪ್ರಾರ್ಥನೆಗಳಿಗಿಂತ ಪರಿಸರ ಸಂರಕ್ಷಣೆಯೇ ಶಾಶ್ವತ ಪರಿಹಾರ. ನಂಬಿಕೆ-ಅಪನಂಬಿಕೆಗಳು ಮನುಷ್ಯನ ಬದುಕಿನ ಭಾಗವಾಗಿದ್ದರೂ, ಮಳೆ ಬರಬೇಕಾದರೆ ವೈಜ್ಞಾನಿಕ ಕ್ರಮಗಳಾದ ಮರಗಿಡಗಳ ನೆಡುವಿಕೆ, ಅರಣ್ಯ ಸಂರಕ್ಷಣೆ, ಕೆರೆ-ಕಟ್ಟೆಗಳ ಅಭಿವೃದ್ಧಿ ಮತ್ತು ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಬೂಟಾಟಿಕೆಗಳನ್ನು ಬಿಟ್ಟು ಪ್ರಕೃತಿಯನ್ನು ಉಳಿಸುವ ಕೆಲಸಕ್ಕೆ ಕೈಜೋಡಿಸಿದರೆ ಮಾತ್ರ ಉತ್ತಮ ಮಳೆಯೊಂದಿಗೆ ಪರಿಸರ ಸಮತೋಲನ ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಡಾ‌. ಹುಲಿಕಲ್ ನಟರಾಜು ಹೇಳಿದರು.

ಪ್ರಾರ್ಥನೆ, ಪೂಜೆ ಅಥವಾ ಆಚರಣೆಗಳಿಂದ ಮಳೆ ಬರುವುದಿಲ್ಲ. ಈ ಬಾರಿ ಎಲ್‌ ನಿನೋ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ‘ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ’ ಎಂಬಂತೆ, ಕೇವಲ ಆಚರಣೆಗಳಿಂದ ಪ್ರಕೃತಿಯ ನಿಯಮ ಬದಲಾಗುವುದಿಲ್ಲ. ಪರಿಸರವನ್ನು ನಾಶ ಮಾಡುತ್ತಾ ಮಳೆಗಾಗಿ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಐದು ವರ್ಷಕ್ಕೊಮ್ಮೆ ಬರಗಾಲ ಎದುರಾಗುವುದು ಸಹಜ. ಆದ್ದರಿಂದ ಉತ್ತಮ ಮಳೆಯಾಗುವ ವರ್ಷಗಳಲ್ಲಿ ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಿ, ಜಲಸಂಪನ್ಮೂಲಗಳನ್ನು ಸಂರಕ್ಷಿಸಿಕೊಂಡರೆ ಬರಗಾಲದ ಸಂದರ್ಭದಲ್ಲಿ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ವಿಜ್ಞಾನಿ (ಬೇಸಾಯಶಾಸ್ತ್ರ) ಡಾ. ನಿಂಗರಾಜು ಜಿ.ಕೆ ತಿಳಿಸಿದರು.

ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮೂರಲ್ಲಿ ಮಳೆಗಾಗಿ ಚಂದಮಾಮನ ರಂಗೋಲಿ ಬಿಡಿಸಿ ಪೂಜೆ ಮಾಡಿದಾಗ ಮಳೆ ಬಂದಿರುವ ಉದಾಹರಣೆ ಇದೆ. ಈ ಆಚರಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಸಂಪ್ರದಾಯದ ಭಾಗವಾಗಿರುವ ಈ ಪದ್ಧತಿಯನ್ನು ಮುಂದೆಯೂ ಮುಂದುವರಿಸುತ್ತೇವೆ ಎಂದು ಹಣಬೆ ನಿವಾಸಿ ಅಂಬರೀಶ್ ಹೇಳಿದರು.

Ramesh Babu

Journalist

Recent Posts

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

2 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

3 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

16 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

16 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

16 hours ago

ಬಾಶೆಟ್ಟಿಹಳ್ಳಿ ಪಪಂಗೆ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರವು ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ…

17 hours ago