ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ ಆತಂಕಕ್ಕೆ ಸಿಲುಕುತ್ತದೆ. ಇಂತಹ ಸಂದರ್ಭಗಳಲ್ಲಿ ವೈಜ್ಞಾನಿಕ ಮುನ್ಸೂಚನೆಗಳ ಜೊತೆಗೆ ಜನರು ತಮ್ಮ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳ ಮೊರೆ ಹೋಗುವುದು ಇಂದಿಗೂ ಹಲವು ಗ್ರಾಮಗಳಲ್ಲಿ ಕಾಣಸಿಗುವ ದೃಶ್ಯವಾಗಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆಯಾಗಲೆಂದು ಮಳೆರಾಯನ ಪೂಜೆ, ಚಂದಮಾಮನ ಪೂಜೆ, ಇಬ್ಬರು ಗಂಡು ಮಕ್ಕಳಿಗೆ ಮದುವೆ ಸಂಪ್ರದಾಯ, ವರುಣ ಯಾಗ, ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಮಳೆರಾಯನ ಹಾಡುಗಳನ್ನು ಹಾಡುವ ಮೂಲಕ ಗ್ರಾಮದೇವತೆಗಳಿಗೆ ವಿಶೇಷ ಪೂಜೆ, ನಗರ ಸಂಕೀರ್ತನೆ, ಅಭಿಷೇಕ ಮತ್ತು ಹರಕೆಗಳು ಸೇರಿದಂತೆ ಹಲವು ಆಚರಣೆಗಳನ್ನು ನಡೆಸಲಾಗುತ್ತದೆ.

ಇವು ಕೇವಲ ಧಾರ್ಮಿಕ ವಿಧಿವಿಧಾನಗಳಷ್ಟೇ ಅಲ್ಲ, ಗ್ರಾಮಸ್ಥರನ್ನು ಒಂದೇ ವೇದಿಕೆಗೆ ತರುವ ಸಾಮಾಜಿಕ ಕಾರ್ಯಕ್ರಮಗಳಾಗಿಯೂ ರೂಪುಗೊಂಡಿವೆ.

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಅನಿಯಮಿತ ಮಳೆ ಮತ್ತು ದೀರ್ಘ ಬರದ ಪರಿಸ್ಥಿತಿ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬಿತ್ತನೆ ಮಾಡಿದ ಬೆಳೆಗಳು ಒಣಗುವ ಭೀತಿ, ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವದಂತಹ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಲಾಗುತ್ತಿದೆ.

ಜನಪದ ನಂಬಿಕೆಗಳ ಪ್ರಕಾರ ಕಪ್ಪೆಗಳ ಮದುವೆ ಅಥವಾ ವರುಣ ಯಾಗ ನಡೆಸಿದರೆ ಮಳೆಯ ದೇವರು ಪ್ರಸನ್ನನಾಗಿ ಉತ್ತಮ ಮಳೆ ಸುರಿಸುತ್ತಾನೆ ಎಂಬ ವಿಶ್ವಾಸವಿದೆ. ಈ ನಂಬಿಕೆಗಳು ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಇಂದಿಗೂ ಕೆಲವು ಪ್ರದೇಶಗಳಲ್ಲಿ ಜೀವಂತವಾಗಿವೆ.

ವಿಜ್ಞಾನಿಗಳ ಪ್ರಕಾರ ಮಳೆ ವಾತಾವರಣದ ಉಷ್ಣತೆ, ಗಾಳಿಯ ಒತ್ತಡ, ತೇವಾಂಶ, ಮೋಡಗಳ ರಚನೆ ಹಾಗೂ ಮಾನ್ಸೂನ್ ಗಾಳಿಗಳಂತಹ ಪ್ರಕೃತಿ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಪೂಜೆ–ಆಚರಣೆಗಳು ನೇರವಾಗಿ ಮಳೆಯನ್ನು ಉಂಟುಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೆ ಇವು ಜನರಲ್ಲಿ ಆಶಾವಾದ, ಧೈರ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವ ಸಾಂಸ್ಕೃತಿಕ ಆಚರಣೆಗಳಾಗಿ ಮಹತ್ವ ಪಡೆದಿವೆ.

ಮಳೆಯು ವಾತಾವರಣದ ಒತ್ತಡ, ತೇವಾಂಶ, ಗಾಳಿಯ ಚಲನೆ, ಮೋಡಗಳ ರಚನೆ ಮತ್ತು ಸಮುದ್ರದ ಉಷ್ಣಾಂಶ ಸೇರಿದಂತೆ ಹಲವು ವೈಜ್ಞಾನಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ಇಂತಹ ಆಚರಣೆಗಳು ಗ್ರಾಮೀಣ ಸಮಾಜದಲ್ಲಿ ಭರವಸೆ ಮೂಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಸಂಪ್ರದಾಯಗಳ ಜೊತೆಗೆ ಮಳೆನೀರು ಸಂಗ್ರಹಣೆ, ಕೆರೆಗಳ ಪುನಶ್ಚೇತನ, ಅರಣ್ಯ ಸಂರಕ್ಷಣೆ ಮತ್ತು ನೀರಿನ ಸಮರ್ಪಕ ಬಳಕೆಯಂತಹ ಶಾಶ್ವತ ಕ್ರಮಗಳಿಗೂ ಆದ್ಯತೆ ನೀಡಬೇಕಾಗಿದೆ. ನಂಬಿಕೆ ಮತ್ತು ವಿಜ್ಞಾನ ಎರಡನ್ನೂ ಸಮತೋಲನದಿಂದ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ನೀರಿನ ಸಂಕಷ್ಟವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಳೆಗಾಗಿ ಪೂಜೆ, ಪ್ರಾರ್ಥನೆಗಳಿಗಿಂತ ಪರಿಸರ ಸಂರಕ್ಷಣೆಯೇ ಶಾಶ್ವತ ಪರಿಹಾರ. ನಂಬಿಕೆ-ಅಪನಂಬಿಕೆಗಳು ಮನುಷ್ಯನ ಬದುಕಿನ ಭಾಗವಾಗಿದ್ದರೂ, ಮಳೆ ಬರಬೇಕಾದರೆ ವೈಜ್ಞಾನಿಕ ಕ್ರಮಗಳಾದ ಮರಗಿಡಗಳ ನೆಡುವಿಕೆ, ಅರಣ್ಯ ಸಂರಕ್ಷಣೆ, ಕೆರೆ-ಕಟ್ಟೆಗಳ ಅಭಿವೃದ್ಧಿ ಮತ್ತು ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಬೂಟಾಟಿಕೆಗಳನ್ನು ಬಿಟ್ಟು ಪ್ರಕೃತಿಯನ್ನು ಉಳಿಸುವ ಕೆಲಸಕ್ಕೆ ಕೈಜೋಡಿಸಿದರೆ ಮಾತ್ರ ಉತ್ತಮ ಮಳೆಯೊಂದಿಗೆ ಪರಿಸರ ಸಮತೋಲನ ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಡಾ‌. ಹುಲಿಕಲ್ ನಟರಾಜು ಹೇಳಿದರು.

ಪ್ರಾರ್ಥನೆ, ಪೂಜೆ ಅಥವಾ ಆಚರಣೆಗಳಿಂದ ಮಳೆ ಬರುವುದಿಲ್ಲ. ಈ ಬಾರಿ ಎಲ್‌ ನಿನೋ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ‘ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ’ ಎಂಬಂತೆ, ಕೇವಲ ಆಚರಣೆಗಳಿಂದ ಪ್ರಕೃತಿಯ ನಿಯಮ ಬದಲಾಗುವುದಿಲ್ಲ. ಪರಿಸರವನ್ನು ನಾಶ ಮಾಡುತ್ತಾ ಮಳೆಗಾಗಿ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಐದು ವರ್ಷಕ್ಕೊಮ್ಮೆ ಬರಗಾಲ ಎದುರಾಗುವುದು ಸಹಜ. ಆದ್ದರಿಂದ ಉತ್ತಮ ಮಳೆಯಾಗುವ ವರ್ಷಗಳಲ್ಲಿ ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಿ, ಜಲಸಂಪನ್ಮೂಲಗಳನ್ನು ಸಂರಕ್ಷಿಸಿಕೊಂಡರೆ ಬರಗಾಲದ ಸಂದರ್ಭದಲ್ಲಿ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ವಿಜ್ಞಾನಿ (ಬೇಸಾಯಶಾಸ್ತ್ರ) ಡಾ. ನಿಂಗರಾಜು ಜಿ.ಕೆ ತಿಳಿಸಿದರು.

ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನಮ್ಮೂರಲ್ಲಿ ಮಳೆಗಾಗಿ ಚಂದಮಾಮನ ರಂಗೋಲಿ ಬಿಡಿಸಿ ಪೂಜೆ ಮಾಡಿದಾಗ ಮಳೆ ಬಂದಿರುವ ಉದಾಹರಣೆ ಇದೆ. ಈ ಆಚರಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಸಂಪ್ರದಾಯದ ಭಾಗವಾಗಿರುವ ಈ ಪದ್ಧತಿಯನ್ನು ಮುಂದೆಯೂ ಮುಂದುವರಿಸುತ್ತೇವೆ ಎಂದು ಹಣಬೆ ನಿವಾಸಿ ಅಂಬರೀಶ್ ಹೇಳಿದರು.

Ramesh Babu

Journalist

Recent Posts

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

24 hours ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

2 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

2 days ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

3 days ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

3 days ago