Categories: ಕೋಲಾರ

ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ರೋಡ್ ಶೋ

ಕೋಲಾರ: ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರುವಾರ ಕೆ.ವಿ.ಗೌತಮ್‌ ನಾಮಪತ್ರ ಸಲ್ಲಿಕೆ ಬಳಿಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಗರದಲ್ಲಿ ರೋಡ್‌ ಶೋ ನಡೆಸಿದರು

ಈ ಸಂದರ್ಭದಲ್ಲಿ ಅವರೊಂದಿಗೆ ಅಭ್ಯರ್ಥಿ, ಸಚಿವರು, ಶಾಸಕರು, ಮುಖಂಡರು ಜೊತೆ ಡಿ.ಕೆ.ಶಿವಕುಮಾರ್‌ ನಗರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ತೆರೆದ ವಾಹನದಲ್ಲಿ ಮುಖಂಡರು ಕೆ.ವಿ.ಗೌತಮ್‌ ಅವರಿಗೆ ಮತಯಾಚಿಸಿದರು. ಸಾವಿರಾರು ಕಾರ್ಯಕರ್ತರು ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಂಗಾರಪೇಟೆ ವೃತ್ತದಿಂದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಮಾರ್ಗವಾಗಿ ಗಾಂಧಿವನಕ್ಕೆ ವಾಹನ ಸಾಗಿತು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಡಿ.ಕೆ.ಶಿವಕುಮಾರ್‌ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕೋಲಾರ ಜಿಲ್ಲೆಯ ಜನರು ಒಂದು ಕಾಲದಲ್ಲಿ ಚಿನ್ನ ಕೊಟ್ಟಿದ್ದೀರಿ. ಈಗ ತರಕಾರಿ, ಹಾಲು ಕೊಡುತ್ತಿದ್ದೀರಿ. ಈ ಬಾರಿ ನನ್ನ ಮನವಿ ಎಂದರೆ ನಮ್ಮ ಹೊಸ ಅಭ್ಯರ್ಥಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿ. ನಾನು ಹಾಗೂ ಮುಖ್ಯಮಂತ್ರಿ, ‌ಕೆ.ಎಚ್.ಮುನಿಯಪ್ಪ, ಜಿಲ್ಲೆಯ ಶಾಸಕರೊಂದಿಗೆ ಮಾತನಾಡಿ ಗೌತಮ್‌ ಅವರನ್ನು ಕಣಕ್ಕಿಳಿಸಿದ್ದೇವೆ ಎಂದರು.

ರಾಜ್ಯದ ಐದು ಪರಿಶಿಷ್ಟ ಜಾತಿ ಕ್ಷೇತ್ರಗಳಲ್ಲಿ ಮೂವರು ಬಲಗೈ ಅಭ್ಯರ್ಥಿಗಳನ್ನು ಹಾಗೂ ಇಬ್ಬರು ಎಡಗೈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಈ ಮೂಲಕ ಸಾಮಾಜಿಕ ನ್ಯಾಯದ ಸಮತೋಲನ ಕಾಯ್ದುಕೊಂಡಿದ್ದೇವೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹಾಗೂ ಸರ್ವಾಧಿಕಾರ ತೊಲಗಿಸಲು ಕಾಂಗ್ರೆಸ್‌ ಪಕ್ಷಕ್ಕೆ ವೋಟು ಹಾಕಿ ಎಂದು ಮನವಿ ಮಾಡಿದರು.

ಕೋವಿಡ್ ಕಾಲದಲ್ಲಿ ‌ಜನರ ನೆರವಿಗೆ ನಿಂತಿದ್ದ ಕಾಂಗ್ರೆಸ್‌. ನಾನು ಮಾಲೂರಿಗೆ ಬಂದು ತರಕಾರಿ ಖರೀದಿಸಿ ರೈತರಿಗೆ ನೆರವಾದೆ. ಕೋವಿಡ್‌ನಿಂದ ಮೃತರಾದ ಬಿಜೆಪಿ ಸಂಸದರಾಗಿದ್ದ ಸುರೇಶ್ ಅಂಗಡಿ ಹೆಣವನ್ನು ದೆಹಲಿಯಿಂದ ತರಲೂ ಸಾಧ್ಯವಾಗಲಿಲ್ಲ. ನನ್ನ ತಮ್ಮ ಡಿ.ಕೆ.ಸುರೇಶ್ ತನ್ನ ಜೀವ ಲೆಕ್ಕಿಸದೆ ಕೋವಿಡ್‌ನಿಂದ ಮೃತರಾದವರನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲು ನೆರವಾದ‌ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ವೇಳೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಾವು ಪೂರೈಸಿದ್ದೇವೆ. ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಜಾರಿ ಮಾಡುತ್ತಿದ್ದೇವೆ. ಈಗಾಗಲೇ 15 ಸಾವಿರ ಕೋಟಿ ಖರ್ಚಾಗಿದೆ. ಕೆ.ಸಿ.ವ್ಯಾಲಿ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ‌ ಮಾಡಿದ್ದೇವೆ. ಬಿಜೆಪಿಯಿಂದ ಏನಾದರೂ ಲಾಭವಾಗಿದೆಯೇ ತಮ್ಮ ಆದಾಯ ದ್ವಿಗುಣಗೊಂಡಿದೆಯಾ ನಿಮ್ಮ ಖಾತೆಗೆ ಹಣ ಬಂತಾ ಮೋದಿ ಗಾಳಿ ಇದೆಯಾ’ ಎಂದು ಅವರು ಪ್ರಶ್ನಿಸಿದರು.
‘ಕೋಲಾರದಲ್ಲಿ ತಮ್ಮ ಅಭ್ಯರ್ಥಿ ಗೌತಮ್ ಅಲ್ಲ. ಸಿದ್ದರಾಮಯ್ಯ,‌ ನಾನು,‌ ಖರ್ಗೆ ಅಭ್ಯರ್ಥಿ ಎಂದು ಭಾವಿಸಿ. ಇಲ್ಲಿನ ಜನರ ಸ್ವಾಭಿಮಾನವನ್ನು ಉಳಿಸಬೇಕು ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಕೋಲಾರ‌ ಕಾಂಗ್ರೆಸ್‌ನ ಭದ್ರಕೋಟೆ. 1952ರಿಂದ ಗೆಲ್ಲುತ್ತಾ ಬಂದಿದ್ದೇವೆ. ಕಳೆದ ಬಾರಿ ವ್ಯತ್ಯಾಸದಿಂದಾಗಿ ಸೋಲಾಯಿತು ಎಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ನಾವೆಲ್ಲಾ ಸೇರಿ ಗೌತಮ್‌ ಅವರನ್ನು ಗೆಲ್ಲಿಸಲು ಶಪಥ ಮಾಡಿದ್ದೇವೆ. ಬಿಸಿಲು ಇದ್ದರೂ ಜನ ಬಹಳ ಸಂಖ್ಯೆಯಲ್ಲಿ ಬಂದಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ನಾವೇ ನಿಮ್ಮ ಮನೆ‌ ಬಾಗಿಲಿಗೆ ಬರುತ್ತೇವೆ’ ಎಂದು ಹೇಳಿದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ‘ಮಲ್ಲೇಶ್ ಬಾಬು ವಿರುದ್ಧ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ನಾನು ಎರಡು ಬಾರಿ ಗೆದ್ದಿದ್ದೇನೆ. ನೀವೆಲ್ಲಾ ಸೇರಿ ಮೂರನೇ ಬಾರಿ ಸೋಲಿಸಿ‌. ಶ್ರೀಮಂತ ಮಲ್ಲೇಶ್ ಬಾಬು ಬೇಕೋ, ಬಡವ ಗೌತಮ್ ಬೇಕೋ ನಿರ್ಧರಿಸಿ
ಕ್ಷೇತ್ರದಲ್ಲಿ ಬಲಗೈ ಸಮುದಾಯದ ಮತಗಳು ಹೆಚ್ಚು ಇದೆ. ಹೀಗಾಗಿಯೇ, ಅಭ್ಯರ್ಥಿ ಕೊಡಿ ಎಂದು ಕೋರಿದ್ದೆವು. ಆದರೆ, ಸಾಮಾಜಿಕ ‌ನ್ಯಾಯದ ಪ್ರಕಾರ ಈಗ ಟಿಕೆಟ್ ಹಂಚಲಾಗಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕಳೆದ ಬಾರಿ ನಾವು ಜೆಡಿಎಸ್ ಜೊತೆ ಸೇರಿ ಯಾಮಾರಿದೆವು. ಕೇವಲ 1 ಸ್ಥಾನ ಪಡೆದೆವು. ಇದೇ ಗತಿ ಈ ಬಾರಿ ಬಿಜೆಪಿಗೆ ಬರಲಿದೆ ಎಂದು ನುಡಿದರು

ಬಳಿಕ ಡಿ.ಕೆ.ಶಿವಕುಮಾರ್‌ ಅವರು ಪ್ರಜಾಧ್ವನಿ ಬಸ್‌ ಏರಿ ಕಾಲೇಜು ವೃತ್ತ ತಲುಪಿದರು. ವಾಲ್ಮೀಕಿಗೆ ಮಾಲಾರ್ಪಣೆ ಮಾಡಿ ಅಲ್ಲಿ ಯಾತ್ರೆ ಕೊನೆಗೊಂಡಿತು ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಶಿಡ್ಲಘಟ್ಟ ರಾಜೀವ್ ಗೌಡ, ಪುಟ್ಟು ಅಂಜಿನಪ್ಪ, ಕಾಂಗ್ರೆಸ್‌ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಕೆ.ಜಯದೇವ್, ಆದಿನಾರಾಯಣ ಇದ್ದರು‌.

Ramesh Babu

Journalist

Recent Posts

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣ: ಕತ್ತಲಲ್ಲಿ ಪ್ರಯಾಣಿಸುತ್ತಿದ್ದವರ ಬದುಕಲ್ಲಿ ಶಾಶ್ವತ ಕತ್ತಲು ಮೂಡಿಸಿದ ಜವರಾಯ: ಎಚ್ಚೆತ್ತ ನಗರಸಭೆ ಬೀದಿ ದೀಪ ಅಳವಡಿಕೆ

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…

46 seconds ago

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ…….

ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…

4 hours ago

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

1 day ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

1 day ago

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ ಪ್ರಕಟ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಗೆ 625ಕ್ಕೆ 622 ಅಂಕ: ನಮ್ಮ ತಪಸ್ಸಿಗೆ ಸಿಕ್ಕ ಯಶಸ್ಸು- ಶಾಲಾ ಸಂಸ್ಥಾಪಕ ಶ್ರೀನಿವಾಸ್ ಮೂರ್ತಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…

2 days ago

ಬಡಪಾಯಿ ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಆರೋಪ

ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ…

2 days ago