ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್” ಆಗಿ ಬಳಸಿಕೊಂಡ ಕರಾಳ ಇತಿಹಾಸ ದೇಶ ಮರೆತಿಲ್ಲ- ಬಿಜೆಪಿ‌ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ,

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು “ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್” ಆಗಿ ಬಳಸಿಕೊಂಡ ಕರಾಳ ಇತಿಹಾಸವನ್ನು ದೇಶ ಮರೆತಿಲ್ಲ. ಸಿಬಿಐಗೆ ಏಳೆಂಟು ಪ್ರಕರಣಗಳನ್ನು ಕೊಟ್ಟೆವು ಎಂದು ಹೇಳುತ್ತೀರಿ, ಆದರೆ ಅರ್ಕಾವತಿ ಲೇಔಟ್ ರೀ-ಡೂ ಹಗರಣ, ಕೆಂಪಣ್ಣ ಆಯೋಗದ ವರದಿ ಏನಾಯಿತು? ಅದನ್ನು ಮುಚ್ಚಿ ಹಾಕಲು ಎಸಿಬಿ ರಚಿಸಿ, ಲೋಕಾಯುಕ್ತದ ಕತ್ತು ಹಿಸುಕಿದ್ದು ಯಾರು? ಎಂದು ಸಿಎಂ ಸಿದ್ದರಾಮಯ್ಯನವರನ್ನು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ….

ಬಿಜೆಪಿ ಅಧಿಕಾರದಲ್ಲಿದ್ದಾಗ ಪಾರದರ್ಶಕತೆಗೆ ಆದ್ಯತೆ ನೀಡಿದೆ, ಈಗಿನ ನಿಮ್ಮ ಸರ್ಕಾರಕ್ಕೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣಗಳ ತನಿಖೆಗಳಿಂದ ತಮ್ಮ ಕುರ್ಚಿ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಭಯ ನಿಮಗೆ ಶುರುವಾಗಿರಬಹುದು! ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಿಡಿಕಾರಿದೆ.

ಬಳ್ಳಾರಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ಅದೇ ಜಿಲ್ಲೆಯ ಜನರ ಮತ ಪಡೆದು ಗೆದ್ದ ಜನಪ್ರತಿನಿಧಿಗಳನ್ನು ಗೌರವಿಸುವುದನ್ನು ಕಲಿಯಲಿ. ನ್ಯಾಯಾಲಯದ ಆದೇಶಗಳನ್ನು ಬಿಜೆಪಿ ಮೇಲೆ ಹೊರಿಸುವುದು ಮೂರ್ಖತನ. ಅಂದು ಸಿದ್ದರಾಮಯ್ಯನವರು ಬಳ್ಳಾರಿಯಲ್ಲಿ ಸಭೆಗೆ ಜಾಗ ಸಿಗಲಿಲ್ಲ ಎಂದು ಹಳಹಳಿಸುತ್ತಿದ್ದಾರೆ. ಆದರೆ ಇಂದು ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಸದಂತೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಹೇರುವುದು, ನಮ್ಮ ಕಾರ್ಯಕರ್ತರನ್ನು ಬಂಧಿಸುವುದು ಯಾವ ಪ್ರಜಾಪ್ರಭುತ್ವ? ಇದು ಅಪ್ಪಟ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲದೆ ಮತ್ತೇನು? ಎಂದು ಪ್ರಶ್ನೆ ಮಾಡಿದೆ….

ಸಂವಿಧಾನದ ಹೆಸರಿನಲ್ಲಿ ಅಧಿವೇಶನ ಕರೆದು, ಅಲ್ಲಿ ಕೇವಲ ಕೇಂದ್ರ ಸರ್ಕಾರವನ್ನು ದೂಷಿಸಲು ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಸಮಯ ವ್ಯರ್ಥ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಜನರ ಜ್ವಲಂತ ಸಮಸ್ಯೆಗಳಾದ ಬರಗಾಲ, ರೈತರ ಆತ್ಮಹತ್ಯೆ, ಅಭಿವೃದ್ಧಿ ಕಾರ್ಯಗಳು ಮತ್ತು ಮೂಲಸೌಕರ್ಯದ ಬಗ್ಗೆ ಚರ್ಚಿಸಲು ನಿಮಗೆ ಪುರುಸೊತ್ತಿಲ್ಲ. ಕೇವಲ ರಾಜಕೀಯ ಪ್ರಹಸನಕ್ಕಾಗಿ ವಿಶೇಷ ಅಧಿವೇಶನ ಮಾಡುವುದೇ ನಿಮ್ಮ ಕಾಯಕ ಎನ್ನುವುದನ್ನು ನಾಡಿನ ಜನಸಾಮಾನ್ಯರೇ ಹೇಳುತ್ತಿದ್ದಾರೆ ಎಂದು ಹೇಳಿದೆ…

ಮನರೇಗಾ ಅಥವಾ ಯಾವುದೇ ಯೋಜನೆಯನ್ನು ಬಿಜೆಪಿಗರು ಹಾಳು ಮಾಡುತ್ತಿಲ್ಲ, ಬದಲಾಗಿ ಅದರಲ್ಲಿರುವ ಭ್ರಷ್ಟಾಚಾರವನ್ನು ತಡೆದು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕಾಂಗ್ರೆಸ್ ಕೇವಲ ಘೋಷಣೆಗಳಿಗೆ ಸೀಮಿತವಾಗಿತ್ತು ಎಂದು ತಿಳಿಸಿದೆ…

ಮೋದಿ ಸರ್ಕಾರವು ವಿಕಸಿತ ಭಾರತದ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಉದ್ಯೋಗ ಮತ್ತು ಭದ್ರತೆ ನೀಡುತ್ತಿದೆ. ಇದನ್ನು ಸಹಿಸಲಾಗದೆ ಕಾಂಗ್ರೆಸ್ಸಿಗರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ಯೋಜನೆಯ ಹೆಸರು ಬದಲಾವಣೆಯಲ್ಲ, ಹಣೆಬರಹವೇ ಬದಲಾಗಿದೆ. ಶ್ರಮಿಕ ಕಾರ್ಮಿಕರ ಬದುಕು ಬದಲಿಸುವ ಭರವಸೆಯ ಬೆಳಕಾಗಿದೆ ಎಂದು ಹೇಳಿದೆ..

ಸಿದ್ದರಾಮಯ್ಯನವರೇ, ಕುರ್ಚಿ ಉಳಿಸಿಕೊಳ್ಳಲು ಸಂವಿಧಾನದ ಹೆಸರಿನಲ್ಲಿ ನಾಟಕವಾಡುವುದನ್ನು ನಿಲ್ಲಿಸಿ, ನಿಮ್ಮ ಆಡಳಿತದಲ್ಲಿ ರಾಜ್ಯದ ಬೊಕ್ಕಸ ಬರಿದಾಗಿ, ಜನಪರ ಅಭಿವೃದ್ಧಿ ಶೂನ್ಯವಾಗಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ನಿಮ್ಮ ಅಸಮರ್ಥತೆಯ ಪರಮಾವಧಿ. ಜನರ ತೆರಿಗೆ ಹಣವನ್ನು ಹಗರಣಗಳಿಗೆ ಬಲಿ ಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದೆ…

ಅಭಿವೃದ್ಧಿ ಮರೆತು ಗೂಂಡಾಗಿರಿ ಮತ್ತು ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿರುವ ನೀವು, ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಆಡಳಿತ ವೈಫಲ್ಯ ಒಪ್ಪಿಕೊಂಡು ತಕ್ಷಣ ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗುವುದೇ ರಾಜ್ಯದ ಜನತೆಗೆ ನೀವು ಮಾಡುವ ದೊಡ್ಡ ಉಪಕಾರ ಎಂದು ಹೇಳಿದೆ….

Ramesh Babu

Journalist

Recent Posts

9 ತಿಂಗಳಲ್ಲಿ ಬಮೂಲ್ ಒಕ್ಕೂಟಕ್ಕೆ 60 ಕೋಟಿ ಲಾಭ: ಸಂಪೂರ್ಣ ರೈತರ ಖಾತೆಗೆ ಲಾಭಾಂಶ ಹಣ

ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ…

15 hours ago

ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತನೆ: ₹184 ಕೋಟಿ ಮೊತ್ತದ ಕೇಂದ್ರ ಸರ್ಕಾರದ ಯೋಜನೆಗೆ ಶೀಘ್ರವೇ ಅನುಮೋದನೆ – ಸಂಸದ ಡಾ.ಕೆ‌ ಸುಧಾಕರ್

ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, 'ಪ್ರಸಾದ್ 2.0' (PRASHAD…

15 hours ago

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು- ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ .ವಿ

ದೊಡ್ಡಬಳ್ಳಾಪುರ: ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು…

1 day ago

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ: ಉಚಿತ ಆರೋಗ್ಯ ಶಿಬರ ಮತ್ತು ರಕ್ತದಾನ ಶಿಬಿರ ಆಯೋಜನೆ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ ಹಿನ್ನೆಲೆ ಕರ್ನಾಟಕ ಮತ್ತು ಕೇರಳ ವಲಯದ CRPF ಬೆಂಗಳೂರು…

1 day ago

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ: ದೊಡ್ಡಬಳ್ಳಾಪುರಕ್ಕೆ ಕಳೆದ ಒಂದು ವಾರದಿಂದ ಬಾರದ ವಾಣಿಜ್ಯ ಸಿಲಿಂಡರ್ ಗಳು: ನಗರದ ಹೋಟೆಲ್ ಗಳು, ಘಾಟಿ ಕ್ಷೇತ್ರಕ್ಕೂ ತಟ್ಟಿದ ಬಿಸಿ: ಸೌದೆ ಒಲೆ ಮೊರೆ ಹೋದ ಜನ

ಮದ್ಯಪ್ರಾಚ್ಯಗಳ ದೇಶಗಳಲ್ಲಿ ನಡೆಯುತ್ತಿರುವ ಯುದ್ದಗಳಿಂದಾಗಿ ಎಲ್.ಪಿ.ಜಿ ಕೊರತೆ ದೇಶಕ್ಕೆ ಎದುರಾಗಿದೆ. ಹೋಟೆಲ್ ಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಅಭಾವ ಸೃಷ್ಟಿಯಾಗಿ…

1 day ago

ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆ: ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ- ಆಹಾರ ಸಚಿವ ಕೆ.ಎಚ್. ಮುನಿಯಪ್ಪ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವದ ಪರಿಸ್ಥಿತಿ ಸೃಷ್ಟಿಯಾಗಿರುವ ವರದಿಗಳ ನಡುವೆ ಗೃಹ ಬಳಕೆಯ…

2 days ago