Categories: ಲೇಖನ

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ……..

ಕರ್ನಾಟಕ ರತ್ನ……..

ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಪಟ್ಟಿಯನ್ನೊಮ್ಮೆ ಗಮನಿಸಿ……..

ರಾಷ್ಟ್ರಕವಿ ಕುವೆಂಪು, ( ಸಾಹಿತ್ಯ)
ಡಾಕ್ಟರ್ ರಾಜ್ ಕುಮಾರ್, ( ಸಿನಿಮಾ )
ಶ್ರೀ ಎಸ್. ನಿಜಲಿಂಗಪ್ಪ,
( ರಾಜಕೀಯ)
ಡಾಕ್ಟರ್ ಸಿಎನ್ಆರ್ ರಾವ್,
( ವಿಜ್ಞಾನ )
ಡಾಕ್ಟರ್ ದೇವಿ ಶೆಟ್ಟಿ,
( ವೈದ್ಯಕೀಯ)
ಶ್ರೀ ಭೀಮ್ ಸೇನ್ ಜೋಶಿ,
( ಸಂಗೀತ )
ಸಿದ್ದಗಂಗೆಯ ಶ್ರೀಗಳಾದ ಶಿವಕುಮಾರ ಸ್ವಾಮಿ,
( ಧಾರ್ಮಿಕ – ಸಮಾಜ ಸೇವೆ )
ಶ್ರೀ ದೇ. ಜವರೇಗೌಡ,
( ಸಾಹಿತ್ಯ }
ಶ್ರೀ ವೀರೇಂದ್ರ ಹೆಗ್ಗಡೆ,
( ಧಾರ್ಮಿಕ – ಸಮಾಜ ಸೇವೆ )
ಶ್ರೀ ಪುನೀತ್ ರಾಜಕುಮಾರ್,
( ಸಿನಿಮಾ )
ಶ್ರೀ ವಿಷ್ಣುವರ್ಧನ್,
( ಸಿನಿಮಾ )
ಶ್ರೀಮತಿ ಬಿ. ಸರೋಜಾ ದೇವಿ,
( ಸಿನಿಮಾ )…………

ಇದರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸೇರಿದ ನಾಲ್ಕು ಜನ, ಧಾರ್ಮಿಕ, ಸಮಾಜ ಸೇವಾ ಕ್ಷೇತ್ರಕ್ಕೆ ಸೇರಿದ ಇಬ್ಬರು, ಸಾಹಿತ್ಯ ಕ್ಷೇತ್ರದ ಇಬ್ಬರು, ರಾಜಕೀಯ, ಸಂಗೀತ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ತಲಾ ಒಬ್ಬರು ಸೇರಿ ಒಟ್ಟು 12 ಜನರಿಗೆ ಕರ್ನಾಟಕ ರತ್ನ ನೀಡಲಾಗಿದೆ

ಸುಮಾರು 33 ವರ್ಷಗಳ ಅವಧಿಯಲ್ಲಿ ಅಂದರೆ 1992 ರಲ್ಲಿ ಪ್ರಥಮ ಬಾರಿಗೆ ಕುವೆಂಪು ಮತ್ತು ರಾಜಕುಮಾರ್ ರವರಿಗೆ ನೀಡಿದ ನಂತರ ಇಲ್ಲಿಯವರೆಗೆ ಕೇವಲ 12 ಜನರಿಗೆ ಮಾತ್ರ ಅತ್ಯುನ್ನತ ಮತ್ತು ಅಪರೂಪದ ಈ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿದೆ.

ಕರ್ನಾಟಕ ರತ್ನ ಎಂದರೆ ಕರ್ನಾಟಕದ ಅತ್ಯಮೂಲ್ಯವಾದ, ಅತ್ಯಂತ ಬೆಲೆ ಬಾಳುವ, ಸ್ಪಟಿಕದಂತಹ ಶುಭ್ರತೆಯ, ವಜ್ರದಂತೆ ಹೊಳೆಯುವ ಅಂದರೆ ಅತ್ಯಂತ ಮಹತ್ವದ ವ್ಯಕ್ತಿ ಎಂದು ಕರೆಯಬಹುದಾದವರು, ಕರ್ನಾಟಕದ ಮುತ್ತುಗಳು.

ಈ ರತ್ನಗಳು ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆ, ಸಂಸ್ಕೃತಿಗೆ ಅತ್ಯಂತ ಮಹತ್ವದ ಕೊಡುಗೆ ಕೊಟ್ಟಿರಬೇಕು ಮತ್ತು ಒಂದು ಇಡೀ ವರ್ತಮಾನದ ಮತ್ತು ಭವಿಷ್ಯದ ಪೀಳಿಗೆಯನ್ನು ತಮ್ಮ ವ್ಯಕ್ತಿತ್ವ, ನಡವಳಿಕೆಗಳಿಂದ ಪ್ರೇರೇಪಿಸಿರಬೇಕು,
ಶ್ರೀ ಸಾಮಾನ್ಯನಿಗೆ ಮಾಡಲಾಗದ ಬೃಹತ್ ಸಾಧನೆ ಮಾಡಿರಬೇಕು. ಆ ಮೂಲಕ ಅವರೊಬ್ಬ ಕರ್ನಾಟಕ ರತ್ನ ಎಂಬ ಬಿರುದು ಪ್ರಶಸ್ತಿ ಸನ್ಮಾನಕ್ಕೆ ಸಾರ್ಥಕ ಹೆಸರಾಗಿರಬೇಕು.

ಒಂದು ರಾಜ್ಯದ ಒಟ್ಟು ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ವಿಭಾಗಗಳನ್ನು ವಿಂಗಡಿಸಿ ನೋಡುವುದಾದರೆ,
ಕೃಷಿ, ಸಮಾಜ ಸೇವೆ, ರಾಜಕೀಯ, ಆಡಳಿತ, ಶಿಕ್ಷಣ, ವೈದ್ಯಕೀಯ, ನ್ಯಾಯಾಂಗ, ವಿಜ್ಞಾನ, ತಂತ್ರಜ್ಞಾನ, ಪತ್ರಿಕೋದ್ಯಮ, ಹೋರಾಟ, ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ಸಂಶೋಧನೆ, ಜಾನಪದ, ರಂಗಭೂಮಿ, ನಂತರದಲ್ಲಿ ಮನರಂಜನಾ ಉದ್ಯಮವಾದ ಸಿನಿಮಾ ಕ್ಷೇತ್ರ ಆ ಸಾಲಿನಲ್ಲಿ ನಿಲ್ಲುತ್ತದೆ.

ಇಂತಹ ವ್ಯವಸ್ಥೆಯಲ್ಲಿ ನಾಲ್ಕು ಜನ ಸಿನಿಮಾ ಕ್ಷೇತ್ರದವರಿಗೆ ಕರ್ನಾಟಕ ರತ್ನ ಕೊಟ್ಟಿರುವುದು ಅವರ ಗ್ಲಾಮರ್ ಗಾಗಿಯೋ ಅಥವಾ ಜನಪ್ರಿಯತೆಗಾಗಿಯೋ ಅಥವಾ ಅವರ ಅಭಿಮಾನಿಗಳ ಸಂಖ್ಯೆಯನ್ನಾಧರಿಸಿಯೋ ಅಥವಾ ಅವರ ಮೇಕಪ್ ಸಹಿತ ಸೌಂದರ್ಯಕ್ಕಾಗಿಯೋ ಅಥವಾ ಅವರ ಸಕಲಕಲಾ ನಟನಾ ಕೌಶಲ್ಯಕ್ಕಾಗಿಯೋ ಇರಬಹುದೇ.

ಏಕೆಂದರೆ ಇಲ್ಲಿನ ನೆಲದ ವಿಷಯ ಬಂದಾಗ ರಾಜಕೀಯ ಮತ್ತು ಹೋರಾಟಗಾರರು, ಸಮಾಜ ಸೇವಕರು, ಆಡಳಿತಗಾರರು, ಮುಂಚೂಣಿಗೆ ಬಂದರೆ, ಜಲದ ವಿಷಯ ಬಂದಾಗ ರಾಜಕಾರಣಿಗಳು, ನೀರಾವರಿ ತಜ್ಞರು, ಕೃಷಿಕರು ಮುಂಚೂಣಿಗೆ ಬರುತ್ತಾರೆ. ಭಾಷೆಯ ವಿಷಯ ಬಂದಾಗ ಸಹಜವಾಗಿಯೇ ಸಾಹಿತ್ಯ ಕ್ಷೇತ್ರದ ದಿಗ್ಗಜರು ಮುಂಚೂಣಿಗೆ ಬರುತ್ತಾರೆ. ಅವರೊಂದಿಗೆ ಸಂಗೀತ, ಕಲೆ ಮತ್ತು ಸಿನಿಮಾ ಕ್ಷೇತ್ರದವರು ಅದರ ಹಿನ್ನೆಲೆಯಲ್ಲಿರುತ್ತಾರೆ. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಮಾತ್ರ ಡಾಕ್ಟರ್ ರಾಜ್ ಕುಮಾರ್ ಅವರು ಮುಂಚೂಣಿಯಲ್ಲಿದ್ದರು‌. ಹಾಗೆಯೇ ಸಾಂಸ್ಕೃತಿಕವಾಗಿ ವಿಜ್ಞಾನಿಗಳು, ಶಿಕ್ಷಕರು, ವೈದ್ಯರು ಈ ಸಾಲಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಮನರಂಜನೆಯೇ ಮುಖ್ಯವಾಗಿ, ಜೊತೆಗೆ ಸಂಭಾವನೆ ರೂಪದ ಹಣ ಪಡೆದು, ಮಾರುಕಟ್ಟೆಯ ಅಳತೆ ಗೋಲಿನ ಮೇಲೆಯೇ ವಾಣಿಜ್ಯ ಉದ್ದೇಶದ ಸಿನಿಮಾ ಕ್ಷೇತ್ರದ ಮಂದಿಯನ್ನು ಹೆಚ್ಚು ಹೆಚ್ಚು ಕರ್ನಾಟಕ ರತ್ನ ಪ್ರಶಸ್ತಿಗೆ ಪರಿಗಣಿಸುವುದು ಎಷ್ಟು ಸರಿ. ಭಾಷೆಯ ಬೆಳವಣಿಗೆಗೆ ಅವರ ಕೊಡುಗೆಯೂ ಸಾಕಷ್ಟಿದೆ. ಅದನ್ನು ಸ್ಮರಿಸುತ್ತಾ, ಜೊತೆಗೆ ಸಿನಿಮಾ ಕ್ಷೇತ್ರದಿಂದ ಸಾಮಾಜಿಕ ಪರಿವರ್ತನೆ ಅಥವಾ ಒಳ್ಳೆಯ ಸಂದೇಶಗಳು ಶೇಕಡ 30% ರಷ್ಟು ಮಾತ್ರ ಇದ್ದರೆ, ಇನ್ನೊಂದು ಅಂದಾಜಿನ ಪ್ರಕಾರ ಸಾಮಾಜಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ಸಮಾಜದಲ್ಲಿ ನೈತಿಕತೆಯ ಕುಸಿತ, ಹಿಂಸೆ, ಅಪರಾಧ ಮತ್ತು ಅನೈತಿಕತೆ ಹೆಚ್ಚಾಗಲು, ಯುವಜನ ದಾರಿ ತಪ್ಪಲು ಸಿನಿಮಾಗಳು ಕೂಡ ಕಾರಣವಾಗಿದೆ ಎಂಬುದನ್ನು ಮರೆಯಬಾರದು. ಕೆಟ್ಟ ಭಾಷಾ ಪ್ರಯೋಗಕ್ಕೆ ಸಿನಿಮಾ ಕ್ಷೇತ್ರವೂ ದೊಡ್ಡ ಕೊಡುಗೆ ನೀಡಿದೆ ಎಂಬುದನ್ನು ಮರೆಯದಿರಿ.

ಸಿನಿಮಾ ಕ್ಷೇತ್ರವೆಂಬುದು ಒಂದು ಉದ್ಯಮ. ಅಲ್ಲಿ ಹಣಕಾಸಿನ ವ್ಯವಹಾರವೇ ಮುಖ್ಯವಾಗಿರುತ್ತದೆ. ಉಚಿತ ಸೇವೆಗೆ, ಸಮಾಜ ಸೇವೆಗೆ ಅಲ್ಲೇನು ಅಂತಹ ಅವಕಾಶವಿಲ್ಲ. ಧಾರ್ಮಿಕ ಕ್ಷೇತ್ರದ ಮಠ ಮಾನ್ಯಗಳಾದರೆ ಸಮಾಜ ಸೇವೆ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ ನಿರ್ಮಾಣ ಮಾಡಲು ಅವಕಾಶಗಳ, ಚಿಂತನೆಗಳ ಸಾಧ್ಯತೆಗಳಿರುತ್ತವೆ. ಸಿನಿಮಾದಲ್ಲಿ ಆ ಸಾಧ್ಯತೆ ತುಂಬಾ ಕಡಿಮೆ.

ಕರ್ನಾಟಕ ರತ್ನ ಪ್ರಶಸ್ತಿ ಎಂಬುದು ಜನಮಾನಸದ ಆಳದಲ್ಲಿ ಇಡೀ ನಾಡಿನ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಬಿಂಬಿಸುವಂತಿರಬೇಕು. ಅದು ಒಂದು ಪೀಳಿಗೆಯನ್ನು ಸ್ಪೂರ್ತಿದಾಯಕವನ್ನಾಗಿ ಮಾಡುವಂತಿರಬೇಕು. ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನ ಶುದ್ಧತೆಯನ್ನು ಎತ್ತಿ ಹಿಡಿಯುವಂತಿರಬೇಕು. ಸಮ ಸಮಾಜದ ಆಶಯವನ್ನು, ಸರ್ವ ಜನಾಂಗದ ಚಿಂತನಾ ಶಕ್ತಿಯನ್ನು, ನೈತಿಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಹರಡುವಂತಿರಬೇಕು. ಆಗ ಮಾತ್ರ ಕರ್ನಾಟಕ ರತ್ನ ಎಂಬ ಪ್ರಶಸ್ತಿಯ ಮೌಲ್ಯ, ಪ್ರಶಸ್ತಿ ವಿಜೇತರ ವ್ಯಕ್ತಿತ್ವಕ್ಕೆ ಒಂದು ಅರ್ಥ ಬರುತ್ತದೆ. ಕೇವಲ ಅಭಿನಯ ಚತುರತೆ ಅಥವಾ ಹೆಚ್ಚು ಜನರನ್ನು ಮನರಂಜಿಸಿದ್ದಾರೆ ಎಂಬ ಕಾರಣಕ್ಕಾಗಿ ಹೆಚ್ಚು ಹೆಚ್ಚು ಸಿನಿಮಾ ನಟನಟಿಯರಿಗೆ ಪ್ರಶಸ್ತಿ ಕೊಟ್ಟರೆ ಅದೊಂದು ಸಿನಿಮಾ ಕ್ಷೇತ್ರದ ಪ್ರಶಸ್ತಿ ಆಗಬಹುದು.

ಈ ಕರ್ನಾಟಕ ರತ್ನ ಪ್ರಶಸ್ತಿ ಪ್ರಾರಂಭವಾಗಿ 33 ವರ್ಷಗಳ ನಂತರ ಇನ್ನೂ ಕೆಲವು ಸಾಧಕರ ಹೆಸರುಗಳು ಆ ಪಟ್ಟಿಯಲ್ಲಿ ಇಲ್ಲದಿರುವುದು ಬೇಸರ ಮೂಡಿಸುತ್ತದೆ. ಅಲ್ಲದೆ ಈ ಪ್ರಶಸ್ತಿಯನ್ನು ನಿಯಮಿತವಾಗಿ ಮತ್ತು ಬದುಕಿರುವಾಗಲೇ ಅಂತಹ ವ್ಯಕ್ತಿಗಳಿಗೆ ನೀಡಿದರೆ ಅದರಿಂದ ಪ್ರಶಸ್ತಿ ಪಡೆದಿವರಿಗೂ ಸಂತೋಷವಾಗುತ್ತದೆ ಮತ್ತು ಇನ್ನಷ್ಟು ಸಾಧಿಸಲು ಪ್ರೇರಣೆ ನೀಡುತ್ತದೆ. ಅವರನ್ನು ಸಂದರ್ಶಿಸಿ ಜನರಿಗೆ ಅವರ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡಬಹುದು.

ಈಗ ಪ್ರಶಸ್ತಿ ಪಡೆದಿರುವವರ ಬಗ್ಗೆ ಅಂತಹ ಅಸಮಾಧಾನವೇನು ಇಲ್ಲ. ಎಲ್ಲರಿಗೂ ಅಭಿನಂದನೆಗಳು. ಆದರೆ ಮುಂದಿನ ಬಾರಿ ಪ್ರಶಸ್ತಿ ಕೊಡುವಾಗ ಹೆಚ್ಚು ಪರಿಪೂರ್ಣ ವ್ಯಕ್ತಿತ್ವ, ಸಾಧನೆ, ಪ್ರೇರಣೆ, ಪ್ರಭಾವ ಮುಂತಾದುವುಗಳನ್ನು ಪರಿಗಣಿಸಿ ಅಂತಹ ವ್ಯಕ್ತಿಗಳಿಗೆ ನೀಡಿದರೆ ಉತ್ತಮ ಎನ್ನುವ ಒಂದು ಅಭಿಪ್ರಾಯ ಅಷ್ಟೇ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

5 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

8 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

8 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

21 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

22 hours ago