Categories: ಲೇಖನ

ಅನುಭವದ ಅನುಭಾವ……..

ಅನುಭವದ ಅನುಭಾವ……..

ದೈವತ್ವ ಮತ್ತು ರಾಕ್ಷಸತ್ವದ ಸಂಘರ್ಷದಲ್ಲಿ ಹುಟ್ಟುವ ಅಮೃತತ್ವ ಎಂಬ ಅನುಭಾವ….

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾ ಒಲಿದೆ…
ಅಕ್ಕಮಹಾದೇವಿ,

ಆಸೆಯೇ ದುಃಖಕ್ಕೆ ಮೂಲ….
ಗೌತಮ ಬುದ್ಧ,

ಕಾಯಕವೇ ಕೈಲಾಸ….
ಬಸವಣ್ಣ,

ಸತ್ಯಮೇವ ಜಯತೇ….
ಮಹಾತ್ಮ ಗಾಂಧಿ,

ನಿನಗೆ ಮರ್ಯಾದೆ ಇಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನು ಸಹ ಬಿಡಬೇಡ….
ಬಾಬಾ ಸಾಹೇಬ್ ಅಂಬೇಡ್ಕರ್,

ಇಲ್ಲಿ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲ, ಮತ್ತು ನಾಶ ಪಡಿಸಲು ಸಾಧ್ಯವಿಲ್ಲ, ಎಲ್ಲವೂ ರೂಪಾಂತರ….
ವೇದವ್ಯಾಸರು,

ಹೀಗೆ ಇನ್ನೂ ಅನೇಕ ದಾರ್ಶನಿಕರು ತಾವು ಕಂಡ ಅನುಭವದ ಸತ್ಯಗಳನ್ನು ಅನುಭಾವಿಸಿ ಹೇಳಿದ್ದಾರೆ…..

ಇವು ಸಾರ್ವಕಾಲಿಕ ಹೇಳಿಕೆಗಳಾಗಲು ಅವರು ಅನುಭವಿಸಿದ ಬದುಕು ತುಂಬಾ ಕಾಠಿಣ್ಯದಿಂದ, ಗೊಂದಲದಿಂದ, ನೋವಿನಿಂದ, ನಿರಾಸೆಯಿಂದ, ಹತಾಶೆಯಿಂದ, ಪುಟಿದೇಳುವ ಜೀವನೋತ್ಸಾಹದಿಂದ, ಅಪಾರ ತಾಳ್ಮೆಯಿಂದ ಕೂಡಿರುತ್ತದೆ. ಎಷ್ಟೋ ಬಾರಿ ಸಾವಿನ ದವಡೆಯಿಂದ, ಅವಮಾನದ ಅಂಚಿನಿಂದ ನುಸುಳಿ ಬಂದಿರುತ್ತಾರೆ. ಉತ್ತರವಿಲ್ಲದ, ಪರಿಹರಿಸಲಾಗದ ಸಂಘರ್ಷಗಳು ಅವರನ್ನು ಕಾಡಿರುತ್ತವೆ.

ಅವರಲ್ಲಿ ಮೂಡಿದ ದೈವತ್ವದ ಗುಣಲಕ್ಷಣಗಳಿಗೆ ಕಾರಣ ಅವರು ಹೋರಾಡಿರುವುದು ಸಮಾಜ ಮತ್ತು ತಮ್ಮೊಳಗಿನ ರಾಕ್ಷಸತ್ವದ ವಿರುದ್ಧ. ಹಾಗಿದ್ದಾಗ ಮಾತ್ರವೇ ಈ ಚಿಂತನೆಗಳು ಮೂಡಲು ಸಾಧ್ಯ. ಸಹಜ ಪರಿಸ್ಥಿತಿಯಲ್ಲಿ ಅಥವಾ ಸಣ್ಣ ಪುಟ್ಟ ಕಷ್ಟಗಳಿಗೆ ಈ ರೀತಿಯ ಶಕ್ತಿ ಇರುವುದಿಲ್ಲ.

ಉದಾಹರಣೆಗೆ ಅಕ್ಕಮಹಾದೇವಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ,

ಸಾವು ಇರದ, ಕೇಡು ಬಯಸದ, ರೂಪವಿರದ ಚೆಲುವ ನನ್ನ ಗಂಡನಾಗಬೇಕು ಎನ್ನುತ್ತಾರೆ.
ಈ ವಾಕ್ಯಗಳನ್ನು ಗಮನಿಸಿದಾಗ ನನಗೆ
” ಕ್ಷಣಿಕ ಬದುಕಿನ ಮನುಷ್ಯ ಜೀವವನ್ನು ಪ್ರೀತಿಸುವುದು ವ್ಯರ್ಥ, ಎಷ್ಟೇ ಆದರೂ ಅದು ಆಳಿಯುತ್ತದೆ, ಅದರಿಂದ ವಿರಹದ ವೇದನೆ ಏಕೆ ” ಎಂಬ ಭಯದಿಂದ ಅಥವಾ ಅರಿವಿನಿಂದ ಮೂಡಿದ ಸ್ಥಿತಪ್ರಜ್ಞತೆ ಇರಬೇಕು,
ಅಥವಾ,
ಅಕ್ಕಮಹಾದೇವಿ ಪುರುಷ ಸಮಾಜದಿಂದ ಬಹಳ ನಿರೀಕ್ಷಿಸಿ ಅಪಾರ ಶೋಷಣೆಗೆ ಒಳಗಾಗಿ ತೀವ್ರ ನಿರಾಸೆಗೆ ಒಳಗಾಗಿರಬೇಕು. ಇವರ ಸಹವಾಸವೇ ಬೇಡ ” ಎಂಬ ಅರ್ಥದಲ್ಲೂ ಹೇಳಿರಬಹುದು.
ಅಥವಾ
ಆ ರೀತಿಯ ಇನ್ನೇನಾದರು ಘಟನೆ ಆಕೆಯ ಜೀವನದಲ್ಲಿ ಅಥವಾ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರಿರಬೇಕು.

ಗೌತಮ ಬುದ್ಧ ಎಲ್ಲ ರೀತಿಯ ಆಸೆಗಳು ದುರಾಸೆಗಳಾಗಿ ಬದುಕನ್ನು ಸರ್ವನಾಶದ ದಿಕ್ಕಿಗೆ, ಅಪಾರ ನೋವಿಗೆ ದೂಡುವುದನ್ನು ಬಹುಶಃ ಅನುಭವಿಸಿಯೇ ಹೇಳಿರಬೇಕು. ಆತ ದೇಹ ಮನಸ್ಸುಗಳನ್ನು ಅಪಾರವಾಗಿ ದಂಡಿಸಿ, ಧ್ಯಾನಿಸಿ, ಚಿಂತಿಸಿ ಈ ತೀರ್ಮಾನಕ್ಕೆ ಬಂದಿರಬೇಕು.

ಮಹಾವೀರರು ಪ್ರತಿಪಾದಿಸಿದ ಅಹಿಂಸೆಯ ಮಹತ್ವದ ಹೇಳಿಕೆಗೆ ಅವರು ಆ ಕಾಲದಲ್ಲೇ ಎಷ್ಟು ಹಿಂಸೆಯನ್ನು ನೋಡಿದ್ದಾರೋ ಏನೋ,

ಗಾಂಧಿಯವರ ಸತ್ಯದೊಂದಿಗಿನ ಪ್ರಯೋಗದಲ್ಲಿ ಅದೆಷ್ಟು ಸುಳ್ಳುಗಾರರು ಅವರನ್ನು ವಂಚಿಸಿರುವ ನೋವು ಕಾಡಿದೆಯೋ,

ಅಂಬೇಡ್ಕರ್ ಅವರ ಚಪ್ಪಲಿಯ ಹೇಳಿಕೆ,ಅವರು ಅನುಭವಿಸಿದ ಸಾಮಾಜಿಕ ಅವಮಾನದ ಅತ್ಯಂತ ಆಳ ನೋವಿನ ಪ್ರತಿಬಿಂಬವೇ ಆಗಿರಬೇಕು. ಇಲ್ಲದಿದ್ದರೆ ಆ ಮಾತುಗಳು ಅವರಿಂದ ದಾಖಲಾಗುತ್ತಿರಲಿಲ್ಲ.

ಕಾಯಕದ ಮಹತ್ವ, ಸಮಾನತೆಯ ಆಶಯ ಸಾರಿದ ಬಸವಣ್ಣ ಎಷ್ಟು ಮತ್ತು ಏನೇನು ಸಂಕಟಗಳನ್ನು ಅನುಭವಿಸಿದರೋ, ಅದು ಅವರಲ್ಲಿ ಎಷ್ಟು ಆಳದ ಗಾಯವನ್ನು ಉಂಟುಮಾಡಿದೆಯೋ,
ಹೀಗೆ,ಎಲ್ಲರೂ ತುಂಬಾ ಆಳವಾದ ಜೀವನಾನುಭವದಲ್ಲಿ ಬೆಂದಿರಬೇಕು ಮತ್ತು ನೊಂದಿರಬೇಕು.

ಈ ಎಲ್ಲವೂ ಅವರ ಬದುಕಿನ ಸಂಘರ್ಷದಿಂದ ಉಂಟಾದ ಚಿಂತನೆಯಲ್ಲಿ ಮೂಡಿದ ಅಮೃತಗಳೇ. ಬರಹಗಾರರು ಬಹಳಷ್ಟು ವಿಭಿನ್ನತೆಯಿಂದ ಅತ್ಯುತ್ತಮ ವಾಕ್ಯಗಳನ್ನು ಬರೆಯಬಹುದು. ಆದರೆ ‌ಸಾರ್ವಕಾಲಿಕ ಸತ್ಯಗಳನ್ನು ಬರೆಯಲು ತುಂಬಾ ತುಂಬಾ ಆಳದ ಅನುಭವ ಬೇಕಾಗುತ್ತದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಬದುಕೊಂದು ಯುದ್ದ ಭೂಮಿ,
ಅದೊಂದು ಪ್ರಯೋಗ ಶಾಲೆ,
ಕೆಲವರಿಗೆ ಸಹಜವಾಗಿ, ಮತ್ತೆ ಕೆಲವರಿಗೆ ಅಸಹಜವಾಗಿ ಜೀವನದ ಘಟನೆಗಳು ಸಂಭವಿಸುತ್ತಿರುತ್ತದೆ. ಅದಕ್ಕೆ ಪ್ರತಿಕ್ರಿಯಿಸುವ ರೀತಿಯೇ ನಮ್ಮೊಳಗಿನ ಸಾಮರ್ಥ್ಯವನ್ನು ಹೊರಹಾಕುತ್ತದೆ. ಆ ಹೊರ ಹಾಕುವಿಕೆಯೇ ಮಹಾತ್ಮರನ್ನು ಅಥವಾ ದೈವಿಕ ಶಕ್ತಿಯ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ.

ಆದ್ದರಿಂದ ನೀವು ಅನುಭವಿಸುವ ಕಷ್ಟಗಳು, ರಾಕ್ಷಸತ್ವದ ವಿರುದ್ಧ ಹೋರಾಟ ಕೆಲವೊಮ್ಮೆ ನಿಮ್ಮನ್ನು ದೈವತ್ವಕ್ಕೆ ಮುನ್ನಡೆಸಬಹುದು. ಆ ಹೋರಾಟ ಸಾಕಷ್ಟು ದೀರ್ಘಕಾಲ ಉಳಿಯಬಹುದು. ಧೃತಿಗೆಡದೆ ಅವುಗಳನ್ನು ಎದುರಿಸಿ ಜೀವದ ಕೊನೆಯ ಉಸಿರಿರುವವರೆಗೂ,
ಏನೇ ಏರಿಳಿತಗಳು ಬರಲಿ ಮುನ್ನುಗ್ಗಿ,
ನಿಮಗೂ ಸಹ ದೈವತ್ವದ ಎತ್ತರಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

1 ವರ್ಷ 4 ತಿಂಗಳ ಮಗುವಿನ ಕಣ್ಣು ದಾನ: ಸಾವಿನಲ್ಲೂ ಮಾನವೀಯತೆ ಮೆರೆದ ಕುಟುಂಬ

ದೊಡ್ಡಬಳ್ಳಾಪುರ: ನಗರದ ದೇವರಾಜನಗರ ನಿವಾಸಿಗಳಾದ ಭರತ್ ಅವರ 1 ವರ್ಷ 4 ತಿಂಗಳ ಮಗ ಪೋಷಕ್ ಆರೋಗ್ಯದ ವ್ಯತ್ಯಯದಿಂದ ವಿಧಿವಶರಾದ…

1 day ago

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣಕ್ಕೆ ‌ಪೂರಕ- ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಶಿಕ್ಷಣಕ್ಕೆ ‌ಪೂರಕವಾಗಿದೆ. ಇದನ್ನು ‌ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ…

1 day ago

ಫ್ರಿಡ್ಜ್ ಕ್ಲೀನ್ ಮಾಡುವಾಗ ವಿದ್ಯುತ್ ಶಾಕ್: ಮಹಿಳೆ ದುರ್ಮರಣ

ದೊಡ್ಡಬಳ್ಳಾಪುರ: ಫ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು…

2 days ago

“ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ”…….

" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ....." ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ.... ಇದಕ್ಕೆ ಅತ್ಯಂತ ನೈಜ…

2 days ago

ಎಲ್ರಿ ಅಧಿಕಾರಿಗಳು, ಜನರ ಸಮಸ್ಯೆ ಕೇಳೋದ್ಯಾರು..?- ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆ

ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್…

2 days ago

1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ಜೊತೆಗೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತಗಳ ಸರ್ವಾಂಗೀಣ ಅಭಿವೃದ್ಧಿಗಳಿಗೆ…

3 days ago