ಮೊಬೈಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಬನ್ನೇರುಘಟ್ಟ ಪೊಲೀಸರು, ಬೆಂಗಳೂರಿನ ಮಹಮ್ಮದ್ ಪಾಷಾ, ಮಹಮ್ಮದ್ ಉಮರ್, ಐಯಾನ್, ಮಹಮ್ಮದ್ ಸಲೀಂ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ಬೆಲೆ ಬಾಳುವ ವಿವಿಧ ಕಂಪನಿಗಳ 1,037 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಮೆಜೆಸ್ಟಿಕ್, ಶಿವಾಜಿನಗರ, ಎಂ.ಜಿ.ರೋಡ್ ಮತ್ತಿತರ ಜನದಟ್ಟಣೆ ಪ್ರದೇಶಗಳಲ್ಲಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಕದ್ದ ಮೊಬೈಲ್ ಗಳನ್ನು ಕಳ್ಳರ ಗುಂಪು, ಆರೋಪಿ ಮಹಮದ್ ಪಾಷಾನಿಗೆ ನೀಡುತ್ತಿತ್ತು. ಕದ್ದು ತಂದ ಮೊಬೈಲ್ ಗಳಿಗೆ ಆರೋಪಿಯು 2 ರಿಂದ 3 ಸಾವಿರ ಹಣ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬನ್ನೇರುಘಟ್ಟದ ಎಎಂಸಿ ಕಾಲೇಜು ಬಳಿ ಕದ್ದ ಮೊಬೈಲ್ಗಳನ್ನು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ.
ಕಳವು ಮಾಡಿದ ಮೊಬೈಲ್ಗಳನ್ನು ಬೆಂಗಳೂರಿನ ಹೆಗಡೆನಗರದ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟು ಚೆನ್ನೈ, ಕೇರಳದ ಮಂಜೇರಿಗೆ ಖಾಸಗಿ ಬಸ್ಗಳಲ್ಲಿ ಪಾರ್ಸಲ್ ಕಳುಹಿಸಿ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಪ್ರಾಪರ್ಟಿ ಪರೇಡ್ ನಡೆಯಿತು.
ನಾಲ್ಕು ಜನ ಮೊಬೈಲ್ ಕಳ್ಳರನ್ನು ದಸ್ತಗಿರಿ ಮಾಡಿ ಅವರಿಂದ 1037 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್, ಕ್ರೈಂ ಸಿಬ್ಬಂದಿಯ ಕಾರ್ಯವನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಆನೇಕಲ್ ವಿಭಾಗದ ಡಿಸಿಪಿ, ಬನ್ನೇರುಘಟ್ಟ ಪೊಲೀಸ್ ಇನ್ಸ್ ಪೆಕ್ಟರ್, ಕ್ರೈಂ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.