ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಪೌರ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿಸಿ ಜನರ ವಿಶ್ವಾಸ ಗಳಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ಕೆ.ಪರಮೇಶ್ ಹೇಳಿದರು.
ನಗರಸಭೆ ವತಿಯಿಂದ ನಗರದ ಜಗಜೀವನ ರಾಂ ಭವನದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪೌರಕಾರ್ಮಿಕರು ರಾಜ್ಯ ಮಟ್ಟದಲ್ಲಿ ಸಂಘಟಿತರಾದ ಪರಿಣಾಮ ಇಂದು ಎಸ್.ಎಫ್.ಸಿ ಅನುದಾನದಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ ಈಗ ಸ್ಥಳೀಯ ಸಂಸ್ಥೆಗಳು ಸದೃಢವಾಗಿದ್ದು, ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿವೆ. ಪೌರ ಕಾರ್ಮಿಕರಿಗೆ ಜೀವ ವಿಮೆ ಮಾಡಿಸುವ ಮೂಲಕ ಸರ್ಕಾರ ಅವರಿಗೆ ಜೀವನ ಭದ್ರತೆ ಕಲ್ಪಿಸಿದೆ. ಸರ್ಕಾರದ ವತಿಯಿಂದ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಲು ಕ್ರಮ ವಹಿಸಲಾಗುವುದು ಪೌರ ಕಾರ್ಮಿಕರರು ತಮ್ಮ ಸಮಸ್ಯೆಗಳ ಬಗ್ಗೆ ಅಕಾರಿಗಳೊಂದಿಗೆ ಮುಕ್ತವಾಗಿ ತಿಳಿಸಿದರೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಪೌರ ಸೇವಾ ನೌಕರರ ಸೇವಾ ಸಂಘದ ನಗರ ಶಾಖೆ ಅಧ್ಯಕ್ಷ ತಿಪ್ಪಣ್ಣ ಮಾತನಾಡಿ, ಪೌರಕಾರ್ಮಿಕರ ಖಾಯಂ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಸಮಾಜದಲ್ಲಿ ಪೌರಕಾರ್ಮಿಕರನ್ನು ಕೀಳಾಗಿ ನೋಡುವುದು ಇನ್ನೂ ಹೋಗಿಲ್ಲ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಪ್ರಕರಣಗಳು ಸಹ ನಡೆದಿವೆ. ಪೌರಕಾರ್ಮಿಕರಿಗೆ ರಕ್ಷಣೆ ನೀಡಬೇಕಿದ್ದು, ಶ್ರಮಿಕರಿಗೆ ಸಮಾಜ ಹಾಗೂ ಸಮುದಾಯ ಬೆಲೆ ನೀಡಬೇಕಿದೆ ಎಂದು ಹೇಳಿದರು.
ಪರಿಸರ ವಿಭಾಗದ ಸಹಾಯಕ ಅಭಿಯಂತರ ಈರಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಬಸವಲಿಂಗಪ್ಪ ಅವರು ಸಚಿವರಾಗಿದ್ದಾಗ ಮಲಹೊರುವ ಪದ್ದತಿಯನ್ನು ನಿಷೇಧಿಸಿದರು, ಪೌರಕಕಾರ್ಮಿಕರಿಗೆ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅವರಿಗಾಗಿ ಒಂದು ದಿನಾಚರಣೆಯ ಔಚಿತ್ಯ ಇದೆ ಎನ್ನುವುದನ್ನು ಮನಗಂಡು 2007ರಿಂದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್, ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡು ಸಿಂಧೆ, ಖಜಾಂಚಿ ವೆಂಕಟೇಶ ಬಾಬು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.