ವರಕವಿ ದ.ರಾ.ಬೇಂದ್ರೆಯವರ ಕಾವ್ಯವು ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ನಿಸರ್ಗ ಯೋಗ ಕೇಂದ್ರದಲ್ಲಿ ನಡೆದ ಮನೆಯಂಗಳದಲ್ಲಿ ಕನ್ನಡದ ಗಾನ ಪಯಣ ಕಾರ್ಯಕ್ರಮದಲ್ಲಿ ವರಕವಿ ದ.ರಾ.ಬೇಂದ್ರೆ ಅವರ ಕಾವ್ಯ ಕುರಿತು ಮಾತನಾಡಿದರು.
ದ.ರಾ.ಬೇಂದ್ರೆಯವರು ತನ್ನ ಜೀವನದುದ್ದಕ್ಕೂ ದುಃಖ, ನೋವು, ಕಷ್ಟಗಳನ್ನೇ ನೋಡಿದ ಕವಿ. ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ; ಕಲ್ಲು ಸಕ್ಕರೆಯಂತಹ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ… ಎಂದರು. ಹೀಗಾಗಿ ಬೇಂದ್ರೆಯವರ ಜೀವನವೇ ಕಾವ್ಯ, ಕಾವ್ಯವೇ ಜೀವನ ಎಂದಾಗಿದೆ ಎಂದರು.
ಬೇಂದ್ರೆಯವರು ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ವಿಚಾರಗಳನ್ನು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಅಭಿವ್ಯಕ್ತಿಗೊಳಿಸಿದರು. ಶಬ್ಧ ಗಾರುಡಿಗರಾಗಿದ್ದ ಬೇಂದ್ರೆಯವರು ಜಾನಪದ ಸಾಹಿತ್ಯ ಆಡುಭಾಷೆಯ ನುಡಿಗಟ್ಟುಗಳು ತಮ್ಮ ಕವನಗಳಲ್ಲಿ ಬಳಸಿದ್ದಾರೆ. ನಾಕುತಂತಿ ಕಾವ್ಯದ ಮೂಲಕ ನಾನು, ನೀನು, ಆನು, ತಾನು ಇವು ಮಾನವನ ಗುರುತಿಸುವಿಕೆಯ ನಾಲ್ಕು ಹಂತಗಳು ಎಂದರು.
ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದ ಗೌರವಗಳಾದವು ಎಂದರು.
ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಗಿರೀಶ್.ಎನ್.ಬರಗೂರು ಮಾತನಾಡಿ, ಬೇಂದ್ರೆಯವರ ಕವನಗಳ ವಿಚಾರಗಳೇ ವೈವಿಧ್ಯಮಯವಾಗಿದೆ. ನರಬಲಿ ಕವನ ಬರೆದು ಸೆರೆಮನೆ ವಾಸ ಅನುಭವಿಸಿದ ಬೇಂದ್ರೆಯವರು, ಒಂದೇ ಒಂದೇ ಕರ್ನಾಟಕ ಒಂದೇ ಎನ್ನುವ ಮೂಲಕ ಕರ್ನಾಟಕ ಏಕೀಕರಣಕ್ಕೆ ಬೆಂಬಲಿಸಿದರು.
ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು, ಉತ್ತರ ದ್ರುವದಿಂ ದಕ್ಷಿಣ ದ್ರುವಕೂ ಚುಂಬಕ ಗಾಳಿಯೂ ಬೀಸಿದೆ, ಮೂಡಣ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಶ್ರಾವಣ ಬಂತು, ಇಳಿದು ಬಾ ತಾಯಿ ಇಳಿದು ಬಾ, ಕುರುಡು ಕಾಂಚಾಣ ಕುಣಿಯುತಲಿತ್ತು ಮುಂತಾದ ನೂರಾರು ಕವನಗಳು ಸಹೃದಯರ ಮನಸ್ಸನ್ನು ಸದಾ ಉಲ್ಲಾಸಗೊಳಿಸುತ್ತವೆ. ಬೇಂದ್ರೆಯವರ ಕಾವ್ಯಗಳ ಭಾಷೆ ಮತ್ತು ಭಾವನೆಗಳು ಜನಸಾಮಾನ್ಯರು ಸಾಹಿತ್ಯದಲ್ಲಿ ಅಭಿರುಚಿ ಹೊಂದಲು ಸಹಕಾರಿ ಆಗಿವೆ ಎಂದರು.
ಕನ್ನಡ ಗಾನ ಪಯಣ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಅವರ ಭಾವಗೀತೆಗಳನ್ನು ಕಲಾವಿದರಾದ ಕೆ.ಪಿ.ಪ್ರಕಾಶ್, ನಾಗರತ್ಮಮಹಾಬಲೇಶ್ವರ್, ಚಂದ್ರಶೇಖರ್, ಸುರೇಖಾ ರವಿರಾಜ್, ನಾಗರತ್ನಮ್ಮ, ಎಂ.ಎಲ್.ಆಶಾ, ಜಯಲಕ್ಷ್ಮಿ ನಟರಾಜು, ಎಂ.ಪಿ.ಸಿ.ವೆಂಕಟೇಶ್, ನಾಗರಾಜು,ಜಿ.ಸುರೇಶ್, ಷಫೀರ್, ನಾಗದಳ ನಟರಾಜ್ ಮುಂತಾದವರು ಹಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಗ ಸಂಘದ ಅಧ್ಯಕ್ಷ ಪ್ರೊ.ಎಂ.ಜಿ.ಅಮರನಾಥ, ಪ್ರಧಾನ ಕಾರ್ಯದರ್ಶಿ ಯೋಗನಟರಾಜು, ಖಜಾಂಚಿ ಕೆ.ಆರ್.ಶ್ಯಾಮಸುಂದರ್, ಸಂಚಾಲಕ ಎನ್.ಚಂದ್ರಶೇಖರ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಭಾರತ ಸೇವಾದಳ ತಾಲ್ಲೂಕು ಅಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಹಮಾಮ್ ವೆಂಕಟೇಶ್, ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ, ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ, ಸಾಸಲು ಹೋಬಳಿ ಅಧ್ಯಕ್ಷ ಜಿ.ಎಂ.ನಾಗರಾಜು, ಪ್ರತಿನಿಧಿ ಮುನಿರಾಜು, ಸಂಸ್ಕ್ರತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಕಾರ್ಯದರ್ಶಿ ಸಂಪತ್ತಕುಮಾರ್, ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.