ಒಂದೇ ಕುಟುಂಬದ ನಾಲ್ವರು ಮಲಗಿದ್ದ ಮಗ್ಗಲಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊಲೆಯರಳ್ಳಿ ಬಳಿಯ ಕೋಳಿಫಾರಂನಲ್ಲಿ ನಡೆದಿದೆ.
ನೇಪಾಳ ಮೂಲದವರಾದ ಕಾಲೇ ಸರೇರಾ, ಲಕ್ಷ್ಮಿ ಸರೇರಾ, ಉಷಾ ಸರೇರಾ, ಪೂಲ್ಸರೇರಾ ಎಂದು ಗುರುತಿಸಲಾಗಿದೆ.
ಕೋಳಿ ಫಾರಂನಲ್ಲಿ ಕೆಲಸಕ್ಕೆಂದು ವಾರದಿಂದಷ್ಟೇ ಬಂದಿದ್ದರು. ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದವರು ಸಾವನಪ್ಪಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದು, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃತ ಸಂಬಂಧಿಕರಿಗೆ ಕರೆ ಮಾಡಿದ್ದಾರೆ.
ಅವರು ಶೆಡ್ ಕಿಟಕಿ ಬಳಿ ನೋಡಿದಾಗ, ಮಲಗಿದ್ದವರು, ಮಲಗಿದ್ದಂತೆಯೇ ಸಾವನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೇ ಕುಟುಂಬದ ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾಗಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೊಳ್ಳೆ ಕಾಟಕ್ಕಾಗಿ ಹಾಕಿದ್ದ ಹೊಗೆಯಿಂದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ.