ಕಳಪೆ ಬಿತ್ತನೆ ಬೀಜ ಖರೀದಿಸಿ ಮೋಸ ಹೋದ ರೈತ: ಬಿತ್ತನೆ ಬೀಜ ಮಾರಾಟ ಅಂಗಡಿಯಿಂದ ರೈತನಿಗೆ ಮೋಸ

ತಾಲೂಕಿನ ತೂಬಗೆರೆ ಹೋಬಳಿಯ ತುರುವನಹಳ್ಳಿ ಗ್ರಾಮದ ವಾಸು ಎಂಬ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರ ಬೆಳೆ ಮಾತ್ರ ಎಲ್ಲರ ಕಣ್ಣು ಕುಕ್ಕುವ ಹಾಗೆ ಆಳೆತ್ತರಕ್ಕೆ ಬೆಳೆದು ನಿಂತಿದೆ. ಇದೀಗ ಬೆಳೆಯಲ್ಲಿ ಶೂನ್ಯ ಫಸಲು ಬಂದಿರುವುದು ಮಾತ್ರ ಇದೀಗ ರೈತನಿಗೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಕಾರಣ ಕಳೆದ ಮೂರು ತಿಂಗಳ ಹಿಂದೆ ತೂಬಗೆರೆಯ ಬಿತ್ತನೆ ಬೀಜ ಮಾರಾಟ ಅಂಗಡಿಯಲ್ಲಿ ಹೈದರಾಬಾದ್ ಸಿಡ್ಸ್ 8199 ಮುಸುಕಿನ ಜೋಳದ ಬಿತ್ತನೆ ಬೀಜ ಖರೀದಿಸಿ ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ. ಒಂದು ಜೋಳದ ಕಡ್ಡಿಯೊಳಗೆ ಒಂದು ಅಥವಾ ಎರಡು ತೆನೆ ಬರಬೇಕು. ಆದರೆ ಈ ಬಿತ್ತನೆ ಬೀಜದಲ್ಲಿ ಒಂದು ಕಡ್ಡಿಗೆ ನಾಲ್ಕರಿಂದ ಐದು ತೆನೆ ಬಂದಿದೆ. ಬಂದಿರುವ ತೆನೆಯಲ್ಲೂ ಸರಿಯಾಗಿ ಬೀಜ ಉತ್ಪತ್ತಿ ಆಗಿಲ್ಲ ಅನ್ನೋದು ಇದೀಗ ರೈತನ ಆತಂಕಕ್ಕೆ ಕಾರಣವಾಗಿದೆ. ನೀರಿನ ಬವಣೆಯಲ್ಲೂ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ರೈತ ತನ್ನ ತೋಟದಲ್ಲಿ ಹಗಲು ರಾತ್ರಿ ಎನ್ನದೆ ದುಡಿದು, ಹಂದಿ, ನಾಯಿಗಳ, ಕಾಟದಿಂದ ತನ್ನ ತೋಟವನ್ನು ರಕ್ಷಿಸಿಕೊಂಡಿದ್ದ. ಆದ್ರೆ ಕೊನೆಗೆ ರೈತನಿಗೆ ತಾನು ಬೆಳೆದ ಬೆಳೆಯಲ್ಲಿ ಸಿಕ್ಕಿದ್ದು ಮಾತ್ರ ಶೂನ್ಯ. ಅಷ್ಟಕ್ಕೂ ಕಷ್ಟ ಪಟ್ಟು ಬೆಳೆದ ಬೆಳೆಯಲ್ಲಿ ಶೂನ್ಯ ಫಸಲು ಸಿಗಲು ಕಾರಣ ಕಳಪೆ ಬಿತ್ತನೆ ಬೀಜ.

ಕಳಪೆ ಬಿತ್ತನೆ ಬೀಜದ ಬಗ್ಗೆ ಕಂಪನಿಯವರಿಗೆ ತಿಳಿಸಿದಾಗ ನಿಮಗೆ ನಷ್ಟ ಆದರೆ ನಾವು ನಿಮ್ಮಗೆ ಪರಿಹಾರ ಕಟ್ಟಿಕೊಡುತ್ತೇವೆ ಎಂದು ತಿಳಿಸಿದ್ದಾರೆ ಆದರೆ ಇದೀಗ ನಾವು ಪರಿಹಾರ ಕಟ್ಟಿಕೊಡುವುದಿಲ್ಲ ನೀವು ಬೇಕಾದರೆ ಕೋರ್ಟ್ ಗೆ ಹೋಗಿ ಪ್ರಕರಣ ದಾಖಲಿಸಿ ಎಂದು ಬೇಜವಾಬ್ಧಾರಿ ಉತ್ತರ ನೀಡುತ್ತಿದ್ದಾರೆ ಎಂದು ರೈತ ತನ್ನ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ತಿಂಗಳು ರೈತ ಕಷ್ಟ ಪಟ್ಟು ಬೆಳೆದ ಬೆಳೆಗೆ ಪ್ರತಿಫಲವಿಲ್ಲದೆ ಇದೀಗ ರೈತ ಪರಿಹಾರಕ್ಕೆ ಎದುರು ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆ ಬಯಲು ಸೀಮೆ ಪ್ರದೇಶದಲ್ಲಿ ರೈತ ಬೆಳೆ ಬೆಳೆಯುದೇ ಹರ ಸಾಹಸ ಪಡಬೇಕು. ಇಂತಹ‌ ಸನ್ನಿವೇಶದಲ್ಲಿ ರೈತನಿಗೆ ಈ ರೀತಿ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದವರ ವಿರುದ್ಧ ದೂರು ದಾಖಲಿಸಿ ನಷ್ಟಕ್ಕೆ ಒಳಗಾದ ರೈತನಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *