ನಗರದ ರೈಲ್ವೆ ಸ್ಟೇಷನ್ ಬಳಿಯ ಕೆಂಪೇಗೌಡ ಆಸ್ಪತ್ರೆಯ ಮಾಲೀಕರು ಆಸ್ಪತ್ರೆ ನೋಂದಣಿ ನವೀಕರಣ ಮಾಡಿಸದ ಹಿನ್ನೆಲೆಯಲ್ಲಿ ಕೆಂಪೇಗೌಡ ಆಸ್ಪತ್ರೆಗೆ ತಾತ್ಕಾಲಿಕವಾಗಿ ಬೀಗ ಹಾಕಲಾಯಿತು.
ಸೋಮವಾರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಯಿತು. ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಗಳು ಯಾರೊಬ್ಬರು ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ನೀಡಿ ಇಂದಿನಿಂದ ಆಸ್ಪತ್ರೆಯ ನೋಂದಣಿ ನವೀಕರಣ ಮಾಡದ ಹೊರತು ಆಸ್ಪತ್ರೆಯನ್ನು ತೆಗೆಯಲು ಅನುಮತಿ ಇರುವುದಿಲ್ಲ. ಆಗೊಮ್ಮೆ ಆಸ್ಪತ್ರೆಯನ್ನು ಕಾನೂನು ಬಾಹಿರವಾಗಿ ತೆರೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಬಳಿಕ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಪರಮೇಶ್ವರ ಮಾತನಾಡಿ ಈ ಆಸ್ಪತ್ರೆಗೆ ಈಗಾಗಲೇ ನೋಂದಣಿ ಪ್ರಕ್ರಿಯೆ ಮಾಡಿಸಿಕೊಳ್ಳಿ ಎಂದು ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಉತ್ತರ ನೀಡದೆ. ಆಸ್ಪತ್ರೆ ನೋಂದಣಿ ನವೀಕರಣ ಮಾಡಿಸಿಕೊಳ್ಳದೆ ಉದ್ಧಟತನ ಮೆರೆದಿದ್ದಾರೆ.
ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಆಸ್ಪತ್ರೆಗೆ ನೋಟಿಸ್ ನೀಡಿ ಇಂದಿನಿಂದ ಬೀಗ ಹಾಕಲಾಗಿದೆ. ನವೀಕರಣ ಮಾಡಿಸಿ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗಿ ನೋಟಿಸ್ ಗೆ ಉತ್ತರ ನೀಡುವವರೆಗೂ ಆಸ್ಪತ್ರೆ ತೆರೆಯಲು ಅನುಮತಿ ಇರುವುದಿಲ್ಲ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಪರಮೇಶ್ವರ ನೇತೃತ್ವದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ನೀಡಿ ಬೀಗ ಹಾಕಲಾಯಿತು. ಈ ವೇಳೆ ಎಎಸ್ಐ ಮಲ್ಲಿಕಾರ್ಜುನ ಇದ್ದರು.