
ಆಧುನಿಕ ನರ್ಸಿಂಗ್ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು ಸಮಾಜಕ್ಕೆ ದಾದಿಯರು ನೀಡುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ, ಗೌರವಿಸುವ ದಿನವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್ ಹೇಳಿದರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು..
ಆಸ್ಪತ್ರೆಗಳಲ್ಲಿ ರೋಗಿಗಳ ಪಾಲಿನ ಆಶಾ ಕಿರಣ, ಕುಟುಂಬ ಸದಸ್ಯರಂತೆ ಶುಶ್ರೂಷೆ ಮಾಡುವ ದಾದಿಯರನ್ನು ಸ್ಮರಿಸುವ ಹಾಗೂ ಅವರ ಸೇವಾ ಕೈಂಕರ್ಯಕ್ಕೆ ನಾವೆಲ್ಲರು ಸಲಾಂ ಹೇಳಲೇಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಷ್ಟೆ ದಾದಿಯರ ಶ್ರಮವೂ ಇದೆ. ರೋಗಿಗಳ ಆರೈಕೆ, ಚಿಕಿತ್ಸೆ ವೇಳೆ ಸಹಕಾರ ಹಾಗೂ ಮಾನಸಿಕ ಧೈರ್ಯ ತುಂಬುವ ಕೆಲಸದಲ್ಲಿ ದಾದಿಯರ ಸೇವೆ ಅಮೂಲ್ಯವಾಗಿದೆ ಎಂದು ತಿಳಿಸಿದರು.
ದಾದಿಯರ ಸೇವೆ, ತ್ಯಾಗ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವರ ಮಹತ್ವದ ಪಾತ್ರವನ್ನು ಎಲ್ಲರು ಸ್ಮರಿಸಲೇಬೇಕು ಎಂದರು.
ಸಿಎಂಒ ಡಾ.ರಮೇಶ್, ವೈದ್ಯರಾದ ಡಾ.ಮಂಜುನಾಥ್, ಡಾ. ನಿರಾಂಜನ್, ಡಾ.ರಾಜು, ಡಾ. ಗಾಯತ್ರಿ, ಡಾ.ಪರಮೇಶ್ವರ್, ಡಾ.ಸವಿತಾ, ಹಿರಿಯ ಶುಶ್ರೂಷಾಧಿಕಾರಿ ಶೈಲಜಾ, ವಂದನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.