
ಪಕ್ಷ ನಿಂತ ನೀರಲ್ಲ ಎಂಬುದನ್ನು ಸಾಬೀತುಪಡಿಸಲು ಜನತಾದಳ (ಜಾತ್ಯತೀತ) ಪಕ್ಷದಲ್ಲಿ ಇತ್ತೀಚೆಗೆ ಹಲವು ಬದಲಾವಣೆಗಳನ್ನು ತರಲಾಗಿದೆ.. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಹೊಸಬರಿಗೆ ಜವಾಬ್ದಾರಿ ನೀಡಿ ಪಕ್ಷ ಸಂಘಟನೆ ಮಾಡಲು ಹೈಕಮಾಂಡ್ ಆದೇಶಿಸಿದೆ…
ಅದರಂತೆ ಹಲವು ವರ್ಷಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಬಿ.ಮುನೇಗೌಡರನ್ನು ಕೆಳಗಿಳಿಸಿ ಮಂಜುನಾಥ್ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ. ಇದಾದ ನಂತರ ಇದೀಗ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ಹರೀಶ್ ಗೌಡರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಕಾರ್ಯಾಧ್ಯಕ್ಷರಾಗಿ ವಿ.ಆಂಜನೇಗೌಡ, ಉಪಾಧ್ಯಕ್ಷರಾಗಿ ಕೊನಘಟ್ಟ ಆನಂದ್, ಪುಟ್ಟರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದರಾಜು ಅವರನ್ನು ನೇಮಿಸಲಾಗಿದೆ.
ನೂತನ ಟೀಂಗೆ ಮುನೇಗೌಡ ಕಿವಿಮಾತು
ಹೊಸದಾಗಿ ಆಯ್ಕೆಯಾದ ತಾಲೂಕು ಅಧ್ಯಕ್ಷ, ಪದಾಧಿಕಾರಿಗಳು ರಾಷ್ಟ್ರೀಯ ಪಕ್ಷಗಳ ಆಸೆ ಆಮಿಷಗಳಿಗೆ ಬಾಲಿಷರಾಗದೇ, ಅವರ ಅಧೀನದಲ್ಲಿ ಇರದೇ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿತವಾಗಿ ಬಲಪಡಿಸಿ, ಪಾರದರ್ಶಕತೆ, ಶಿಸ್ತು ಮತ್ತು ಸೇವಾಭಾವನೆ ಇವರ ಕಾರ್ಯಶೈಲಿಯ ಪ್ರಮುಖ ಲಕ್ಷಣಗಳಾಗಬೇಕು. ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರಬೇಕು. ಯುವಕರು, ರೈತರು ಹಾಗೂ ಮಹಿಳೆಯರನ್ನು ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಕಾರ್ಯಕರ್ತರೊಂದಿಗೆ ನಿರಂತರ ಸಂವಾದ ನಡೆಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ನಾಯಕತ್ವ ಹೊಂದಬೇಕು. ಪಕ್ಷದ ತತ್ವ–ಸಿದ್ಧಾಂತಗಳಿಗೆ ನಿಷ್ಠರಾಗಿ, ಕಾರ್ಯಕರ್ತರನ್ನು ಒಟ್ಟುಗೂಡಿಸಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಮ್ಮ ನಾಯಕತ್ವಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ. ನಿಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಹೊಸ ಶಕ್ತಿ, ಕಾರ್ಯಕರ್ತರಿಗೆ ಹೊಸ ಆತ್ಮವಿಶ್ವಾಸ ದೊರಕಲಿ ಎಂದು ನಿರ್ಗಮಿತ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಕಿವಿಮಾತು ಹೇಳಿದ್ದಾರೆ.
ನಾನು ಎಂದಿನಂತೆ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಬಿಟ್ಟು ಎಲ್ಲೂ ಹೋಗೋದಿಲ್ಲ. ಎಂಎಲ್ಎ ಸ್ಪರ್ಧಿಯಾಗಿ ಕಣಕ್ಕಿಳಿದು ಜನಾರ್ಶೀವಾದ ಪಡೆಯಲು ಆಶಿಸುತ್ತೇನೆ. ಅದೇರೀತಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನನ್ನ ಜನ ಸೇವೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ..
ಸಾಲು ಸಾಲು ಸೋಲು, ಬಂಡೆಯಂತೆ ನಿಂತ ಮುನೇಗೌಡ
2018 ಮತ್ತು 2023ರಲ್ಲಿ ‘ದಳಪತಿ’ಯಾಗಿ ಜನರ ಸೇವೆಗೆಂದು ಕಣಕ್ಕಿಳಿದಿದ್ದ ಬಿ.ಮುನೇಗೌಡರಿಗೆ ‘ಅದೃಷ್ಟ’ ಕೈ ಹಿಡಿಯಲಿಲ್ಲ. ಒಂದು ಉಪಚುನಾವಣೆ ಒಳಗೊಂಡಂತೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಬಿ.ಮುನೇಗೌಡ ತಾಲೂಕಿಗೆ ನೀರು, ಕಲ್ಲು ಮುನೇಗೌಡ ಎಂದೇ ಚಿರಪರಿಚಿತರಾಗಿದ್ದಾರೆ…
ಸುದೀರ್ಘ ಅವಧಿಗೆ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.. ಜೆಡಿಎಸ್ ನ ಕಟ್ಟಾಳಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳಿಸಿದ್ದಾರೆ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿ.ಮುನೇಗೌಡರಿಗೆ, ಕೆಲವೇ ಕೆಲವು ಮತಗಳ ಅಂತರದಿಂದ ಹಿನ್ನಡೆಯಾಗಿತ್ತು. ಆದರೂ, ಎದೆಗುಂದದೆ ತಾಲೂಕಿನಲ್ಲಿ ಹನಿ ಕುಡಿಯುವ ನೀರಿಗೂ ಅಭಾವ ಎದುರಾದ ಸಂದರ್ಭದಲ್ಲಿ ಸ್ವಂತ ಹಣದಿಂದ ತಾಲೂಕಿನ ವಿವಿಧೆಡೆ ಬೋರ್ ವೆಲ್ ಮುಖಾಂತರ ನೀರನ್ನು ಒದಗಿಸಿದರು. ನಗರದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಕೊಟ್ಟರು… ಅದೇರೀತಿ ತಾಲೂಕಿನ ಬಹುತೇಕ ದೇಗುಲಗಳಿಗೆ ಬಿ.ಮುನೇಗೌಡರು ಕಲ್ಲಿನ ಸಹಾಯ ಮಾಡುವ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ..
ಪಕ್ಷ ನಿಷ್ಠೆಗೆ ಒಲಿದ ಅಧ್ಯಕ್ಷ ಸ್ಥಾನ
ಹರೀಶ್ ಗೌಡ ಅವರು ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು, ಸಮಾಜಸೇವೆ ಮಾಡುತ್ತಾ, ಲೋಕಸಭೆ, ವಿಧಾನಸಭೆ, ಬಮೂಲ್, ಟಿಎಪಿಎಂಸಿಎಸ್, ಎಂಪಿಸಿಎಸ್ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಪಕ್ಷದ ಪರ ಕೆಲಸ ಮಾಡಿದ್ದಾರೆ. ಇವರ ಪಕ್ಷದ ನಿಷ್ಠೆಯನ್ನು ಮನಗಂಡ ವರಿಷ್ಠರು ತಾಲೂಕು ಅಧ್ಯಕ್ಷರನ್ನಾಗಿ ಮಾಡಿದೆ.
ನೂತನ ತಾಲೂಕು ಅಧ್ಯಕ್ಷ ಹರೀಶ್ ಗೌಡ ಹೇಳಿದ್ದೇನು…?
ಪಕ್ಷ ನನಗೆ ಜವಾಬ್ದಾರಿಯುತವಾದ ಸ್ಥಾನ ಕಲ್ಪಿಸಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಕುಮಾರಸ್ವಾಮಿಯವರಿಗೆ ಆಭಾರಿಯಾಗಿರುತ್ತೇನೆ. ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ನೂತನ ಜಿಲ್ಲಾಧ್ಯಕ್ಷ ಮಂಜುನಾಥ್ ಕೆ.ವಿ, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಮುಖಂಡರು, ಮುಖಂಡರು, ಕಾರ್ಯಕರ್ಯರ ಸಹಕಾರ, ಪ್ರೋತ್ಸಾಹದಿಂದ ಪಕ್ಷ ಸಂಘಟನೆ ಮಾಡುತ್ತೇನೆ. ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದೊಳ್ಳುವೆ. ಸಾಮೂಹಿಕ ನಾಯಕತ್ವದಡಿ ಪಕ್ಷ ಮುನ್ನಡೆಸುವೆ ಎಂದು ಹೇಳಿದ್ದಾರೆ…
ಹೊಸ ಟೀಂ ಜೊತೆ ಇದೂವರೆಗೂ ಕಾಣಿಸಿಕೊಳ್ಳದ ಮುನೇಗೌಡ
ಜಿಲ್ಲೆ ಹಾಗೂ ತಾಲೂಕಿನಲ್ಲಿ ಹೊಸ ಟೀಂ ರಚನೆಯಾದ ನಂತರ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಹಲವು ಸಭೆಗಳು, 33% ಮಹಿಳಾ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ, ತಾಲೂಕು ಕಚೇರಿ ಬಳಿ ಕೆಐಎಡಿಬಿ ವಿರುದ್ಧ ಹೋರಾಟ ನಡೆಸಲಾಯಿತು. ಆದರೆ, ಈ ಎಲ್ಲಾ ಸಭೆ, ಹೋರಾಟ, ಪ್ರತಿಭಟನೆಗಳಲ್ಲಿ ಬಿ.ಮುನೇಗೌಡ ಮತ್ತು ತಂಡದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮೇ.8ರಂದು ನಿಖಿಲ್ ಕುಮಾರಸ್ವಾಮಿ ತಾಲೂಕಿಗೆ ಆಗಮಿಸಲಿದ್ದು, ಈ ಸಮಾರಂಭದಲ್ಲಿ ಮುನೇಗೌಡರು ಭಾಗವಹಿಸಲಿದ್ದಾರಾ… ಮುಂದಿನ ದಿನಗಳಲ್ಲಿ ನೂತನ ಟೀಂ ಜೊತೆಗೂಡಿ ಪಕ್ಷ ಸಂಘಟನೆ ಮಾಡುತ್ತಾರಾ…. ಅಥವಾ ಒಂಟಿಯಾಗಿಯೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ…..