
ಬೈಕ್ ನಲ್ಲಿ ಪತ್ನಿಯೊಂದಿಗೆ ಸಂಬಂಧಿಕರ ಮನೆಯ ಸಾವಿಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೋಲೀಸರನ್ನು ಕಂಡು ಹೌಹಾರಿ ಬೈಕ್ ತಿರುಗಿಸಿದ ಕಾರಣ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿಯಾದ ಪಿಕಪ್ ವಾಹನ.
ತರುವಾಯ, ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿ, ಬೈಕ್ ಹಿಂಬದಿಯಲ್ಲಿದ್ದ ಪತ್ನಿಯ ಕಾಲುಗಳು ಮುರಿದ ಪ್ರಸಂಗ ಕೂಡುಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಕೂಡುಮಂಗಳೂರು ಗ್ರಾಮಾಂತರ ಠಾಣೆಯ ಸಮೀಪ ಮರೂರು ಗ್ರಾಮದ ಕೃಷಿಕ ದಂಪತಿಯ ಬೈಕ್ ಗೆ ವಾಹನ ಡಿಕ್ಕಿಯಾಗಿ ಅಮಾಯಕ ಸವಾರ ಬಲಿಯಾಗಿದ್ದು..ಸವಾರನ ಪತ್ನಿಯ ಕಾಲುಗಳು ಮುರಿದಿದೆ.
ಕೃಷಿ ಕೂಲಿ ಕಾರ್ಮಿಕರಾದ ಈ ಬೈಕ್ ಸವಾರ ದಂಪತಿ ನಿತ್ಯವೂ ಕೂಲಿ ಮಾಡಿಯೇ ಜೀವನ ನಡೆಸುತ್ತಿದ್ದರು. ಇವರಿಗೆ ಚಿಕ್ಕ ವಯಸ್ಸಿನ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿವೆ.
ಮರೂರು ಗ್ರಾಮದ ತಮ್ಮ ನೆರೆಮನೆಯವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಪಿರಿಯಾಪಟ್ಟಣದಲ್ಲಿ ಮೃತಪಟ್ಟ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮರೂರು ಗ್ರಾಮದ ತಮ್ಮ ಮನೆಯಿಂದ ಹೊರಟ ಈ ದಂಪತಿಗಳು ಸಂಬಂಧಿಕರ ಸಾವಿನ ಮನೆಗೆ ಹೋಗಿ ಮಾತನಾಡಿಸಿ ಬರುವ ಯೋಜನೆಯಲ್ಲಿ ಹೊರಟಿದ್ದರು. ಪುಣ್ಯಕ್ಕೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದಕ್ಕೆ ಮಕ್ಕಳ ಜೀವ ಉಳಿಯಿತು.
ಮೃತರ ಪತ್ನಿಗೆ ಸೈರಸ್ ಆಸ್ಪತ್ರೆಯಲ್ಲಿ ಮುರಿದ ಕಾಲುಗಳ ಶಸ್ತ್ರಚಿಕಿತ್ಸೆ ನಡೆದಿತ್ತು. ಅದೂವರೆಗೂ ಗಂಡನ ಸಾವಿನ ಸುದ್ದಿ ಹೇಳದೇ ಗೌಪ್ಯವಾಗಿಡಲಾಗಿತ್ತು. ಆದರೆ, ಉಭಯಸಂಕಟದಿಂದ ಆಪರೇಷನ್ ಆಗಿ ಐಸಿಯು ಒಳಗೆ ನರಳಾಡುತ್ತಿರುವ ಪತ್ನಿಗೆ ಗಂಡನ ಸಾವಿನ ಸುದ್ದಿ ಯನ್ನು ಅವರ ಕುಟುಂಬದವರು ಹೇಳದೆಯೇ, ಮುಖವನ್ನು ತೋರಿಸದೆಯೇ ಮಣ್ಣು ಮಾಡುವುದು ಬೇಡ ಎಂದು ನಿರ್ಧರಿಸಿ ಆಸ್ಪತ್ರೆಗೆ ತೆರಳಿ ವೈದ್ಯರ ಅಪ್ಪಣೆ ಪಡೆದು ಮೃತ ಗಂಡನ ಪಾರ್ಥಿವ ವನ್ನು ಆಸ್ಪತ್ರೆಗೆ ಒಯ್ದು ಶವವಿದ್ದ ಸ್ಟ್ರಚರ್ ಬಳಿ ಪತ್ನಿಯ ಸ್ಟ್ರಚರ್ ಎಳೆತಂದು ಸಾವನ್ನಪ್ಪಿದ ಪತಿಯ ಕೊರಳಿಗೆ ಹೂವಿನ ಹಾರ ಹಾಕಿದ ದೃಶ್ಯ ಮಿಡಿಯುವಂತಿತ್ತು.