
ಮದುವೆಯಾಗಿ ಹಳ್ಳಿಯಲ್ಲಿ ನೆಲೆಸಿದ್ದೇನೆಂದು ಮನನೊಂದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಕಲಬುರಗಿ ನಗರದ ಆಜಾದಪುರ್ ಬಡಾವಣೆಯಲ್ಲಿ ನಡೆದಿದೆ.
ಅನಸೂಯಾ ಮೃತ ಯುವತಿಯಾಗಿದ್ದು, ಮನೆಯಲ್ಲಿಯೇ ನೇಣು ಬಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.
ಮನೆ ಮಗಳ ಹುಚ್ಚು ನಿರ್ಧಾರಕ್ಕೆ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.
ಅತ್ತೆ ಮಗ ಅವಿನಾಶ್ ಜೊತೆ ಸಪ್ತಪದಿ ತುಳಿದಿದ್ದ ಅನಸೂಯಾ, ಆರಂಭದಲ್ಲಿ ಚೆನ್ನಾಗಿಯೇ ಇದ್ದಳು. ಈಕೆಗೆ ಮೂವರು ಸಹೋದರಿಯರಿಗೂ ಕೂಡ ವಿವಾಹವಾಗಿದ್ದು, ಅವರೆಲ್ಲರೂ ನಗರದಲ್ಲಿ ನೆಲೆಸಿದ್ದರು. ಇದೇ ವಿಚಾರಕ್ಕೆ ದಿನ ಕಳೆದಂತೆ ಅನಸೂಯಾಗೆ ಬೇಸರ ಮೂಡಿದೆ. ತಾನು ಮಾತ್ರ ಮದುವೆಯಾಗಿ ಹಳ್ಳಿಯಲ್ಲಿ ಇದ್ದೇನೆ ಎಂದು ಮಾನಸಿಕವಾಗಿ ಮನನೊಂದಿದ್ದಾಳೆ… ಹೀಗಾಗಿ ಮಾನಸಿಕವಾಗಿ ನೊಂದಿದ್ದ ಈಕೆ, ತವರಿಗೆ ಹೋದಾಗಲೂ ವಿಚಾರವನ್ನು ಒಂದೆರಡುಬಾರಿ ಕುಟುಂಬಸ್ಥರಿಗೆ ಹೇಳಿದ್ದಳಂತೆ. ತಾನು ಉತ್ತಮ ವಿದ್ಯಾಭ್ಯಾಸ ಪಡೆದರೂ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ಕೊರಗಿನ ಬಗ್ಗೆ ಅಲವತ್ತುಕೊಂಡಿದ್ದಳು.
ಈ ವೇಳೆ ಆಕೆಗೆ ಪೋಷಕರು ಬುದ್ಧಿಮಾತು ಕೂಡ ಹೇಳಿದ್ದರು. ಆದರೂ ಇದೇ ವಿಚಾರವಾಗಿ ಕೊರಗುತ್ತಿದ್ದ ಆಕೆ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಇನ್ನು ಮದುವೆಗೂ ಮುನ್ನ ಅನಸೂಯಾ ಕೂಡ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಳು. ಹೀಗಾಗಿ ಆಕೆಗೆ ಹಳ್ಳಿ ಜೀವನ ಅಂದ್ರೆ ಅಷ್ಟಾಗಿ ಆಗಿ ಬರುತ್ತಿರಲಿಲ್ಲ. ಇತ್ತ ಪ್ರೀತಿಸಿದ ಹುಡುಗ ಬಿಡೋಕು ಆಗ್ತಿರಲಿಲ್ಲ. ಮದುವೆ ಬಳಿಕ ಸಿಟಿ ವ್ಯಾಮೋಹ ಈಕೆಯನ್ನು ವಿಪರೀತ ಕಾಡತೊಡಗಿದೆ. ಈ ನಡುವೆಯೂ ಕಲಬುರಗಿಯ ಆಜಾದಪುರದಲ್ಲಿರುವ ಗಂಡನ ಮನೆಯಲ್ಲಿ ಜೀವನ ಕಳೆಯುತ್ತಿದ್ದ ಈಕೆ, ನಿನ್ನೆ ಮಧ್ಯಾಹ್ನ ಗಂಡನ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ