
ಡಿಸೆಂಬರ್ ತಿಂಗಳಿನಲ್ಲಿ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಖ್ಯಾತ ಭಾರೀ ದನಗಳ ಜಾತ್ರೆ ನಡೆಯಲಿದ್ದು, ದನಗಳ ಜಾತ್ರೆಗೆ ಆಗಮಿಸುವ ರಾಸುಗಳಿಗೆ ಸುಂಕ ವಿನಾಯಿತಿ ಸೇರಿದಂತೆ ರೈತರ ವ್ಯಾಪಾರಕ್ಕೆ ಸೂಕ್ತ ಅನುಕೂಲ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ನವ ಕರ್ನಾಟಕ ಯುವಶಕ್ತಿ ವೇದಿಕೆ ನೇತೃತ್ವದಲ್ಲಿ ರೈತರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್ ಅವರಿಗೆ ಮನವಿ ಮಾಡಿದ್ದಾರೆ.
ಈ ರೈತ ಮುಖಂಡರು ಮಾತನಾಡಿ, ತಾಲೂಕಿನ ಘಾಟಿ ಕ್ಷೇತ್ರದಲ್ಲಿ ನಡೆಯುವ ಅಂತಾರಾಜ್ಯ ಭಾರೀ ದನಗಳ ಜಾತ್ರೆ ಕರ್ನಾಟಕದ ಪ್ರಮುಖ ಪಶುಜಾತ್ರೆಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ವಿಭಿನ್ನ ಭಾಗಗಳಿಂದ ಹಾಗೂ ನೆರೆ ರಾಜ್ಯಗಳಿಂದ ಸಾಕಾಣಿಕೆದಾರರು ತಮ್ಮ ದನಗಳನ್ನು ವಾಹನಗಳಲ್ಲಿ ಸಾಗಿಸಿ ಭಾಗವಹಿಸುತ್ತಾರೆ. ರೈತರಿಗೆ ಸುಂಕ ವಿನಾಯಿತಿ ನೀಡುವಂತೆ ಈ ಹಿಂದೆಯೂ ಕೂಡ ಮನವಿ ಸಲ್ಲಿಸಲಾಗಿತ್ತು, ಜಾತ್ರೆಯಲ್ಲಿ ಅದನ್ನು ಪ್ರಾಧಿಕಾರವು ಪರಿಗಣಿಸಿ ವಾಹನ ಸುಂಕ ವಿನಾಯಿತಿ ನೀಡಿತ್ತು. ಈ ಕ್ರಮದಿಂದ ಸಾಕಾಣಿಕಾರರು ಹಾಗೂ ದನ ವ್ಯಾಪಾರಿಗಳು ಬಹಳ ಉಪಯೋಗ ಪಡೆದುಕೊಂಡಿದ್ದರು. ಈ ವರ್ಷವೂ ಅದೇ ರೀತಿಯಾಗಿ, ಜಾತ್ರೆ ಅವಧಿಯಲ್ಲಿ ರಾಸುಗಳನ್ನು ಸಾಗಿಸುವ ವಾಹನಗಳಿಗೆ ವಾಹನ ಸುಂಕ ವಿನಾಯಿತಿ ನೀಡಬೇಕಿದೆ. ಇದು ಸಾಕಾಣಿಕೆದಾರರ ಹಿತಾಸಕ್ತಿಗೆ ಪೂರಕವಾಗಿದ್ದು, ಘಾಟಿ ಸುಬ್ರಹ್ಮಣ್ಯ ಅಂತಾರಾಜ್ಯ ಭಾರಿ ದನಗಳ ಜಾತ್ರೆಯ ಯಶಸ್ವಿ ಆಯೋಜನೆಗೆ ಸಹಕಾರಿಯಾಗಲಿದೆ. ಪ್ರಾಧಿಕಾರದಿಂದ ರೈತರಿಗೆ ಮೂಲ ಸೌಕರ್ಯಗಳನ್ನು ನೀಡುತ್ತಿರುವುದು ಸ್ವಾಗತಾರ್ಹ. ಅಂತೆಯೇ ರಾಸುಗಳ ಸೇರುವ ಜಾಗದಲ್ಲಿ ತೋಟಗಳ ಮಾಲೀಕರು ಕಾಂಪೌಂಡ್ಗಳನ್ನು ಹಾಕಿಕೊಂಡಿದ್ದು, ಅವರಿಗೆ ಮನವಿ ಮಾಡಿ ತೆರವು ಮಾಡಿಕೊಟ್ಟು, ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕಿದೆ. ರಾತ್ರಿ ಸಮಯದಲ್ಲಿ ಇಲ್ಲಿ ತಂಗುವ ರೈತರಿಗೆ ಊಟದ ವ್ಯವಸ್ಥೆ ಮಾಡಬೇಕಿದೆ. ರೈತರಿಗೆ ವಿಶ್ರಾಂತಿ ಕೊಠಡಿಗಳನ್ನು ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್, ರೈತರು ತರುವ ರಾಸುಗಳಿಗೆ ಹಿಂದೆ ಸುಂಕ ವಿನಾಯಿತಿ ನೀಡಲಾಗಿದ್ದು, ಈ ಬಾರಿಯೂ ಪರಿಶೀಲಿಸಲಾಗುವುದು. ರೈತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಕಾರ್ಯದರ್ಶಿ ಸತೀಶ್, ಹೋಬಳಿ ಅಧ್ಯಕ್ಷರು ಮುನಿ ರಾಮೇಗೌಡ, ಮುಖಂಡರಾದ ವಾಸುದೇವ್ , ಮೂರ್ತಿ, ಮುರಳಿ ಹನುಮಂತರಾಯಪ್ಪ, ತಿಪ್ಪೂರು ತಿಮ್ಮಣ್ಣ ಮೊದಲಾದವರು ಹಾಜರಿದ್ದರು.