ರಾಜ್ಯಶಾಸ್ತ್ರ ಕೆ-ಸೆಟ್ /ನೆಟ್ ಕಾರ್ಯಾಗಾರ: ಕ್ರಮಬದ್ಧವಾದ ಓದು, ಸಮಯನಿಷ್ಠೆ ಹಾಗೂ ಜ್ಞಾನ ವೃದ್ಧಿಯು ಯಶಸ್ಸಿನ ಕೀಲಿಕೈ-  ಪ್ರಾಧ್ಯಾಪಕ ಡಾ.ಸುರೇಂದ್ರ ಕುಮಾರ್

ದೊಡ್ಡಬಳ್ಳಾಪುರ: ಯಾವ ಪರೀಕ್ಷೆಯೂ ಅಸಾಧ್ಯವಲ್ಲ. ಕ್ರಮಬದ್ಧವಾದ ಓದು, ಸಮಯನಿಷ್ಠೆ ಹಾಗೂ ಜ್ಞಾನ ವೃದ್ಧಿಯು ಯಶಸ್ಸಿನ ಕೀಲಿಕೈಗಳು ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಸುರೇಂದ್ರ ಕುಮಾರ್ ಅವರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರ ಹಾಗೂ ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ಕೆ-ಸೆಟ್ /ನೆಟ್ ರಾಜ್ಯಶಾಸ್ತ್ರ ಪತ್ರಿಕೆಯ ಕಾರ್ಯಾಗಾರದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು, ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು, ದೊಡ್ಡ ಕನಸುಗಳನ್ನು ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕು. ಆಸಕ್ತಿಯಿಂದ, ಪ್ರೀತಿಯಿಂದ ಮತ್ತು ಕೌತುಕದಿಂದ ಓದಿದರೆ ಅದೇ ನಿಮ್ಮ ಶಕ್ತಿ ಆಗುತ್ತದೆ. ಕೆ-ಸೆಟ್ ಅಥವಾ ನೆಟ್ ಪರೀಕ್ಷೆಗಳು ಕೇವಲ ಒಂದು ಪ್ರಮಾಣ ಪತ್ರವಲ್ಲ , ಅದು ನಿಮ್ಮ ಶೈಕ್ಷಣಿಕ ಪಯಣದಲ್ಲಿ ನಿಜವಾದ ಜ್ಞಾನಪರಿಚಯದ ಹಂತವಾಗಿದೆ.  ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯಶಾಸ್ತ್ರವು ಕೇವಲ ರಾಜಕೀಯವನ್ನು ತಿಳಿಸುವ ವಿಷಯವಲ್ಲ; ಅದು ಸಮಾಜದ ಬದಲಾವಣೆಯ ಮಾರ್ಗದರ್ಶಿಯಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳಿಂದ ಪಡೆಯುವ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಪ್ರಾಧ್ಯಾಪಕ ಶ್ರೀಕಾಂತ್ ಹಂದ್ರಾಳ, ಡಾ. ಈರಣ್ಣ ಅವರು ಭಾಗವಹಿಸಿ, ಕೆ-ಸೆಟ್ ಮತ್ತು ನೆಟ್ ಪರೀಕ್ಷೆಗಳ ಪಠ್ಯಕ್ರಮ, ತಯಾರಿ ವಿಧಾನ ಹಾಗೂ ಪಠ್ಯಕ್ರಮದ ವಿಶ್ಲೇಷಣೆಯ ಕುರಿತು ಉಪನ್ಯಾಸ ನೀಡಿದರು‌.

ಇದೇ ಸಂದರ್ಭದಲ್ಲಿ IQAC ಸಂಯೋಜಕರಾದ ಡಾ. ಬಿ.ಆರ್. ಗಂಗಾಧರಯ್ಯ, ವಿಭಾಗದ ಮುಖ್ಯಸ್ಥ ಪ್ರೊ. ಸತೀಶ್ ಕುಮಾರ್, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ರಾಜ್ ಕುಮಾರ್, ಪ್ರಾಧ್ಯಾಪಕರಾದ ಪ್ರೊ. ಸತೀಶ್ ಜೋಗಾ, ಪ್ರೊ. ಮುನಿರಾಜ್, ಹಾಗೂ ಡಾ. ರವಿಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!