ಮಕ್ಕಳ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು-ಮಕ್ಕಳ ಆಯೋಗದ ಸದಸ್ಯರ ಸೂಚನೆ

ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಕ್ಕಳ ಆಯೋಗದ ಸದಸ್ಯರು ಸೂಚನೆ ನೀಡಿದರು.

ತಾಲೂಕಿನ ಸಾರ್ವಜನಿಕ ತಾಯಿ-ಮಗು ಆಸ್ಪತ್ರೆ, ಸರ್ಕಾರಿ ಶಾಲೆ, ಗ್ರಾಪಂ, ಮಹಿಳಾ ಪೊಲೀಸ್ ಠಾಣೆಗೆ ರಾಜ್ಯ‌ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ ತಿಪ್ಪೇಸ್ವಾಮಿ,  ಶೇಖರಗೌಡ ರಾಮತ್ನಾಳ, ಶಶಿಧರ್ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ದೊಡ್ಡಬಳ್ಳಾಪುರ ತಾಲೂಕಿನ ತಾಯಿ‌ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಆಯೋಗದ ಸದಸ್ಯರು ಅಪೌಷ್ಟಿಕ‌‌ ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದರು. ಈ ವೇಳೆ ವಾರ್ಡ್‌ನಲ್ಲಿ ಒಬ್ಬರು ಕೂಡ ಅಪೌಷ್ಟಿಕ ಮಕ್ಕಳು ಇರಲಿಲ್ಲ. ಜಿಲ್ಲೆಯಲ್ಲಿ 45 ಅಪೌಷ್ಟಿಕ ಮಕ್ಕಳಿದ್ದರೂ ಕೂಡ ಯಾವ ಮಕ್ಕಳಿಗೂ ಯಾಕೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ‌ ಎಂದು ಆರ್ ಸಿಎಚ್ಒ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಇಲ್ಲಿನ ಅಪೌಷ್ಟಿಕ ಮಕ್ಕಳ ಅಡುಗೆ ಮನೆಯ ಸೌಲಭ್ಯವೇ ಸಮರ್ಪಕವಾಗಿಲ್ಲದಿರುವುದರ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಸೂಚಿಸಿದರು. ಜತೆಗೆ ಆಸ್ಪತ್ರೆಯಲ್ಲಿ ಪಥ್ಯ ಆಹಾರ ನೀಡದ ಬಗ್ಗೆ ಕೂಡ ಗಮನಿಸಿದ ಆಯೋಗದ ಸದಸ್ಯರು ಇಂದೇ ಅದರ ಬಗ್ಗೆ ಕ್ರಮವಹಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಆಧಾರ್ ಕಾರ್ಡ್ ವಯಸ್ಸಿನ ದಾಖಲಾತಿ ಆಗಲ್ಲ‌. ತಾಯಿ ಕಾರ್ಡ್ ನೀಡುವಾಗಲೇ ವಯಸ್ಸಿನ ದಾಖಲಾತಿಗಳಾದ ಶಾಲಾ ದಾಖಲಾತಿ, ಜನನ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಜತೆಗೆ ಸಖಿ ಒನ್ ಸೆಂಟರ್ ‌ನಲ್ಲಿರುವ ಶಿಶು ಪಾಲನ ಕೇಂದ್ರವನ್ನು ಕೂಡಲೇ ಸ್ಥಳಾಂತರಿಸಲು ಸೂಚನೆ ನೀಡಿದರು.

ಮುಖ್ಯಶಿಕ್ಷಕನ ಅಮಾನತಿಗೆ ಸೂಚನೆ!

ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಪ್ರಾಥಮಿಕ ಶಾಲೆಗೆ ಆಯೋಗದ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಂದ ಶಾಲೆಯ ಸ್ವಚ್ಚತಾ‌ ಕಾರ್ಯ ಮಾಡಿಸುತ್ತಿರುವುದು‌ ಕಂಡುಬಂದಿತ್ತು. ಈ ಬಗ್ಗೆ ಸದಸ್ಯರು ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.‌ ಮಕ್ಕಳಿಗೆ ಕೆಲಸ ಮಾಡುವಂತೆ ಹೇಳಿದ ಮುಖ್ಯ ಶಿಕ್ಷಕನ‌ ಸಸ್ಪೆಂಡ್‌ಗೆ ಕ್ರಮವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲೆಯಲ್ಲಿ ಬಿಸಿಯೂಟ ಯೋಜನೆಯ ಬೇಳೆಯನ್ನು ಪರಿಶೀಲಿಸಿದ ವೇಳೆಯಲ್ಲಿ ಬೇಳೆಯ ಗುಣಮಟ್ಟ ಸರಿಯಿಲ್ಲ ಎಂಬ ಬಗ್ಗೆ ಗರಂ ಆದರು‌. ಗುಣಮಟ್ಟದ ಬೇಳೆ ಪೂರೈಸಲು ಇಲಾಖೆಗೆ ಸೂಚನೆ ನೀಡಿದರು.

ದೊಡ್ಡಬಳ್ಳಾಪುರದ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿನ ಹಿಂದುಳಿದ ವರ್ಗಗಳ  ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಕಾಮಗಾರಿ ಪೂರ್ಣಗೊಂಡಿದ್ದರು ಕೂಡ ಮಕ್ಕಳ ಬಳಕೆಗೆ  ನೀಡಿಲ್ಲ‌. ಇದರ ಬಗ್ಗೆ ತಾಲೂಕು ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. 15 ದಿನದೊಳಗೆ ಈ ಬಗ್ಗೆ ಕ್ರಮವಹಿಸಲು ಸೂಚನೆ ನೀಡಿದರು.

ದೊಡ್ಡಬೆಳವಂಗಲ ಕೆಪಿಎಸ್ ಶಾಲೆಗೆ ಭೇಟಿ ನೀಡಿದ ಸದಸ್ಯರಾದ ಡಾ. ಕೆ.ಟಿ ತಿಪ್ಪೇಸ್ವಾಮಿ ಶಾಲೆಯಲ್ಲಿ ಹೆಚ್ಚು ದಿನಗಳ ಕಾಲಗಳ ರಜೆ ಹಾಕಿದ ಮಕ್ಕಳನ್ನು ಶಾಲೆಗೆ  ಕರೆತರಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು. ಜತೆಗೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲು ಸೂಚನೆ ನೀಡಿದರು.

ಮಹಿಳಾ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಅಧಿಕಾರಿಗಳು, ಇಲ್ಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಹಿಳಾ ಪೊಲೀಸ್ ಠಾಣಾ ಜನಸ್ನೇಹಿಯಾಗಿದೆಯಾದರೂ ಮಕ್ಕಳ ಸ್ನೇಹಿಯಾಗಿಲ್ಲವೆಂದ ಅವರು, ಸೂಕ್ತ ಮಾರ್ಪಾಡು ಮಾಡುವಂತೆ ಸಲಹೆ ನೀಡಿದರು.

ಈ ಸಲಹೆ ಬೆನ್ನಲ್ಲೇ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾ‌ರ್ ಎಂ.ಬಿ ನೇತೃತ್ವದ ಸಿಬ್ಬಂದಿ, ಕೆಲವೇ ಕ್ಷಣಗಳಲ್ಲಿ ಮಕ್ಕಳ ಸ್ನೇಹಿಯನ್ನಾಗಿಸಲು ಆಟಿಕೆಗಳು, ವಿವಿಧ ಫಲಕಗಳನ್ನು ಅಳವಡಿಸಿ, ವಾಟ್ಸಪ್‌ ಮೂಲಕ ಬದಲಾವಣೆಯನ್ನು ಆಯೋಗದ ಸದಸ್ಯರಿಗೆ ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಯ ಕ್ರಿಯಾಶೀಲತೆ ಗಮನಿಸಿದ ಅಧಿಕಾರಿಗಳು ರಾಜ್ಯದ ಇತರೆ ಮಹಿಳಾ ಪೊಲೀಸ್‌ ಠಾಣೆಗಳಲ್ಲಿ ಇದೇ ಮಾದರಿ ಅನುಸರಿಸುವಂತೆ ಸೂಚನೆ ನೀಡುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!