ಎಪಿಎಂಸಿ ಜಾಗದ ಸಮಸ್ಯೆ ಪರಿಹಾರಕ್ಕೆ ರೈತ ಸಂಘದಿಂದ ಪ್ರತಿಭಟನೆ

ಕೋಲಾರ: ಟೊಮೇಟೊ ಮಾರುಕಟ್ಟೆ ಜಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿ ಮಾಡುವ ಜೊತೆಗೆ ಟೊಮೇಟೊ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತಸಂಘದಿಂದ ಪಲ್ಲವಿ ಸರ್ಕಲ್ ನಲ್ಲಿ ಉಚಿತ ಟೊಮೇಟೊ, ತರಕಾರಿ ಹಂಚಿ, ಕಂದಾಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹತ್ತಾರು ವರ್ಷಗಳಿಂದ ಟೊಮೇಟೊಗೆ ಬಾಧಿಸುತ್ತಿದ್ದ ಅಂಗಮಾರಿ ಊಜಿ ರೋಸ್ ಮತ್ತಿತರರ ರೋಗಗಳಿಂದ ತತ್ತರಿಸಿದ್ದ ರೈತರಿಗೆ ಈ ವರ್ಷ ಯಾವುದೇ ಟೊಮೇಟೊ ಬೆಳೆಗೆ ರೋಗವಿಲ್ಲದೆ ಸಮೃದ್ಧವಾಗಿ ಬೆಳೆ ಬಂದಿದ್ದು, ಫಸಲು ಉತ್ತಮವಾಗಿದ್ದರೂ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ತೋಟಗಳಲ್ಲಿಯೇ ಕೊಳೆಯುವ ಜೊತೆಗೆ ಮಾರುಕಟ್ಟೆಗೆ ತಂದಿರುವ ಫಸಲು ಹರಾಜು ಆಗದೆ ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ನಷ್ಟವಾಗಿ ಖಾಸಗಿ ಸಾಲಕ್ಕೆ ರೈತರು ಸಿಲುಕುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರವನ್ನು ಒತ್ತಾಯಿಸಿದರು.

ಒಂದು ಎಕರೆ ಟೊಮೇಟೊ ಬೆಳೆಯಬೇಕಾದರೆ ದುಬಾರಿಯಾಗಿರುವ ಕೃಷಿ ಕ್ಷೇತ್ರದ ಬಿತ್ತನೆ ಬೀಜದಿಂದ ಔಷಧಿಯವರೆಗೂ ಬಂಡವಾಳ ಹಾಕಲು 2 ರಿಂದ 3 ಲಕ್ಷ ಖರ್ಚು ಬರುತ್ತಿದೆ. ಬೆಲೆ ಕುಸಿತವಾಗಿರುವುದರಿಂದ ಹಾಕಿದ ಬಂಡವಾಳ ಕೈಗೆ ಸಿಗದೆ ಕನಿಷ್ಟ ಕೂಲಿ ಕಾರ್ಮಿಕರಿಗೆ ಕೂಲಿ ನೀಡದ ಮಟ್ಟಕ್ಕೆ ಬೆಲೆ ಕುಸಿತವಾಗಿದೆ. ಇರುವ ಫಸಲನ್ನು ತೋಟದಲ್ಲೂ ಬಿಡದೆ ಮಾರುಕಟ್ಟೆಗೆ ತರಲಾಗದ ಅತಂತ್ರ ಪರಿಸ್ಥಿತಿಯಲ್ಲಿರುವ ಟೊಮೇಟೊ ಬೆಳೆಗಾರರು ಬೆವರ ಹನಿಗೆ ತಕ್ಕಂತೆ ಕನಿಷ್ಟ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ರಕ್ಷಣೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ. ಮಾತನಾಡಿ, 20 ವರ್ಷಗಳಿಂದ ಏಷ್ಯಾದಲ್ಲಿಯೇ ಅತಿದೊಡ್ಡ 2ನೇ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ಮಾರುಕಟ್ಟೆಯ ಅಭಿವೃದ್ಧಿಗೆ ಅವಶ್ಯಕತೆಯಿರುವ 100 ಎಕರೆ ಜಮೀನನ್ನು ಹುಡುಕಿ ಮಂಜೂರು ಮಾಡುವಲ್ಲಿ ಕಂದಾಯ ಸರ್ವೇ
ಅಧಿಕಾರಿಗಳು ವಿಫಲವಾಗಿದ್ದಾರೆ. ಹೋರಾಟಗಾರರು ಹುಡುಕಿಕೊಟ್ಟಿರುವ ಸರ್ಕಾರಿ ಜಮೀನನ್ನು ಭೂಗಳ್ಳರಿಂದ ತೆರವುಗೊಳಿಸಿ ಮಾರುಕಟ್ಟೆಗೆ ಮಂಜೂರು ಮಾಡಬೇಕಾದ ಅಧಿಕಾರಿಗಳೇ ಭೂಗಳ್ಳರಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಹೈಕೋರ್ಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಕುತಂತ್ರ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿವರ್ಷ ಟೊಮೇಟೊ ಅವಕ ಜೂನ್ ತಿಂಗಳಲ್ಲಿ ಪ್ರಾರಂಭವಾದಾಗ ಮಾರುಕಟ್ಟೆ ಜಾಗದ ಸಮಸ್ಯೆಯಿಂದ ವ್ಯಾಪಾರಸ್ಥರು ರೈತರು ತರುವ ಫಸಲನ್ನು ತಮಗೆ ಇಷ್ಟ ಬಂದ ಬೆಲೆಗೆ ಖರೀದಿ ಮಾಡಿ ರೈತರ ಬೆವರ ಹನಿಯನ್ನು ಒಂದು ನಿಮಿಷದಲ್ಲಿ ಕಸಿಯುತ್ತಿದ್ದಾರೆ. 20 ವರ್ಷಗಳಿಂದ
ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಎಪಿಎಂಸಿ ಅಧಿಕಾರಗಳು ಬದಲಾಗುತ್ತಿದ್ದಾರೆಯೇ ಹೊರತು ಮಾರುಕಟ್ಟೆಯ ಜಾಗದ ಸಮಸ್ಯೆ ಮಾತ್ರ ಬದಲಾಗುತ್ತಿಲ್ಲ
ಏಕೆ ಎಂದು ಪ್ರಶ್ನೆ ಮಾಡಬೇಕಾದ ಸಮಯ ಬಂದಿದೆ ಎಂದು ರೈತರಿಗೆ ಸಲಹೆ ನೀಡಿದರು.

ಮಾರುಕಟ್ಟೆ ಜಾಗದ ವಿಚಾರವನ್ನು ಜಿಲ್ಲಾಡಳಿತ ಕೈಗಾರಿಕೆ ಅಭಿವೃದ್ಧಿ ಎಂದು ಪರಿಗಣಿಸಿ 100 ಎಕರೆ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಹೆಚ್ಚಿನ ಪರಿಹಾರವನ್ನು ನೀಡಿ ವೇಮಗಲ್ ಇಲ್ಲವೇ ನರಸಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಏಕೆ ಗುರುತಿಸುತ್ತಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಿ ರೈತರು, ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳ ರಕ್ಷಣೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಜೊತೆಗೆ ನಿಮ್ಮ ಮನವಿಯನ್ನು ಸರ್ಕಾರಕ್ಕೆ ನೀಡುವ ಭರವಸೆ ನೀಡಿದರು.

ಹೋರಾಟದಲ್ಲಿ. ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಹಳ್ಳಿ ಮಂಜುನಾಥ ರಾಜ್ಯ ಸಂಚಾಲಕ ಬಂಗವಾದಿ
ನಾಗರಾಜಗೌಡ, ತೆರ್ನಹಳ್ಳಿ ಅಂಜಿನಪ್ಪ, ಅಪ್ಪೋಜಿರಾವ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಪ್ಪ, ಸುಪ್ರಿಂ ಚಲ, ಚಂದ್ರಪ್ಪ, ಪುತ್ತೇರಿ ರಾಜು, ಗಿರೀಶ್, ಶೈಲಜ, ಗೌರಮ್ಮ, ರತ್ನಮ್ಮ, ವೆಂಕಟಮ್ಮ, ಮುನಿರತ್ನಮ್ಮ, ಶಾರದಮ್ಮ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *