ಎತ್ತಿನಹೊಳೆ ನೀರು ಬಯಲು ಸೀಮೆ ಜಿಲ್ಲೆಗಳಿಗೆ ಶೀಘ್ರ ಹರಿಸಲಾಗುವುದು- ಡಿಸಿಎಂ ಡಿಕೆಶಿ

ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 243 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ನೆಲಮಂಗಲ ತಾಲ್ಲೂಕಿನ ಕರೇಗೌಡನಹಳ್ಳಿ ಕೆರೆಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು, ಸಚಿವ ರೊಟ್ಟಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿ ರಾಜ್ಯದ ಮಹಾ ಜನತೆ 136 ಸೀಟುಗಳನ್ನು ಕೊಟ್ಟು ನಮ್ಮ ಸರ್ಕಾರವನ್ನು ಗೆಲ್ಲಿಸಿದ್ದೀರಿ ನಿಮಗೆ ಧನ್ಯವಾದಗಳು. ವೃಷಭಾವತಿ ನೀರನ್ನು ಬಹಳ ಹಿಂದೆಯೇ ಸಂಸ್ಕರಣ ಮಾಡಿ ಹರಿಯಲು ಬಿಡಬೇಕು ಎಂದು ಅಂದುಕೊಂಡಿದ್ದೇವು. ರೈತರ ಬದುಕಿಗೆ ಏನಾದರೂ ಸಹಾಯ ಮಾಡಬೇಕು ರೈತರಿಗೆ ಸಂಬಳವಾಗಲಿ, ಪೆನ್ಷನ್, ಪಿಂಚಣಿಯ ಸೌಲಭ್ಯಗಳು ಇರುವುದಿಲ್ಲ. ರೈತರ ಉಳಿವಿಗಾಗಿ ಅವರ ಅನುಕೂಲಕ್ಕಾಗಿ ಸರ್ಕಾರ ಯೋಜನೆಯನ್ನು ರೂಪಿಸಿದೆ. ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು. ವೃಷಭಾವತಿ ಯೋಜನೆಯು 1900 ಕೋಟಿ ರೂಗಳ ಯೋಜನೆಯಾಗಿದ್ದು. 148 ಟ್ಯಾಂಕ್ ಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ.

ಎತ್ತಿನಹೊಳೆ ಯೋಜನೆಗೆ ಹಾಸನ ಭಾಗದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಸಮಸ್ಯೆ ಆಗಿತ್ತು, ಆದಷ್ಟು ಶೀಘ್ರ ಬಗೆಹರಿಸಿ, ಈ ಭಾಗಕ್ಕೆ ಎತ್ತಿನಹೊಳೆಯ ನೀರು ತರಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ ಬಯಲು ಸೀಮೆ ಪ್ರದೇಶಗಳಲ್ಲಿ ನೀರಿನ ಕೊರತೆ ನೀಗಿಸಲು ನಾನು ಕೇಂದ್ರದಲ್ಲಿ ಸಂಸತ್ ಸದಸ್ಯ ಆಗಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಯೋಜನೆ ರೂಪಿಸಿ ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ ಯೋಜನೆ ಜಾರಿಗೆ ತರಲಾಯಿತು. ವೃಷಭಾವತಿ ನೀರು ದೇವನಹಳ್ಳಿ, ದೊಡ್ಡಬಳ್ಳಾಪುರ ಭಾಗಕ್ಕೆ ಕೂಡ ಆದಷ್ಟು ಬೇಗ ಬರಲು ಡಿಪಿಆರ್ ಸಿದ್ದಪಡಿಸಿ ಪ್ರಸಕ್ತ ಸಾಲಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಎತ್ತಿನಹೊಳೆ ಯೋಜನೆಯು ಬಯಲು ಸೀಮೆ ರಾಜ್ಯಗಳ ಆಶಾಭಾವನೆ. ಮೊದಲು ಕುಡಿಯುವ ನೀರು ಸಿಗಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ನಂತರ ಕೆರೆ ತುಂಬಿಸಿ. ಒಂದು ವರ್ಷದಲ್ಲಿ ದೊಡ್ಡಬಳ್ಳಾಪುರ ಕ್ಕೆ ಎತ್ತಿನಹೊಳೆ ನೀರು ಬರುವ ವಿಶ್ವಾಸವಿದೆ. ಈ ಭಾಗದ ಶಾಸಕರ ಸಭೆ ಕರೆದು ಎತ್ತಿನಹೊಳೆ ಬಗ್ಗೆ ಚರ್ಚಿಸಿ, ಆದಷ್ಟು ಬೇಗ ನೀರು ಕೊಡಲು ಉಪಮುಖ್ಯಮಂತ್ರಿಗಳಲ್ಲಿ ಕೋರಿದರು.

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತರ ಬಹುದಿನಗಳ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. 2016 ರಲ್ಲಿ ಕೆ.ಸಿ ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಎರಡೇ ವರ್ಷಗಳಲ್ಲಿ ಉದ್ಘಾಟನೆ ಮಾಡಿ ಕೋಲಾರ ಜಿಲ್ಲೆಯ ಭಾಗದ 400 ಕೆರೆಗಳಿಗೆ ನೀರು ಹರಿಸಲಾಗಿದೆ. 2017ರಲ್ಲಿ ಹೆಚ್.ಎನ್ ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ 2019 ಕ್ಕೆ ಉಧ್ಘಾಟಿಸಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ಹೊರಿಸಲಾಗಿದೆ. ವೃಷಭಾವತಿ ನೀರು ಹರಿಸುವ ಯೋಜನೆ ಅಡಿ 270 ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದ್ದು. 4 ಟಿ.ಎಂ.ಸಿ ನೀರನ್ನು ಕೆರೆಗಳಿಗೆ ಹರಿಸಲಾಗುವುದು.
ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸಿದ ನಂತರ ಅಂತರ್ಜಲ ಮಟ್ಟ ಹೆಚ್ಚಾಗಿ, ರೈತರು ಕೃಷಿ ತೋಟಗಾರಿಕೆ ಹೈನುಗಾರಿಕೆ ಪಶುಸಂಗೋಪನೆಯಲ್ಲಿ ತೊಡಗಿದ್ದಾರೆ. ಬರಡು ಭೂಮಿ ಈಗ ಕೃಷಿ ಭೂಮಿ ಆಗಿ ಮಾರ್ಪಾಡಾಗಿದೆ. ಇದು ರೈತರ ಮೇಲಿನ ನಮ್ಮ ಸರ್ಕಾರ ಬದ್ಧತೆ ಎಂದರು.

ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕರಾದ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಗಣೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಶಾ ನಾರಾಯಣಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *