ವಿವಿಧ ಪ್ರಕರಣ ಭೇದಿಸಿದ ಪೊಲೀಸರು: ಬಂಧಿತರಿಂದ ಅಪಾರ ಪ್ರಮಾಣದ ಮಾಲು ವಶ

ಜಯನಗರ ಪೊಲೀಸ್ ಠಾಣೆ ಪೊಲೀಸರು ಮನೆ ಕಳ್ಳತನ ಮತ್ತು ವಾಹನ ಕಳವು ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಬಂಧಿತರಿಂದ ಒಟ್ಟು 390 ಗ್ರಾಂ ಚಿನ್ನದ ಬುಲಿಯನ್ ಮತ್ತು 2 ಕಳವಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ₹32 ಲಕ್ಷ ವಾಗಿದೆ. ಸದರಿ ಬಂಧನದಿಂದ ಬೆಂಗಳೂರು ನಗರದಾದ್ಯಂತ ದಾಖಲಾಗಿದ್ದ 4 ಪ್ರಕರಣಗಳ ಪತ್ತೆಗೆ ಕಾರಣವಾಗಿದೆ. ನಾಗರಿಕರು ವಾಹನಗಳನ್ನು ಸುರಕ್ಷಿತ  ಪ್ರದೇಶಗಳಲ್ಲಿ ನಿಲ್ಲಿಸಲು, ಹೆಚ್ಚುವರಿ ಲಾಕಿಂಗ್ ವ್ಯವಸ್ಥೆಗಳನ್ನು ಬಳಸಲು ಮತ್ತು ಸಾಧ್ಯವಾದಲ್ಲಿ GPS ಆಧಾರಿತ ಟ್ರ್ಯಾಕರ್‌ಗಳನ್ನು ಅಳವಡಿಸಲು ಸಲಹೆ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಹೇಳಿದರು.

ಅದೇ ರೀತಿ, ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ಸಂಬಂಧಿಕರ ನಿವಾಸದಲ್ಲಿ ಮನೆ ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದು, ಬಂಧಿತನಿಂದ ₹24.51 ಲಕ್ಷ ಮೌಲ್ಯದ 258 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ನಿವಾಸಿಗಳಿಗೆ ಮನೆ ಭದ್ರತೆಯನ್ನು ಹೆಚ್ಚಿಸಲು, ಪ್ರಯಾಣದ ಯೋಜನೆಗಳನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಲು ಅಥವಾ 112 ಕ್ಕೆ ಕರೆ ಮಾಡಲು ಕೋರಲಾಗಿದೆ ಎಂದು ಹೇಳಿದರು.

ಮಾದಕ ದ್ರವ್ಯ ಕಳ್ಳಸಾಗಣೆಯ ವಿರುದ್ಧ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಬೆಂಗಳೂರು ನಗರ ಪೊಲೀಸರು (ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ, ಗೋವಿಂದರಾಜನಗರ ಪೊಲೀಸ್ ಠಾಣೆ, ಮತ್ತು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ) — ಗಾಂಜಾ ಅಕ್ರಮ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 109 ಕೆಜಿ ಗಾಂಜಾ, ಮೂರು ಮೊಬೈಲ್ ಫೋನ್‌ಗಳು, ಒಂದು ಸರಕು ವಾಹನ, ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ, ಇದರ ಒಟ್ಟು ಮೌಲ್ಯ ₹89.20 ಲಕ್ಷಗಳಾಗಿವೆ ಎಂದು ತಿಳಿಸಿದರು..

ಎಂಸಿಸಿಟಿಎನ್‌ಎಸ್ (ಮೊಬೈಲ್ ಕಂಪಾನಿಯನ್ ಫಾರ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ & ಸಿಸ್ಟಮ್ಸ್) ಮೂಲಕ ನಿಗಾ ಮೂಲಸೌಕರ್ಯದ ತ್ವರಿತಗತಿಯ ವಿಸ್ತರಣೆಯನ್ನು ಒತ್ತಿ ಹೇಳಿದರು. ಏಪ್ರಿಲ್ 30, 2025 ರ ವೇಳೆಗೆ, ಒಟ್ಟು 5,35,815 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ನಗರದಾದ್ಯಂತ ಜಿಯೊ-ಟ್ಯಾಗ್ ಮಾಡಲಾಗಿದೆ – ಜನವರಿ 1, 2024 ರಿಂದ 3,03,104 ಕ್ಯಾಮೆರಾಗಳ ಹೆಚ್ಚಳವಾಗಿದೆ. ಎಲ್ಲಾ 8 ವಿಭಾಗಗಳಲ್ಲಿ ಈ ಗಮನಾರ್ಹ ವೃದ್ಧಿಯು ಅಪರಾಧ ತಡೆಗಟ್ಟುವಿಕೆ, ಪತ್ತೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಬಲಪಡಿಸುತ್ತದೆ ಎಂದರು.

ಬೆಂಗಳೂರು ನಗರ ಪೊಲೀಸರ CSB-SIS ತಂಡವು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಟಾಟಾ ಐಪಿಎಲ್ ಟಿ20 ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂರು ಜನಗಳನ್ನು ವ್ಯಕ್ತಿಗಳನ್ನು ಬಂಧಿಸಿದೆ. ಒಟ್ಟು 13 ಟಿಕೆಟ್‌ಗಳು, 3 ಮೊಬೈಲ್ ಫೋನ್‌ಗಳು, ₹1,000 ನಗದು ಮತ್ತು ಸಂಬಂಧಿತ ಬ್ಯಾಂಕ್ ಖಾತೆಯಿಂದ ₹36,190 ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.

ಕೊತ್ತನೂರು ಪೊಲೀಸರು ಎಂಡಿಎಂಎ  ಅಕ್ರಮ ಸ್ವಾಧೀನ ಮತ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 416 ಗ್ರಾಂ ಎಂಡಿಎಂಎ, ₹15,000 ನಗದು, ಹೊಂಡಾ ಸಿವಿಕ್ ಕಾರು, ದ್ವಿಚಕ್ರ ವಾಹನ, ಎರಡು ಮೊಬೈಲ್ ಫೋನ್‌ಗಳು ಮತ್ತು ಮಾದಕ ವ್ಯಾಪಾರದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು ಇದರ ಒಟ್ಟು ಮೌಲ್ಯ ₹52.15 ಲಕ್ಷಗಳಾಗಿವೆ. ಯಾವುದೇ ಮಾದಕ ವ್ಯಸನ ಸಂಬಂಧಿತ ಚಟುವಟಿಕೆಗಳನ್ನು 1908 ಕ್ಕೆ ವರದಿ ಮಾಡಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *