ಅರಣ್ಯ ಇಲಾಖೆ ಕಿರುಕುಳ ಖಂಡಿಸಿ ಮತದಾನ ಬಹಿಷ್ಕಾರ: ಕೆಳಗಿನನಾಯಕರಾಂಡನಹಳ್ಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಲವು ವಿಘ್ನಗಳೂ ಎದುರಾಗಿವೆ.  ತಾಲೂಕಿನ ಹಲವು ಗ್ರಾಮಗಳಲ್ಲಿ‌ ಸಮಸ್ಯೆ‌ ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕರಿಸಲು‌ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಕಂದಾಯ ಗ್ರಾಮ ಘೋಷಣೆ, ಒಳ ಮೀಸಲಾತಿ ರದ್ದು, ಅರಣ್ಯ ಇಲಾಖೆ ಕಿರುಕುಳ ತಾಲೂಕಿನ‌ ಕೆಳಗಿನನಾಯಕರಾಂಡಹಳ್ಳಿ ಗ್ರಾಮಸ್ಥರು ಚುನಾವಣೆ  ಬಹಿಷ್ಕರಿಸುವುದಾಗಿ ಎಚ್ಚರಿಕೆ‌ ನೀಡಿದರು.

ಶನಿವಾರ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗ್ರಾಮದ ಮುಖಂಡರು, ಅಧಿಕಾರಿಗಳು‌ ಸೂಕ್ತ ಕ್ರಮ‌ ಕೈಗೊಳ್ಳದ ಹೊರತು ಮತದಾನ ಮಾಡುವುದಿಲ್ಲ ಎಂದು ಘೋಷಿಸಿದರು.

ಗ್ರಾಮಸ್ಥರ ಬೇಡಿಕೆಗಳೇನು..?

1.ಕೆಳಗಿನನಾಯಕರಾಂಡನಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವುದು.

2. ಗೋಮಾಳ ಭೂಮಿಯಲ್ಲಿ ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ ಖಾತೆ ಮಾಡಿಸುವುದು.

3. ಅರಣ್ಯ ಇಲಾಖೆಯು ರೈತರಿಗೆ ನೀಡುತ್ತಿರುವ ಕಿರುಕುಳದಿಂದ ಮುಕ್ತಿಗೊಳಿಸಬೇಕು.

4. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿ ಹಿಂಪಡೆಯುವಂತೆ ಒತ್ತಾಯ

5. ರೈತರ ಮೇಲೆ ಹಾಕಿರುವ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಬೇಕು

6. ಗ್ರಾಮಕ್ಕೆ ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹ.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಾ ನಾಯಕ್, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಬಂದು ಆಶ್ವಾಸನೇ ನೀಡುತ್ತಾರೆಯೇ ಹೊರತು ಬಾಕಿ ದಿನಗಳಲ್ಲಿ ಇತ್ತ ಸುಳಿಯುವುದೂ ಇಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ಒಟ್ಟು 140 ಮನೆ, 900 ಜನಸಂಖ್ಯೆ , 486 ಮತದಾರರು ಇದ್ದು, ನಾವು ಯಾರೂ ಮತ ಹಾಕೋದಿಲ್ಲ. ನಮಗೆ ತುಂಬಾ ಅನ್ಯಾಯ ಆಗಿದೆ ಅವಕಾಶ ವಂಚಿತರಾಗಿದ್ದೇವೆ. ಅಲೆಮಾರಿಗಳು ಎಂದು ಕುಂಟುನೆಪದಿಂದ ನಮ್ಮನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸಲಾಗಿದೆ, ನಮ್ಮ ಬೇಡಿಕೆಗಳು ಈಡೇರುವವರಿಗೆ ಮತದಾನ ಬಹಿಷ್ಕಾರ ಮಾಡುತ್ತೇವೆ. ನಮ್ಮ ಊರಿಗೆ ಮತಪೆಟ್ಟಿಗೆ ತರಲು ಬಿಡೋದಿಲ್ಲ ಎಂದು ಘಂಟಾಘೋಷವಾಗಿ ತಿಳಿಸಿದರು.

1951-52, 1983-84, 1994-95ನೇ ಇಸವಿಗಳಲ್ಲಿ ಅಂಗೈ ಅಗಲದಷ್ಟು ಗೋಮಾಳ ಜಮೀನನ್ನು ನಮ್ಮ ಹೆಸರಿಗೆ ಖಾತೆ ಮಾಡಿಕೊಡಲಾಗಿತ್ತು. ಅದರಲ್ಲಿ ನಾವು ಉತ್ತು ಬಿತ್ತು ಜೀವನ ನಡೆಸುತ್ತಿದ್ದೆವು. ಇನ್ನೂ ಕೆಲವರು ನಮೂನೆ 57, ನಮೂನೆ 53 ಅರ್ಜಿ‌ ಹಾಕಿ ಉಳುಮೆ ಮಾಡುತ್ತಿದ್ದಾರೆ. ಈಗ ಏಕಾಏಕಿ ಅರಣ್ಯ ಇಲಾಖೆ ಬಂದು ಈ ಭೂಮಿ ಅರಣ್ಯ ಇಲಾಖೆಗೆ ಒಳಪಟ್ಟಿದೆ ಎಂದು ಟ್ರಂಚ್ ಹೊಡೆಯಲು ಮುಂದಾಗಿ ನಮಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ನಂತರ ಮಾತನಾಡಿದ ತಾಲೂಕು ಪಂಚಾಯತಿ ಮಾಜಿ ಸದಸ್ಯ ಗೋಪಾಲ್ ನಾಯ್ಕ್, ಒಳ ಮೀಸಲಾತಿಯಿಂದ ನಮ್ಮ ಸಮುದಾಯಕ್ಕೆ ಭಾರೀ ಅನ್ಯಾಯ ಆಗುತ್ತಿದೆ. ಇದನ್ನು ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸರ್ಕಾರ, ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಊರಿನ ಗ್ರಾಮಸ್ಥರು.

Leave a Reply

Your email address will not be published. Required fields are marked *