ಇನ್ನೇನು ಯುಗಾದಿ ಹಬ್ಬ ಬಂದೇ ಬಿಡ್ತು… ಯುಗಾದಿ ಹಬ್ಬ ಆದ ಮರುದಿನ ಬರೋದೇ ವರ್ಷ ತೊಡಕು. ವರ್ಷ ತೊಡಕು ದಿನ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ. ವರ್ಷ ತೊಡಕು ದಿನದಂದು ಮಾಂಸ ಮಾರಾಟ ಬರಾಟೆ ಮಾರುಕಟ್ಟೆಯಲ್ಲಿ ಬಹಳ ಜೋರಾಗಿರುತ್ತದೆ. ಈ ಹಿನ್ನೆಲೆ ವರ್ಷ ತೊಡಕು ಇನ್ನೊಂದು ವಾರ ಇರುವಾಗಲೇ ಶೆಡ್ ನಲ್ಲಿರುವ ಹಂದಿಗಳು ರಾತ್ರೋರಾತ್ರಿ ಕಳ್ಳರ ಕೈಚಳಕದಿಂದ ಮಂಗಮಾಯವಾಗುತ್ತಿವೆ. ಎಲ್ಲೆಲ್ಲಿ, ಎಷ್ಟೆಎಷ್ಟು ಹಂದಿಗಳು ಕಳ್ಳತನವಾಗಿವೆ ಎಂಬುದರ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ….
ದೊಡ್ಡಬಳ್ಳಾಪುರ, ರಾಜಾನುಕುಂಟೆ, ದೇವನಹಳ್ಳಿಯಲ್ಲಿ ಹಂದಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಾಮಾನ್ಯವಾಗಿ ಹಂದಿ ಶೆಡ್ ಗಳು ಊರ ಹೊರವಲಯದಲ್ಲಿ ಇರುತ್ತವೆ. ಮಾಲೀಕರು ಹಂದಿ ಶೆಡ್ ಬಳಿ ಇಲ್ಲದೇರುವಾಗ ಹೊಂಚಾಕಿ ರಾತ್ರೋರಾತ್ರಿ ಬರುವ ಕಳ್ಳರು, ಸಿಸಿಟಿವಿ ಇದ್ದರೂ ರಾಜಾರೋಷವಾಗಿ ಶೆಡ್ ಗೆ ನುಗ್ಗಿ ಸಿಕ್ಕಸಿಕ್ಕ ಹಂದಿಗಳನ್ನು ಗೂಡ್ಸ್ ವಾಹನಕ್ಕೆ ತುಂಬಿಕೊಂಡು ಪರಾರಿಯಾಗುತ್ತಾರೆ….
ಮಾಲೀಕರು ಬೆಳಗ್ಗೆ ಶೆಡ್ ಬಳಿ ಬಂದು ನೋಡಿದಾಗ ಹಂದಿಗಳು ನಾಪತ್ತೆಯಾಗಿರುವುದು ಕಂಡುಬರುತ್ತದೆ. ಹೀಗೆ ಕಳೆದ ಒಂದು ವಾರದಲ್ಲಿ ಮೂರು ಕಡೆ ಸುಮಾರು 120ಕ್ಕೂ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ, ಎಷ್ಟೆಎಷ್ಟು ಹಂದಿ ಕಳವು….
ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಮಾ.23ರ ಶನಿವಾರ ರಾತ್ರಿ ಹಂದಿ ಶೆಡ್ ಗೆ ನುಗ್ಗಿದ ಕಳ್ಳರು ಸುಮಾರು 34 ಹಂದಿ ಮರಿಗಳ ಕಳ್ಳತನ ಮಾಡಿದಲ್ಲದೇ, ಸೋಮವಾರ ರಾತ್ರಿ ಕೂಡ ಅದೇ ಹಂದಿ ಶೆಡ್ ಗೆ ನುಗ್ಗಿ 17 ತಾಯಿ ಹಂದಿಗಳ ಕಳವು ಮಾಡಿದ್ದಾರೆ ಎಂದು ಹಂದಿ ಶೆಡ್ ಮಾಲೀಕರು ತಿಳಿಸಿದ್ದಾರೆ.
ರಾಜಾನುಕುಂಟೆ
ಅದೇರೀತಿ ಯಲಹಂಕದ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಸಮೀಪದ ಸೀತ ಕೆಂಪನಹಳ್ಳಿ ಬಳಿ ಮಾ.22 ರಾತ್ರಿ ಹಂದಿ ಶೆಡ್ ಕಾವಲುಗಾರನಿಗೆ ಹೆದರಿಸಿ ಮೊಬೈಲ್ ಕಸಿದು ಸುಮಾರು 20 ಹಂದಿಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೇವನಹಳ್ಳಿ
ಇದರ ಜೊತೆಗೆ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಗಲ ಗ್ರಾಮದ ಲೋಕೇಶ್ ಎಂಬುವರ ಶೆಡ್ ನಲ್ಲಿ ಮಾ.21ರಂದು ರಾಜಾರೋಷವಾಗಿ 50 ಹಂದಿಗಳನ್ನು ಕಳ್ಳತನ ಮಾಡಿದ್ದಾರೆ. ಶೆಡ್ ಗೆ ಎಂಟ್ರಿ ಆದ 6 ಜನರ ತಂಡ, ಓರ್ವ ಕಾವಲು ಕಾಯುತ್ತಿದ್ದರೆ, ಮತ್ತೆ ನಾಲ್ಕು ಜನ ಹಂದಿಗಳನ್ನು ಶೆಡ್ ನಿಂದ ಹೊತ್ತುಕೊಂಡು ಬಂದು ಲೋಡ್ ಮಾಡುತ್ತಿದ್ದರು. ಮತ್ತೊಬ್ಬ ವಾಹನ ಮೇಲೆ ನಿಂತು ತುಂಬಿಕೊಳ್ಳುತ್ತಿದ್ದ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಹೀಗೆ ಕಳೆದ ಒಂದು ವಾರದಲ್ಲಿ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 120ಕ್ಕೂ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ನಡೆದಿದೆ.
ವರ್ಷವಿಡೀ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಪ್ರಾಣಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ಮಾಡುತ್ತಿರುವ ಕಳ್ಳರ ಗ್ಯಾಂಗ್. ಹಬ್ಬಕ್ಕೆ ಮಾರಾಟ ಮಾಡಲು ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದರು. ವರ್ಷವೆಲ್ಲಾ ಸಾಕಿ ಇನ್ನೇನು ಹಬ್ಬಕ್ಕೆ ಮೂರ್ಕಾಸು ಲಾಭವನ್ನು ನೋಡುತ್ತೇವೆ ಎಂದುಕೊಂಡಿದ್ದ ರೈತರಿಗೆ ಕಳ್ಳರ ಹಾವಳಿಯಿಂದ ಈಗ ಶಾಕ್ ಹೊಡೆದಂತೆ ಆಗಿದೆ. ಲಕ್ಷಾಂತರ ರೂ. ನಷ್ಟ ಅನುಭವಿಸಿದ ರೈತರು ಪೊಲೀಸ್ ಠಾಣೆಗಳಿಗೆ ಅಲೆಯುತ್ತಿದ್ದಾರೆ.
ಒಟ್ಟಾರೆ, ಸಾಕು ಪ್ರಾಣಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹಂದಿಯ ಜೊತೆಗೆ ಕುರಿ, ಮೇಕೆ ಕಳ್ಳತನ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ರೈತರು ರಾತ್ರಿಯಿಡೀ ಸಾಕು ಪ್ರಾಣಿಗಳನ್ನು ಕಾಯಬೇಕಾದ ಸ್ಥಿತಿ ಎದುರಾಗಿದೆ. ಕಳವು ಪ್ರಕರಣಕ್ಕೆ ಪೊಲೀಸರು ಬ್ರೇಕ್ ಹಾಕದೆ ಇದ್ದಲ್ಲಿ ಯುವಕರ ಸ್ವಾವಲಂಬಿ ಬದುಕಿಗೆ ಕೊಳ್ಳಿ ಇಟ್ಟಾಂತಾಗುತ್ತದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಖದೀಮರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುತ್ತಾ ಕಾದು ನೋಡಬೇಕಿದೆ….