ಹಾಲಿನ ಖರೀದಿ ದರ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಕರ್ನಾಟಕ ಹಾಲು ಒಕ್ಕೂಟ ಮಹಮಂಡಳ( ಕೆಎಂಎಫ್) ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಹಕಾರಿ ಕ್ಷೇತ್ರದಲ್ಲಿ ಬಹಳ ಗಟ್ಟಿಯಾಗಿ ಬೇರೂರಿರುವ ನಮ್ಮ ಹೆಮ್ಮೆಯ ಕರ್ನಾಟಕ ಹಾಲು ಮಹಾ ಮಂಡಲಿ ಸಂಸ್ಥೆಯ ಬೃಹತ್ ಉದ್ಯಮವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿ, ಲಕ್ಷಾಂತರ ಜನ ರೈತರ ಆಶಾಕಿರಣವಾಗಿದೆ. ಈಗ ಈ ಸಂಸ್ಥೆ ವೈಜ್ಞಾನಿಕವಾಗಿ ರೈತರಿಗೆ ಹಾಲಿನ ದರವನ್ನು ನೀಡಿದ್ದರೆ ನಮಗೆ ಸರ್ಕಾರದಿಂದ ಯಾವುದೇ ಸಹಾಯಧನ ಬೇಕಾಗಿರಲಿಲ್ಲ. ಆದರೆ, ರೈತರಿಗೆ ನೀಡುವ ಯೋಗ್ಯ ಬೆಲೆಯನ್ನು ನೀಡದೆ ಸಂಸ್ಥೆಯು ಲಾಭದಾಯಕವಾಗಿ ನಿಲ್ಲದೆ ರೈತರನ್ನು ಸಂಕಷ್ಟಕ್ಕೆ ಪದೇ ಪದೇ ದೂಡುವ ಚಾಳಿ ನಮ್ಮ ಸಂಸ್ಥೆಯಾದ್ದಗಿದೆ. ಯಾವಗಲು ಉತ್ಪಾದಕನ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು, ಈ ಉತ್ತಮ ಕಾರ್ಯಕ್ಕೆ ನಮ್ಮ ಮಹಾ ಮಂಡಲಿ ಮುಂದಾಗಬೇಕು. ಅದನ್ನು ಬಿಟ್ಟು ಪದೇ ಪದೇ ಹಾಲಿನ ದರವನ್ನು ಕಡಿತ ಮಾಡುವುದು, ಇಂಡಿ, ಬೂಸ ಮತ್ತು ಪಶು ಆಹಾರದ ಬೆಲೆಯನ್ನು ಹೆಚ್ಚು ಮಾಡುವುದು ಇದು ಸರಿಯಾದ ಮಾರ್ಗವಲ್ಲ. ಈ ವಾಸ್ತವ ವಿಚಾರಗಳನ್ನು ತಿಳಿಸಲು ನಾವು ಬಂದಿದ್ದೇವೆ ರೈತ ಸಂಘ ಹೇಳಿದೆ.
-:ಹಕ್ಕೊತ್ತಾಯಗಳು:-
1. ರೈತರು ಸರಬರಾಜು ಮಾಡುವ ಪ್ರತೀ ಲೀಟರ್ ಹಾಲಿಗೆ ಕನಿಷ್ಠ 50 ರೂ. ನೀಡಬೇಕು.
2. ಪಶು ಆಹಾರದ ಬೆಲೆ ಪದೇ ಪದೇ ಹೆಚ್ಚಿಸಬಾರದು. ಹಾಲಿನ ದರದ ಪ್ರಮಾಣವನ್ನು ನೋಡಿ ಪಶು ಆಹಾರದ ಬೆಲೆ ನಿಗದಿಯಾಗಬೇಕು.
3. ರೈತರ ಬೆಳೆಯುವ ಜೋಳವನ್ನ ಪಶು ಆಹಾರಕ್ಕೆ ನೇರವಾಗಿ ಖರೀದಿಸಬೇಕು.
4. ಸ್ಥಳೀಯ ಹಾಲು ಮಾರಾಟಕ್ಕೆ ವಿಧಿಸುವ ಲೇವಿಯನ್ನು ರದ್ದುಗೊಳಿಸಬೇಕು.
5. ಹಾಲಿನ ದರ MSP ಶಾಸನಬದ್ದ ಮಾಡುವವರೆಗೆ ಪ್ರೋತ್ಸಹ ಧನ 10ರೂ. ನೀಡಬೇಕು.
6. ಹಾಲಿನ ಬೆಲೆ ನಿಗದಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು.
7. ಈ ಸಂಸ್ಥೆಯ ನೇಮಕಾತಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಮಾತ್ರ ಸಿಮಿತವಾಗಿರಬೇಕು.
8. ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳ ನೌಕರರನ್ನು ಒಕ್ಕೂಟದ ನೌಕರರೆಂದು ಪರಿಗಣಿಸಬೇಕು.