ಹಿಂದುಳಿದ ಸಮುದಾಯಗಳ ಪರವಾಗಿ ಇದ್ದೇವೆ-‌ ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ತೀರಾ ಹಿಂದುಳಿದ ಸಮುದಾಯ ಗಳಲ್ಲೊಂದಾದ ಸವಿತಾ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ದವಾಗಿದೆ ಸಮುದಾಯದ ಕಾರ್ಯಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ಜಮೀನು ಸೇರಿದಂತೆ ರಾಜಕೀಯ ಸ್ಥಾನಮಾನವನ್ನು ನೀಡಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ರಾಜ್ಯ ಸವಿತಾ ಸಮಾಜದ ಜಿಲ್ಲಾ ಘಟಕದಿಂದ ಅಮೋಘ ನಾದಸ್ವರ ಕಛೇರಿ ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೌರಿಕ ವೃತ್ತಿಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಸವಿತಾ ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಿಂದುಳಿದ ಸಮುದಾಯಗಳ ಪರವಾಗಿ ಕಾಂಗ್ರೆಸ್ ಸರ್ಕಾರವು ಇದ್ದು ಮುಂದಿನ ದಿನಗಳಲ್ಲಿ ನಡೆಯುವ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ನಾಮನಿರ್ದೇಶನದಲ್ಲಿ ಸಹ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸವಾಗಲಿದೆ ಎಂದರು.

ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಅವಕಾಶ ನೀಡಲಾಗಿದೆ ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಸಮುದಾಯದ ಹಿರಿಯರ ಹಾದಿಯಲ್ಲಿ ನಾವು ಎಲ್ಲರೂ ನಡೆಯಬೇಕು ಸಣ್ಣ ಸಮಾಜ ಎಂಬ ಕೀಳುಹಿರಿಮೆ ಬಿಟ್ಟು ತಾವುಗಳು ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಸಣ್ಣ ಸಮುದಾಯಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ಗುರುತಿಸಿ ಪೋತ್ಸಾಹಿಸಬೇಕು ರಾಜಕೀಯ ಪಕ್ಷಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರವೇ ಉತ್ತಮ ಭವಿಷ್ಯ ಕಾಣಲು ಸಾಧ್ಯವಿದೆ ನಿಮ್ಮ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಾಲಯ ಸಮಿತಿ ಸದಸ್ಯ ನರೇಶ್ ಕುಮಾರ್ ಮಾತನಾಡಿ, ಸಣ್ಣ ಸಮುದಾಯಗಳು ಒಗ್ಗಟ್ಟಿನಿಂದ ತಮ್ಮ ಶಕ್ತಿ ತೋರಿಸದೆ ಹೋದರೆ ಪ್ರತಿ ಹಂತದಲ್ಲೂ ನಮ್ಮನ್ನು ಗುರುತಿಸುವುದಿಲ್ಲ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮುದಾಯವು ಬೆಳಯಬೇಕು ಸರ್ಕಾರಗಳು ಸಹ ಪೋತ್ಸಾಹಿಸಿ ಗೌರವಿಸುವ ಕೆಲಸವಾಗಬೇಕು ಸಮುದಾಯವು ಮೂರು ವೃತ್ತಿಯಲ್ಲಿ ಇದ್ದರು ಸರಿಯಾದ ಸ್ಥಾನಮಾನಗಳು ದೊರೆಯುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಪಿಟೀಲು ಚೌಡಯ್ಯ ಪ್ರಶಸ್ತಿ ಪುರಸ್ಕೃತ ಆರ್ ಶ್ರೀರಾಮಲು ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಸವಿತಾ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಕಿರಣ್ ಕುಮಾರ್, ಜಿಲ್ಲಾ ಅಧ್ಯಕ್ಷ ಎಸ್ ಮಂಜುನಾಥ್, ವಿಜಯನಗರ ಮಂಜುನಾಥ್, ಮುಖಂಡರಾದ ಪುಟ್ಟುರಾಜು, ಮುನಿರಾಜು, ಚಲಪತಿ, ಗಂಗಣ್ಣ, ಸದಾನಂದ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *