ಕುವೆಂಪು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ-ಅಧ್ಯಾಪಕ ಜೆ.ಪಿ.ಉಪಾಧ್ಯೆ

‘ಮನುಷ್ಯ ಜಾತಿ ತಾನೊಂದು ವಲಂ’ ಎಂದು‌ ಆದಿಕವಿ ಪಂಪನ ಆಶಯವನ್ನು ಒಳಗೊಂಡ ವಿಶ್ವಮಾನವ ಸಂದೇಶವನ್ನು ಕುವೆಂಪು ಹೇಳಿದ್ದಾರೆ ಎಂದು ಜವಾಹರ್ ನವೋದಯ ವಿದ್ಯಾಲಯದ ಕನ್ನಡ ಅಧ್ಯಾಪಕ  ಜೆ.ಪಿ.ಉಪಾಧ್ಯೆ ತಿಳಿಸಿದರು.

ದೊಡ್ಡಬಳ್ಳಾಪುರ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.‌

ಕುವೆಂಪು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.  ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.  ಪ್ರತಿಯೊಬ್ಬರು ಕುವೆಂಪು ಅವರು ಹೇಳಿರುವ ವಿಶ್ವಮಾನವ ಸಂದೇಶದ ತತ್ವಾದರ್ಶ ಮೈಗೊಡಿಸಿಕೊಂಡರೆ ಸಮಾಜದಲ್ಲಿ ಸಾಮರಸ್ಯ ನೆಲಸಲಿದೆ ಎಂದರು.

ವಿಜ್ಞಾನ ವಿಭಾಗದ ಉಪನ್ಯಾಸಕ ಅಶೋಕ ಪುಜಾರಿ ಮಾತನಾಡಿ, ಕುವೆಂಪು ಅವರು ತಮ್ಮ ಸಾಹಿತ್ಯ ಮತ್ತು ವಿಚಾರಗಳಲ್ಲಿ ವೈಚಾರಿಕ ಪ್ರಜ್ಞೆಯ ಮಹತ್ವಕ್ಕೆ ಹೆಚ್ಚು ಆದ್ಯತೆ ನೀಡಿದರು. ಜಾತಿ, ಮತ, ಪಂಥಕ್ಕೆ ಆಧ್ಯತೆ ನೀಡದೇ ಮಾನವೀಯ ಧರ್ಮ ಮೇಲು ಎಂದು ಸಾರಿದ್ದರು. ಕುವೆಂಪು ತಮ್ಮ ಕಾಲಮಾನದ ಎಲ್ಲ ಮೌಲ್ಯಗಳನ್ನು ವೈಚಾರಿಕತೆಯ ಪ್ರಖರ ಬೆಳಕಿನಲ್ಲಿ ಕಂಡವರು.  ವೈಚಾರಿಕತೆಯನ್ನು  ಕುವೆಂಪು ತಮ್ಮ  ಬರಹ ಮತ್ತು ಬದುಕುಗಳಲ್ಲಿ ಅಳವಡಿಸಿಕೊಂಡವರು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಚೈತನ್ಯ ಕುವೆಂಪುರವರ ಜೀವನ ಪರಿಚಯ ಮಾಡಿಕೊಟ್ಟಳು. ಅಭಿರಾಮ, ಅಮಿತ್, ನಿವೇದಿತಾ ಮೊದಲಾದವರು ಕುವೆಂಪು ಗೀತೆಗಳನ್ನು ಹಾಡಿದರು. ಜವಾಹರ್ ನವೋದಯ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *