ಟಿವಿಎಸ್ ಎಕ್ಸ್ಎಲ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸಾವನ್ನಪ್ಪಿರುವ ಘಟನೆ ಸೋಮವಾರ(ಡಿ.23) ಸಂಜೆ ಸುಮಾರು 6:30ರಲ್ಲಿ ತಾಲೂಕಿನ ಕನ್ನಮಂಗಲ ಗೇಟ್ ಬಳಿಯ ಪೆಟ್ರೋಲ್ ಬಂಕ್ ತಿರುವಿನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ರಾಮದೇವನಹಳ್ಳಿ ನಿವಾಸಿಗಳಾದ ಅನ್ನದಾನಪ್ಪ (66), ನಾಗರತ್ನಮ್ಮ (55) ಎಂದು ಗುರುತಿಸಲಾಗಿದೆ.
ಮೃತರು ನಿನ್ನೆ ಸಂಜೆ ಮಧುರೆ ಶನಿ ಮಹಾತ್ಮ ಸ್ವಾಮಿ ದೇವರ ದರ್ಶನ ಪಡೆಯಲು ರಾಮದೇವನಹಳ್ಳಿ ಗ್ರಾಮದಿಂದ ಬರುವ ವೇಳೆ ಕನ್ನಮಂಗಲ ಗೇಟ್ ಬಳಿಯ ಪೆಟ್ರೋಲ್ ಬಂಕ್ ತಿರುವಿನಲ್ಲಿ ಕ್ಯಾಂಟರ್ ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ. ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ದಂಪತಿಯ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಗಿತ್ತು. ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಅಸುನೀಗಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಷಯ ತಿಳಿದ ಎಎಸ್ ಪಿ ನಾಗೇಶ್, ಡಿವೈಎಸ್ ಪಿ ರವಿ.ಪಿ, ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಕಲ್ಲಪ್ಪ ಶಂಕರಪ್ಪ ಖರಾತ್ ಮತ್ತು ಸಿಬ್ಬಂದಿ ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.