
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇತಿಹಾಸಕಾರ ಡಾ.ಎಸ್ ವೆಂಕಟೇಶ್ ಅವರು ಹೇಳುವಂತೆ ಹುಲಿಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ಕಡಿಮೆ. ತೂಬಗೆರೆ ಹೋಬಳಿಯ ತಿಮ್ಮೋಜನಹಳ್ಳಿಯಲ್ಲಿ ಎರಡು ಮತ್ತು ಗೆದ್ದಲಪಾಳ್ಯದ ರಸ್ತೆಯಲ್ಲಿ ಒಂದು ಹುಲಿಬೇಟೆ ವೀರಗಲ್ಲುಗಳು ಲಭ್ಯವಾಗಿವೆ. ಈಗ ಇವುಗಳ ಜೊತೆಗೆ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಹುಲಿಬೇಟೆಯ ವೀರಗಲ್ಲೊಂದು ಲಭ್ಯವಾಗಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಇದನ್ನು 10ನೇ ಶತಮಾನಕ್ಕೆ ಸೇರಿಸಬಹುದು ಎನ್ನುತ್ತಾರೆ ವೆಂಕಟೇಶ್.
ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ. ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರೆವಣಿಗೆ ಇಲ್ಲ. ಒಟ್ಟಾರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈವರೆಗೆ ನಾಲ್ಕು ಹುಲಿಬೇಟೆ ವೀರಗಲ್ಲುಗಳು ಲಭ್ಯವಾದಂತಾಯಿತು.
ಮಾನವ ಮತ್ತು ಹುಲಿಗಳ ಸಂಘರ್ಷ ಇಂದು-ನಿನ್ನೆಯಿಂದಲ್ಲ ಇತಿಹಾಸ ಪೂರ್ವಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿ ಜೊತೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟಕಲ್ಲುಗಳೆ ಹುಲಿಬೇಟೆ ವೀರಗಲ್ಲುಗಳು. ಇಂತಹ ಸ್ಮಾರಕ ಶಿಲ್ಪಗಳಿಂದ ಹುಲಿಗಳ ವಾಸಸ್ಥಾನದ ಕುರಿತಂತೆ ಅಧ್ಯಯನ ಮಾಡುವುದಕ್ಕೆ ಸಾದ್ಯವಿದೆ.
ಬ್ರಿಟಿಷ್ ಆಡಳಿತದ ಅವಧಿಯವರೆಗೆ ಈ ಭಾಗದಲ್ಲಿ ಹುಲಿಗಳಿದ್ದ ಮಾಹಿತಿಯಿದೆ. ಆದರೆ ರಾಜ್ಯದ ಅರಣ್ಯ ಇಲಾಖೆಗಳ ದಾಖಲೆಗಳ ಪ್ರಕಾರ 1950 ರ ನಂತರ ಇಲ್ಲಿ ಹುಲಿಗಳಿದ್ದ ಯಾವುದೇ ಮಾಹಿತಿಯಿಲ್ಲ.
ಇದೇ ಡಿಸೆಂಬರ್ 26 ಕ್ಕೆ ಹುಲಿಕುಂಟೆಯ ಬೇಟೆರಂಗನಾಥಸ್ವಾಮಿಯ ಜಾತ್ರೆಯಿದೆ. ಕಾಕತಾಳೀಯವೆಂಬಂತೆ ಈಗಲೇ ಹುಲಿಬೇಟೆ ವೀರಗಲ್ಲು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಕೆಲವರು ಈ ಹುಲಿಬೇಟೆಯ ವೀರಗಲ್ಲನ್ನು ಗ್ರಾಮನಾಮದೊಂದಿಗೆ ತಳುಕು ಹಾಕುತ್ತಿರುವುದು ವಿಶೇಷ.