ಕೋಲಾರ: ಗಡಿಭಾಗದ ಚುಕ್ಕನಹಳ್ಳಿ ಸರ್ವೇ ನಂಬರ್ 35 ರಲ್ಲಿನ 10 ಜನ ರೈತರಿಗೆ ಎರಡನೇ ಹಂತದ ಮರಗಿಡಗಳಿಗೆ ಪರಿಹಾರ ಹಣವನ್ನು ಚಿತ್ತೂರು ಪಿಡಿ ಖಾತೆಯಿಂದ ಬಿಡುಗಡೆ ಮಾಡಿಸಿ ರೈತರಿಗೆ ವಿತರಣೆ ಮಾಡಬೇಕೆಂದು ರೈತಸಂಘದಿಂದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಮುಂದೆ ಖಾಲಿ ಮಡಿಕೆಗಳ ಸಮೇತ ಪ್ರತಿಭಟನೆ ಮಾಡಿ ಪರಿಹಾರಕ್ಕಾಗಿ ಒತ್ತಾಯಿಸಲಾಯಿತು.
ಪೂರ್ವಜರ ಕಾಲದಿಂದ ಕೃಷಿಭೂಮಿಯನ್ನು ನಂಬಿಕೊಂಡು ಗಂಜಿ ಕುಡಿಯುತ್ತಿದ್ದ ಕುಟುಂಬದ ಗಂಜಿ ಪಾತ್ರೆಯನ್ನು ಕಸಿದು ಪರಿಹಾರ ನೀಡದೇ ನಮ್ಮ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಅಧಿಕಾರಿಗಳಿಗೆ ಬಡವರ ಶಾಪ ತಟ್ಟುತ್ತದೆ ಎಂದು ನೊಂದ ರೈತರಾದ ರಾಜಣ್ಣ ಮತ್ತು ನಟರಾಜ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಳತೂರು ಮಾಲೂರು ವ್ಯಾಪ್ತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ 500 ಕೋಟಿ
ಪರಿಹಾರ ಅಕ್ರಮ ನಡೆಸಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳೇ ಗಡಿಭಾಗದ ನೊಂದ ರೈತರ 1 ಕೋಟಿ 17 ಲಕ್ಷ ಪರಿಹಾರಕ್ಕೆ ನಿಮ್ಮ ಕೈಕಾಲು ಹಿಡಿಯಬೇಕೇ. ಬಡವರ ಅನ್ನಕ್ಕೆ ಕನ್ನ ಹಾಕಿ ನಮ್ಮ ಹಣವನ್ನು ಲಪಟಾಯಿಸಲು ನಾಚಿಕೆಯಾಗುವುದಿಲ್ಲವೇ ಎಂದು ಹಿಡಿಶಾಪ ಹಾಕಿದರು.
ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ಗಡಿಭಾಗದ
ಚುಕ್ಕನಹಳ್ಳಿ ಸರ್ವೇ ನಂಬರ್ 35ರಲ್ಲಿನ 10 ಜನ ರೈತರ 2ನೇ ಮರಗಿಡಗಳ ಪರಿಹಾರದ ಹಣ
ಚಿತ್ತೂರಿನ ಪಿಡಿ ಖಾತೆಯಲ್ಲಿ 1.17.65,928 ರೂಗಳು ಇದ್ದು, ಅದನ್ನು ಬಿಡುಗಡೆ ಮಾಡಿಸಿ ರೈತರಿಗೆ ವಿತರಣೆ ಮಾಡಬೇಕಾದ ಜವಾಬ್ದಾರಿ ಸರಕಾರ ಲಕ್ಷಾಂತರ ರೂಪಾಯಿ ಸಂಬಳಕೊಟ್ಟು ನೇಮಕ ಮಾಡಿರುವ ಅಧಿಕಾರಿ ಜವಾಬ್ದಾರಿಯಲ್ಲವೇ ಎಂದು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹಣ ಬಿಡುಗಡೆ ಮಾಡಲು ಮಾತ್ರ ನಾವು, ಬೇರೆಯವರ ಖಾತೆಯಲ್ಲಿರುವ ಹಣವನ್ನು ರೈತರೇ ಹೋರಾಟ ಮಾಡಿ ಬಿಡುಗಡೆ ಮಾಡಿಸಿದರೆ ನಾವು ವಿತರಣೆ ಮಾಡುತ್ತೇವೆಂಬ ರೈತ ವಿರೋಧಿ ಧೋರಣೆ ನ್ಯಾಯವೇ ಭೂಮಿ ಕಳೆದುಕೊಂಡ ನೋವಿನಲ್ಲಿರುವ ರೈತರು ಪರಿಹಾರಕ್ಕೂ ಜಾತಕ ಪಕ್ಷಿಗಳಂತೆ ರಸ್ತೆಗಿಳಿದು ಹೋರಾಟ ಮಾಡಬೇಕೇ ಇದು ನಿಮಗೆ ಸರಿಯೇ. ರೈತರ ಮೇಲೆ ಕಾಳಜಿ ಇದ್ದರೆ
ಕೂಡಲೇ ಕಾನೂನಿನ ಸಲಹೆಗಾರರ ಪ್ರಕಾರ ಹಣ ಬಿಡುಗಡೆ ಮಾಡಬಹುದಲ್ಲವೇ ಎಂದು ಪ್ರಶ್ನೆ ಮಾಡಿದರು.
ಚಿತ್ತೂರು ಪಿಡಿ ಪರವಾಗಿ ಬರುವಂತಹ ಕಾರ್ತಿಕ್ ರೆಡ್ಡಿ ಅವರು ಗಡಿಭಾಗದ ರೈತರು ಅಧಿಕಾರಿಗಳಿಗೆ ಲಂಚವನ್ನು ನೀಡಿ ಹೆಚ್ಚಿನ ಮರಗಿಡಗಳ ಲೆಕ್ಕ ಬರೆಯಿಸಿಕೊಂಡು ಹೆಚ್ಚಿನ
ಪರಿಹಾರವನ್ನು ಪಡೆಯುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಆದರೆ, ನಿಮ್ಮ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತೋಟಗಾರಿಕೆ, ರೇಷ್ಮೆ, ಅರಣ್ಯ ಅಧಿಕಾರಿಗಳು ನೀಡಿರುವ ವರದಿ ತಪ್ಪೇ ನಿಮ್ಮ ಪ್ರಕಾರ ವರದಿ ಎಲ್ಲಿ. ಸತ್ಯಾಂಶ ಇದೆ ಎಂಬುದಾದರೆ ಚಿತ್ತೂರು ಪಿಡಿ
ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ನಮ್ಮ ಹಣವನ್ನು ಬಿಡುಗಡೆ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಡಿಎ ಅಧಿಕಾರಿ ಮಯೂರಿ ಮಲ್ಲಿ, ನಿಮ್ಮ ಸಮಸ್ಯೆಯನ್ನು
ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬಂಗವಾದಿ ನಾಗರಾಜಗೌಡ, ಮರಗಲ್ ಶ್ರೀನಿವಾಸ್, ಮೂರಂಡಹಳ್ಳಿ ಶಿವಾರೆಡ್ಡಿ, ಸುಪ್ರೀಂಚಲ, ಶಶಿಕುಮಾರ್, ಮುನಿರಾಜು, ಕುಮಾರ್, ನಾರಾಯಣಸ್ವಾಮಿ, ಮಾರಪ್ಪ, ಮೀಸೆ ವೆಂಕಟೇಶಪ್ಪ, ಜನಾರ್ಧನ್, ಬಾಬು, ಮಂಗಮ್ಮ,
ಫಾರೂಖ್ ಪಾಷ, ಭಾಸ್ಕರ್, ರಾಜೇಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಯಲ್ಲಣ್ಣ, ಶೈಲಜ, ರತ್ನಮ್ಮ, ಮುನಿರತ್ನಮ್ಮ, ಗೌರಮ್ಮ ಮುಂತಾದವರಿದ್ದರು.