ಜು.15ರಂದು ಚಾಲಕ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ಮೆರವಣಿಗೆ

ದೊಡ್ಡಬಳ್ಳಾಪುರ: ಭಾರತೀಯ ನ್ಯಾಯ ಸಂಹಿತೆ-2023 (ಬಿ.ಎಂ.ಎಸ್)ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಹೊಸ ಕಾನೂನಿನಲ್ಲಿ ರಸ್ತೆ ಸಾರಿಗೆ ಚಾಲಕರನ್ನು ಅಮಾನುಷವಾಗಿ ಶಿಕ್ಷಿಸುವ ಕ್ರಮಕ್ಕೆ ಮುಂದಾಗಿದೆ. ಚಾಲಕ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ಜು.15 ಬೆಳಿಗ್ಗೆ 10.30ಕ್ಕೆ ನಗರದ ಸಿದ್ದಲಿಂಗಯ್ಯ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎ.ವೆಂಕಟೇಶ್ ಹೇಳಿದರು.

ಅವರು ನಗರದ ಸಿಪಿಐಎಂ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವಾಹನ ಮಾಲೀಕರಿಂದ ತೆರಿಗೆ ಸಂಗ್ರಹ ಮಾಡಿದ್ದರು ಸಹ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿ ಮಾತ್ರ ವರ್ಷಗಳು ಕಳೆದರು ನಡೆಯುತ್ತಿಲ್ಲ. ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುವ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್, ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವ ಕೆಲಸಗಳು ನಡೆಯುತ್ತಿಲ್ಲ. ಆಟೋ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಮತ್ತು ಆಟೋ ನಿಲ್ದಾಣಗಳನ್ನು ಅಧಿಕೃತಗೊಳಿಸುವ ಕೆಲಸಗಳು ನಡೆಯುತ್ತಿಲ್ಲ. ಆದರೆ ಹೊಸ ಕಾನೂನಿನ ಮೂಲಕ ದುಬಾರಿ ದಂಡ ಹಾಗೂ ದುಬಾರಿ ಶುಲ್ಕ ವಿಧಿಸುವ ಮೋಟರ್ ವಾಹನಗಳ ತಿದ್ದುಪಡಿಗಳನ್ನು ಮಾತ್ರ ಜಾರಿಗೆ ತರುವ ಸರ್ಕಾರದ ನಿಯಮ ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಕರ್ನಾಟಕ ಮೋಟರ್ ಟ್ರಾಸ್ಪೋರ್ಟ್ ಮತ್ತು ಇತರೆ ನೌಕರರ ಸಾಮಾಜಿಕ ಸುರಕ್ಷತೆ ಮತ್ತು ಕಲ್ಯಾಣ ಕಾಯ್ದೆ-2024 ಇದರಲ್ಲಿ ಚಾಲಕರ ನೋಂದಣಿ ಹಾಗೂ ಯೋಜನೆಗಳನ್ನು ಶೀಘ್ರವಾಗಿ ಜಾರಿ ಮಾಡಬೇಕು. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಗಳ ಮೇಲೆ ಹಾಕುವ ತೆರಿಗೆಗಳನ್ನು ಕಡಿಮೆ ಮಾಡಬೇಕು. 15 ವರ್ಷಗಳ ಹಳೆಯ ವಾಹನಗಳ ನಿಷೇಧ ವಾಪಸಾತಿಯಲ್ಲಿ ಸಾರಿಗೆ ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಿರುವ ಸೆನ್ಸ್ ತೆಗೆದುಹಾಕಬೇಕು. ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆಯಲ್ಲಿನ ಆಶ್ರಯ ಯೋಜನೆ ಮೂಲಕ ಸರ್ವರಿಗೂ ಸೂರು ಎಂಬ ಸರ್ಕಾರದ ಆಶಯದಂತೆ ‘ಸಾರಥಿಸುರು’ ಯೋಜನೆಯನ್ನು ಶೀಘ್ರವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಹೊಸ ವಾಹನಗಳ ಮೇಲಿನ ಸರ್ಕಾರದ ಮಾರಾಟ ತೆರಿಗೆಯನ್ನು ಶೇ.28ರಿಂದ ಶೇ 5ಕ್ಕೆ ಇಳಿಸಬೇಕು. ಸಾರಿಗೆ ಚಾಲಕರಿಗೆ ಮರಣ ಶಾಸನವಾಗಿರುವ ಭಾರತೀಯ ನ್ಯಾಯ ಸಂಹಿತೆ 2023 (ಬಿ.ಎನ್.ಎಸ್)ರಲ್ಲಿ ಇರುವ ಅಪಘಾತಗಳನ್ನು ಕ್ರಿಮಿನಲ್ ಕೇಸ್ ಮಾಡುವ ಅಂಶಗಳು ರದ್ದಾಗಬೇಕು, ಹತ್ತು ವರ್ಷ ಜೈಲು ಶಿಕ್ಷೆ ಮತ್ತು ₹7 ಲಕ್ಷ ದಂಡ ವಿಧಿಸುವ ಚಾಲಕ ವಿರೋಧಿಯಾದ ಅಂಶಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಬಿ.ವಿ.ರಾಘವೇಂದ್ರ, ತಾಲ್ಲೂಕು ಕಾರ್ಯದರ್ಶಿ ಇನಾಯಿತ್ ಪಾಷಾ, ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಸಿ.ಎಂ.ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಸಾಧಿಕ್ ಪಾಷ,ಕಾರ್ಯದರ್ಶಿ ಎಜಾಜ್ ಪಾಷ, ಖಜಾಂಚಿ ಗುಲ್ಜಾರ್ ಪಾಷಾ, ತಾಲ್ಲೂಕು ಲಾರಿ ಡ್ರೈವರ್ಸ್ ಅಸೋಸಿಷನ್ ತಾಲ್ಲೂಕು ಕಾರ್ಯದರ್ಶಿ ಸೈಯದ್ ಅಲಿಮುಲ್ಲಾ, ತಾಲ್ಲೂಕು ಉಪಾಧ್ಯಕ್ಷ ಭಾಷಾ ಇದ್ದರು.

Leave a Reply

Your email address will not be published. Required fields are marked *