ಬಲವಂತವಾಗಿ ಬ್ಯಾಂಕ್ ಸಾಲ ವಸೂಲಿ: ಯೂನಿಯನ್ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

ರೈತರಿಂದ ಬಲವಂತವಾಗಿ ಸಾಲ ವಸೂಲಿ ಹಾಗೂ ಕೃಷಿ ಜಮೀನು ಹರಾಜು ಹಾಕುವ ನೋಟಿಸ್ ನೀಡಿರುವುದನ್ನು ಖಂಡಿಸಿ ನಗರದ ಯೂನಿಯನ್ (ಕಾರ್ಪೋರೇಷನ್) ಬ್ಯಾಂಕ್ ಎದುರು ದೊಡ್ಡಬಳ್ಳಾಪುರ ತಾಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಭೀಕರ ಬರದಿಂದಾಗಿ ಸರಕಾರ ಬರಗಾಲ ಎಂದು ಘೋಷಣೆ ಮಾಡಿ ರೈತರ ಸಾಲವನ್ನು ಯಾವುದೇ ಬ್ಯಾಂಕ್‌ಗಳು ಬಲವಂತವಾಗಿ ಸದ್ಯದ ಮಟ್ಟಿಗೆ ವಸೂಲಾತಿ ಮಾಡಬಾರದು ಎಂದು ಆದೇಶಿಸಿದೆ. ಆದಾಗ್ಯೂ, ಬ್ಯಾಂಕ್‌ಗಳು ಬಲವಂತವಾಗಿ ಸಾಲ ವಸೂಲಾತಿ ನೆಪದಲ್ಲಿ ರೈತರನ್ನು ಅವಮಾನಿಸುತ್ತಿದೆ. ಕೃಷಿ ಜಮೀನುಗಳನ್ನು ಹರಾಜು ಮಾಡುತ್ತೇವೆಂದು ನೋಟಿಸ್‌ಗಳನ್ನು ನೀಡುತ್ತಿದ್ದು, ಇದರಿಂದ ಮನನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿವೆ. ಆದ್ದರಿಂದ ಈ ಕೂಡಲೇ ಇದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಅಧ್ಯಕ್ಷ ಚನ್ನರಾಮಯ್ಯ, ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ್,  ಮುಖಂಡರಾದ ಮುನಿಕೃಷ್ಣಪ್ಪ, ಶಿವಾನಂದರೆಡ್ಡಿ, ಸತೀಶ, ಕೃಷ್ಣಾರೆಡ್ಡಿ, ಹಣಬೆ ಕೀರ್ತಿ, ರವೀಂದ್ರ, ಪುರುಷೋತ್ತಮ, ತೂಬಗೆರೆ ವಾಸು ಮತ್ತಿತರರಿದ್ದರು.

ರೈತರ ಬೇಡಿಕೆಗಳು

 1. ಕರೋನಾ ರೋಗ, ನೋಟು ಅಮಾನ್ಯೀಕರಣ ಮತ್ತು ಬರಗಾಲದಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಹಾಗಾಗಿ ರೈತರ ಕೃಷಿ ಸಾಲ ವಸೂಲಾತಿಯನ್ನು ಸದ್ಯಕ್ಕೆ ನಿಲ್ಲಿಸಬೇಕು.

 2. ರೈತರ ಕೃಷಿ ಭೂಮಿಯನ್ನು ಡಿಆರ್‌ಟಿ ನ್ಯಾಯಾಲಯಕ್ಕೆ ಹಾಕುವುದನ್ನು ಬ್ಯಾಂಕ್‌ಗಳು ನಿಲ್ಲಿಸಬೇಕು.

 3. ರೈತರಿಗೆ ಒಟಿಎಸ್ ಮೂಲಕ ಮರುಪಾವತಿ ಮಾಡಲು ಅವಕಾಶ ನೀಡಬೇಕು.

 4. ಸಾಲ ಪಾವತಿಸಿದ ರೈತರಿಗೆ ಮತ್ತೆ ಸಾಲ ನೀಡಬೇಕು.

Leave a Reply

Your email address will not be published. Required fields are marked *