ಯಲಹಂಕ-ಹಿಂದೂಪುರ ಟೋಲ್ ರಸ್ತೆಯಲ್ಲಿ ವಾಹನ ಸವಾರರಿಂದ ಟೋಲ್ ಸುಂಕ ವಸೂಲಿ ಮಾಡುವ ಟೋಲ್ ನವರು, ತೆಗೆದುಕೊಂಡ ಹಣಕ್ಕೆ ಸೇವೆ ಕೊಡಲಾಗುತ್ತಿದಿಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ, ಟೋಲ್ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ಸರ್ಕಲ್ ಗಳಲ್ಲಿ ಹೈಮಾಸ್ಟ್ ದೀಪಗಳಿಲ್ಲ, ರಸ್ತೆ ಬದಿಯಲ್ಲಿ ಚರಂಡಿ ಇಲ್ಲ, ಸ್ವಚ್ಛತೆಯೂ ಇಲ್ಲ, ಸೂಚನ ಫಲಕಗಳಿಲ್ಲ, ಟ್ರಾಫಿಕ್ ಸಿಗ್ನಲ್ ಗಳಿಲ್ಲ. ಅವ್ಯವಸ್ಥಿತವಾಗಿರುವ ಟೋಲ್ ರಸ್ತೆಯಿಂದ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕೇವಲ ವಾಹನ ಸವಾರರಿಂದ ಹಣ ಸಂಗ್ರಹಿಸುವುದಷ್ಟೇ ನಮ್ಮ ಕಾಯಕ, ಸೇವೆ ನೀಡುವುದು ನಮ್ಮ ಧರ್ಮ ಅಲ್ಲ, ಅಮಾಯಕ ವಾಹನ ಸವಾರರು ಸತ್ತರೇನು ಎಂಬ ಉಢಾಪೆಯಲ್ಲಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತೆ ಟೋಲ್ ರಸ್ತೆಯ ವ್ಯಾಪ್ತಿಯಲ್ಲಿ ಬರುವು ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿಯವರೆಗೂ ಕಳೆದ 15 ದಿನಗಳಿಂದ ಬೀದಿ ದೀಪಗಳು ಉರಿಯುತ್ತಿಲ್ಲ.
ಯಲಹಂಕ-ಹಿಂದೂಪುರ ಟೋಲ್ ಸಂಸ್ಥೆ ಜನರ ರಕ್ತ ಹೀರುವ ಸಂಸ್ಥೆಯಾಗಿದೆ. ದೃಷ್ಟಿ ಬೊಂಬೆ ರೀತಿ ರಸ್ತೆಯ ವಿಭಜಕದ ಮೇಲೆ ಬೀದಿ ದೀಪಗಳನ್ನ ಹಾಕಲಾಗಿದೆ. ಕಳೆದ 15 ದಿನಗಳಿಂದ ಟಿ.ಬಿ ಸರ್ಕಲ್ ನಿಂದ ಪಾಲನಜೋಗಹಳ್ಳಿವರೆಗೂ ಒಂದೇ ಒಂದು ಲೈಟ್ ಉರಿಯುತ್ತಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಎಪಿಎಂಸಿ ಗೆ ಸಾಕಷ್ಟು ರೈತರು ಬರುತ್ತಾರೆ. ಕೆಲವು ರೈತರು ಸೈಕಲ್ ನಲ್ಲಿ ಬರುತ್ತಾರೆ, ಕತ್ತಲ ರಸ್ತೆಯಲ್ಲಿ ಬರುವುದರಿಂದ ಟೋಲ್ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ ಎಂದು ಸ್ಥಳೀಯ ಮುಖಂಡರಾದ ಮಹಮ್ಮದ್ ಆದಿಲ್ ಪಾಷಾ ಕಿಡಿಕಾರಿದ್ದಾರೆ.
ರಸ್ತೆಯಲ್ಲಿ ಕಸವನ್ನು ತೆಗೆಯುವುದಿಲ್ಲ, ರಸ್ತೆಯಲ್ಲಿನ ಹಳ್ಳಗಳನ್ನ ದುರಸ್ಥಿ ಮಾಡದೆ ಆಗೆಯೇ ಬಿಟ್ಟಿದ್ದಾರೆ, ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಟೋಲ್ ನವರಿಗೆ ಮಾನವೀಯತೆಯೇ ಇಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.
ಕಳೆದ 15 ದಿನಗಳ ಹಿಂದೆ ಯಲಹಂಕ-ಹಿಂದೂಪುರ ಟೋಲ್ ರಸ್ತೆಯ ಅವ್ಯವಸ್ಥೆ ಕಂಡು ಶಾಸಕ ಧೀರಜ್ ಮುನಿರಾಜು ಅವರು ಕೆಂಡಮಂಡಲರಾಗಿ ಟೋಲ್ ಮ್ಯಾನೇಜರ್ ಗೆ ಹಿಗ್ಗಾಮುಗ್ಗ ಜಾಡಿಸಿದರು. ಸಮಸ್ಯೆಗಳನ್ನ ಬಗೆಹರಿಸದಿದ್ದಲ್ಲಿ 15 ದಿನಕ್ಕೆ ಟೋಲ್ ನಿಲ್ಲಿಸ್ತಿನಿ, ನಿಂಗೆ 15 ದಿನ ಟೈಮ್ ಅಷ್ಟೆ, ನೀನು ಹೇಗೆ ಟೋಲ್ ಕಲೆಕ್ಟ್ ಮಾಡ್ತಿಯೋ ನೋಡ್ತಿನಿ ಎಂದು ಎಚ್ಚರಿಕೆಯನ್ನ ನೀಡಿದರು. ಆದರೆ, ವ್ಯವಸ್ಥೆಯ ವ್ಯಂಗ್ಯವೋ ಏನೋ, ಶಾಸಕರು ಎಚ್ಚರಿಕೆ ನೀಡಿದ ಕಳೆದ 15 ದಿನಗಳಿಂದ ಟೋಲ್ ರಸ್ತೆಯಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ, ಸ್ಥಳೀಯ ಶಾಸಕರಿಗೆ ಬೆಲೆ ಕೊಡದ ಟೋಲ್ ಸಂಸ್ಥೆಯವರು ಸಾರ್ವಜನಿಕರಿಗೆ ಬೆಲೆ ಕೊಡ್ತರಾ ಎನ್ನುವಂತಾಗಿದೆ.