ನಾಳೆಯಿಂದ ಎರಡು ದಿನಗಳ ಕಾಲ ತಾಲೂಕಿನ ಜಿಂಕೆ ಬಚ್ಚಹಳ್ಳಿ ಗ್ರಾಮದಲ್ಲಿ ಊರಿನ ಗ್ರಾಮಸ್ಥರಿಂದ ಶ್ರೀ ಅಷ್ಟಲಕ್ಷ್ಮೀದೇವಿಯವರ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಅಷ್ಟಲಕ್ಷ್ಮೀದೇವಿಯವರಾದ ಸಪ್ಪಲ್ಲಮ್ಮ ದೇವಿ, ಪಟಾಲಮ್ಮ ದೇವಿ, ವಿದ್ಯಾಚೌಡೇಶ್ವರಿ ತಾಯಿ, ದೊಡ್ಡಮ್ಮ ತಾಯಿ, ಪಳೇಕಮ್ಮ ತಾಯಿ, ಖಡ್ಗ ಮಹೇಶ್ವರಮ್ಮ ತಾಯಿ, ಮುತ್ಯಾಲಮ್ಮ ತಾಯಿ, ಮಾರಮ್ಮ ತಾಯಿ, ಯಲ್ಲಮ್ಮ ತಾಯಿ, ಕಾಳಮ್ಮ ತಾಯಿ, ಕೆಂಪಮ್ಮ ದೇವಿ, ಗಂಗಮ್ಮ ತಾಯಿ, ಮಹೇಶ್ವರಮ್ಮ ತಾಯಿ, ಚಿಕ್ಕ ಮಾರಮ್ಮ ತಾಯಿ, ನಲ್ಡಿ ಮಾರಮ್ಮ ತಾಯಿ ದೇವರುಗಳನ್ನು ಪೂಜಾ – ಕೈಂಕರ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ, ಕುಂಭಾಭಿಷೇಕ ಮೂಲಕ ಕರೆತರಲಾಗುವುದು.
ಬಳಿಕ ಅಷ್ಟ ಲಕ್ಷ್ಮೀದೇವಿಯವರಿಗೆ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಮಹಾಮಂಗಳಾರತಿ ನೇರವೇರಲಿದೆ. ಸಂಜೆ 6 ಗಂಟೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಳಿಕ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬುಧವಾರ ವಿಶೇಷ ಪೂಜಾಕಾರ್ಯಕ್ರಮಗಳನ್ನು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಬಳಿಕ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
ಎಲ್ಲರ ಚಿತ್ತ ಬಿ.ಸಿ.ಆನಂದ್ ಕುಮಾರ್ ನಡೆಯತ್ತ:
ಸಾರ್ವತ್ರಿಕ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಜಿಂಕೆ ಬಚ್ಚಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಬಿ.ಸಿ ಆನಂದ್ ಕುಮಾರ್ ರಾಜಕೀಯ ನಡೆ/ತೀರ್ಮಾನ ತೀವ್ರ ಕುತೂಹಲ ಕೆರಳಿಸಿದೆ. ಊರಿನಲ್ಲಿ ನಡೆಯುತ್ತಿರುವ ದೇವಿಯವರ ಉತ್ಸವದ ಬಳಿಕ ಸೂಕ್ತ ತೀರ್ಮಾನ ಪ್ರಕಟಿಸಿಲಿದ್ದಾರೆ ಎಂದು ಬಿಸಿ ಆನಂದ್ ಕುಮಾರ್ ಆಪ್ತ ಮೂಲಗಳು ತಿಳಿಸಿವೆ.