ಕೋಲಾರ: ಬಿಜೆಪಿಯದ್ದು ಭ್ರಷ್ಟ ಹಾಗೂ ಕೋಮುವಾದಿ ಸರ್ಕಾರ. ವೋಟಿಗಾಗಿ ದೇಶ ಒಡೆಯಲು ಮುಂದಾಗಿದ್ದಾರೆ. ಜೆಡಿಎಸ್ ಕೆಟ್ಟ ಮನಸ್ಥಿತಿ ಇರುವ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹಾಗೂ ದುಡ್ಡು ಮಾಡಲು ಈ ಪಕ್ಷ ಬಿಜೆಪಿ ಜೊತೆ ಸೇರಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಆರೋಪಿಸಿದರು.
ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ನಂದಿನಿ ಪ್ಯಾಲೇಸ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು ದೇಶದ ಭದ್ರತೆಗಾಗಿ, ಜನರ ನೆಮ್ಮದಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ದುಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದರು
ಹಿಂದೆ ಮಹಾನುಭವ ಎಸ್.ಮುನಿಸ್ವಾಮಿ ಐದು ವರ್ಷ ಜಾತಿ ರಾಜಕಾರಣ ಮಾಡಿದರು. ಕ್ಷೇತ್ರಕ್ಕೆ ಒಂದೂ ರೂಪಾಯಿ ಅನುದಾನ ತಂದುಕೊಡದ ಯಾವುದಾದರೂ ಸಂಸದ ಇದ್ದರೆ ಅದು ಕೋಲಾರ ಸಂಸದ ಮುನಿಸ್ವಾಮಿ ಮಾತ್ರ. ಯಾವುದೇ ಸಭೆಗೆ ಹೋದರೂ ಅವರು ಜಗಳ ಮಾಡುತ್ತಿದ್ದರು ಮುನಿಸ್ವಾಮಿ ಇದ್ದ ಕಾರಣ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ 10 ವರ್ಷ ಹಿಂದೆ ಹೋಗಿದೆ. ಗೌತಮ್ ಗೆದ್ದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು
ನಮ್ಮ ಅಭ್ಯರ್ಥಿಗೆ ಕೆ.ಎಚ್.ಮುನಿಯಪ್ಪ ಅವರು ಆಶೀರ್ವಾದ ಮಾಡಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ಟಿಕೆಟ್ ಕೇಳಿದ್ದರು. ಟಿಕೆಟ್ ಸಿಗದ ಕಾರಣ ಈಗ ಗೌತಮ್ ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ‘ಏ.4 ರಂದು ನಾಮಪತ್ರ ಸಲ್ಲಿಸಲಾಗುವುದು. ಹೆಚ್ಚು ಜನ ಸೇರಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೇಳಿ. ಮೋದಿ ಸುಳ್ಳಿನ ಸರದಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏ.5 ರಂದು ಈ ಬಾರಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ’ ಎಂದರು.
ಬಿಜೆಪಿ ಸೇರಿದರೆ ಕ್ಲೀನ್ ಚಿಟ್ ಕೊಡುತ್ತಾರೆ. ಇಲ್ಲದಿದ್ದರೆ ಐ.ಟಿ, ಇ.ಡಿ ಎಂದು ಬೆದರಿಕೆ ಹಾಕುತ್ತಾರೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ. ಕೋಲಾರದಲ್ಲಿ ಗೌತಮ್ ಅವರನ್ನು ಗೆಲ್ಲಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆ.ಎಚ್.ಮುನಿಯಪ್ಪ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ಎದುರಾಳಿಗಳು ಗ್ಯಾರಂಟಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಭ್ರಮೆ ಸೃಷ್ಟಿಸುತ್ತಿದ್ದಾರೆ. ಆದರೆ, ಜನ ಬದಲಾವಣೆ ಬಯಸಿದ್ದಾರೆ’ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಬಿಜೆಪಿಯವರು ದೇವರನ್ನು ಏಕೆ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆಯೋ ಗೊತ್ತಿಲ್ಲ. ಜೈಶ್ರೀರಾಮ್ ಎನ್ನುತ್ತಾರೆ. ಖಾತೆಗೆ 15 ಲಕ್ಷ ಹಾಕುತ್ತೇವೆ ಎನ್ನುತ್ತಾರೆ. ಜೊತೆಗೆ ಇ.ಡಿ, ಐ.ಟಿಯನ್ನೂ ಹಿಂದೆ ಕಳುಹಿಸುತ್ತಾರೆ. ಇನ್ನು ಜೆಡಿಎಸ್ ದಿವಾಳಿ ಆಗಿದೆ. ಅದಕ್ಕೆ ಅವರಿಗೆ ಬಿಜೆಪಿಯವರು ಮೂರು ನಾಮ ಹಾಕಿದ್ದಾರೆ. ಹಾಸನ, ಮಂಡ್ಯ ಹಾಗೂ ಕೋಲಾರ ಸೀಟು ಬಿಟ್ಟುಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ನನ್ನನ್ನು 16 ದಿನಗಳಲ್ಲಿ ಗೆಲ್ಲಿಸಿದ್ದಿರಿ. ಹಾಗೆಯೇ ಗೌತಮ್ ಅವರನ್ನು ಗೆಲ್ಲಿಸಿ. ಜೊತೆಗೂಡಿ ಅಭಿವೃದ್ಧಿ ಮಾಡುತ್ತೇವೆ. ನಿಮ್ಮ ಜೊತೆಯಲ್ಲಿದ್ದು, ಕಾಪಾಡುತ್ತೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಕೇಂದ್ರದಿಂದ ಯಾವುದಾದರೂ ಯೋಜನೆ ಸಿಕ್ಕಿದೆಯೇ ಬಿಜೆಪಿ ಶ್ರೀಮಂತರ ಪಕ್ಷ. ಕಾಂಗ್ರೆಸ್ ಬಡವರ ಪಕ್ಷ. ನಮ್ಮ ಗ್ಯಾರಂಟಿಗಳೇ ಸಾಕ್ಷಿ. ಈ ಯೋಜನೆಗಳಿಂದ ಬಡವರಿಗೆ ಸಹಾಯವಾಗಲಿದೆ. ನಾನು ಗೆದ್ದರೆ ಪ್ರಜಾಪ್ರಭುತ್ವ ಗೆಲ್ಲಲಿದೆ’ ಎಂದು ಹೇಳಿದರು.
ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ ಗೌತಮ್ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ಗೆದ್ದು ಸಂಸತ್ ಗೆ ತೆರಳಲಿ ಎಂದು ಆಶಿಸಿದರು.
ಮಾಜಿ ಸಚಿವ ನಿಸ್ಸಾರ್ ಅಹ್ಮದ್ ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ವೈ.ಶಿವಕುಮಾರ್, ಮುಖಂಡರಾದ ಆದಿನಾರಾಯಣ, ನಾಗರಾಜ್, ಹನೀಫ್, ಅಬ್ದುಲ್ ಕಯ್ಯುಂ, ಮುನಿಆಂಜಿನಪ್ಪ, ಸೀಸಂದ್ರ ಗೋಪಾಲಗೌಡ, ಭರತ್, ಪ್ರಸಾದ್ ಬಾಬು, ಅಕ್ರಂ, ಶ್ರೀಕೃಷ್ಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ ಉದಯಶಂಕರ್ ರತ್ಮಮ್ಮ, ಎಲ್.ಎ.ಮಂಜುನಾಥ್, ಓಬಿಸಿ ಮಂಜುನಾಥ್, ಅಕ್ರಂ ಇದ್ದರು.