ಕೋಲಾರ: ನಗರದ ಕೀಲುಕೋಟೆಯ ಬೀರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ತಾಲ್ಲೂಕಿನ ಹುತ್ತೂರು ಹೋಬಳಿಯ ಅಜ್ಜಪನಹಳ್ಳಿ ಗ್ರಾಮದಲ್ಲಿ ಭಾನುವಾರ ಬೀರೇಶ್ವರ ಸ್ವಾಮಿಯ ಮೆರವಣಿಗೆ ಪರ್ವ ನಡೆಯಿತು.
ಈ ಸಂದರ್ಭದಲ್ಲಿ ಸ್ವಾಮಿಯ ಕುಲಸ್ಥರಾದ ಗ್ರಾಮ್ ಶಂಕರಪ್ಪ, ಚಿಕ್ಕಣ್ಣ, ನವೀನ್, ನಾಗರಾಜ್ (ಎಸ್ಎಂಟಿ) ಅವರು ಪರ್ವಕ್ಕೆ ಸ್ವಾಗತ ಕೋರಿದರು ಗ್ರಾಮದ ಚನ್ನರಾಯಸ್ವಾಮಿ ದೇವಾಲಯದ ಬಳಿ ಮೆರವಣಿಗೆ ಪರ್ವ ಬಂದಾಗ ತಲೆಯ ಮೇಲೆ ತೆಂಗಿನ ಕಾಯಿ ಇಟ್ಟು ಒಡೆಯುವ ಪವಾಡ ಗಮನ ಸೆಳೆಯಿತು. ಗ್ರಾಮದಲ್ಲಿರುವ ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬದವರು ಸೇರಿ ಭಕ್ತಭಾವದಿಂದ ಕಾರ್ಯಕ್ರಮ ನಡೆಸಿಕೊಟ್ಟರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇದೇ ತಿಂಗಳು 21, 22 ಹಾಗೂ 23ರಂದು ಮೂರು ದಿನಗಳ ಕಾಲ ಬೀರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಸುಮಾರು 9 ವರ್ಷಗಳಲ್ಲಿ ನಡೆಯುತ್ತಿರುವ ಜಾತ್ರೆ ಇದಾಗಿದೆ. 3 ವರ್ಷಗಳ ಹಿಂದೆ ಜಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದಾಗ ಕೋವಿಡ್ ಬಂದ ಕಾರಣ ನಿಲ್ಲಿಸಿದೆ. ಈಗ ಮತ್ತೆ ಸಿದ್ಧತೆ ನಡೆಯುತ್ತಿದ್ದು, ಪರ್ವವು ಎಲ್ಲಾ ಕುಲಸ್ಥರ ಮನೆಗೆ ತೆರಳಲಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.