ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಟಿಎಪಿಎಂಸಿಎಸ್ ಸದಸ್ಯ ಆನಂದ್ ಅವರು ಆರೋಪಿಸಿದರು.
ತಾಲ್ಲೂಕಿನ ಕೊನಘಟ್ಟ ಗ್ರಾಮದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರುದ್ಧ ಕೊನಘಟ್ಟ ಗ್ರಾಮದ ರೈತರಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ ನವೆಂಬರ್ 3 ನೇ ತಾರೀಖು ಜಿಲ್ಲಾಡಳಿತ ಭವನದ ಬಳಿಯ ಕೃಷ್ಣೋದಯ ಕಲ್ಯಾಣ ಮಂಟಪದಲ್ಲಿ ರೈತರ ಸಭೆ ಕರೆದಿದ್ದ ಜಿಲ್ಲಾಧಿಕಾರಿಗಳು, ತಾಲ್ಲೂಕಿನ ಕಸಭಾ ಹೋಬಳಿಯ ಕೊನಘಟ್ಟ, ಆದಿನಾರಾಯಣ ಹೊಸಹಳ್ಳಿ ಮತ್ತು ಲಿಂಗನಹಳ್ಳಿ ಮೂರು ಗ್ರಾಮಗಳ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟಿದೆ ಎಂದು ಹೇಳುತ್ತಿದ್ದಾರೆ, ಇಲ್ಲಿಯ ವರೆಗೂ ಯಾವುದೇ ರೈತರಿಗೆ ನೋಟೀಸ್ ನೀಡಿಲ್ಲ, ಅಳತೆ ಮಾಡಲು ನಮ್ಮ ಅನುಮತಿ ಪಡೆದಿಲ್ಲ ಎಂದರು.
ಭೂಸ್ವಾಧೀನ ಪ್ರಕ್ರಿಯೆಯನ್ನು ಅವೈಜ್ಞಾನಿಕವಾಗಿ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ನನ್ನದೇ ಭೂಮಿ ಅಳತೆ ಮಾಡುವಾಗ ನನ್ನ ಗಮನಕ್ಕೆ ತಾರದೇ ಮಾಡಿದ್ದಾರೆ, ಮೊನ್ನೆ ಕೆಐಎಡಿಬಿ ಕಚೇರಿಗೆ ಹೋಗಿ ಪರಿಶೀಲನೆ ಮಾಡಿದಾಗ ನನ್ನ ಭೂಮಿ ಅಳತೆ ಮಾಡುವಾಗ ನಾನು ಜಮೀನಿನಲ್ಲಿ ಇರಲಿಲ್ಲ ಎಂದು ಸುಳ್ಳು ಬರೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೆ ಜಿಲ್ಲಾಧಿಕಾರಿಗಳು ಎರಡು ಸಭೆಗಳನ್ನು ನಡೆಸಿದ್ದಾರೆ ಆದರೆ ಯಾವ ಸಭೆಯಲ್ಲೂ ರೈತರು ಭಾಗವಹಿಸಿಲ್ಲ, ದಾಖಲೆಗಳಲ್ಲಿ ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ ಇದೆ ಎಂದು ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ನಮ್ಮನ್ನು ಸಭೆಗೆ ಕರೆದು ಎಕರೆಗೆ ಒಂದು ಕೋಟಿ ನಲವತ್ತು ಲಕ್ಷ ಕೊಡ್ತೀವಿ ಎಂದು ಭಾಷಣ ಮಾಡಿ ಎದ್ದು ಹೋಗಿದ್ದಾರೆ. ಆದರೆ ಸಭೆಯಲ್ಲಿ ರೈತರಿಗೆ ಅನುಕೂಲವಾಗು ಒಂದು ಮಾತು ಹೇಳಲಿಲ್ಲ, ಅಧಿಕಾರಿಗಳು ಬ್ರೋಕರ್ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊನಘಟ್ಟ ಗ್ರಾಮದ ರೈತ ಪಾಪೇಗೌಡ ಮಾತನಾಡಿ ಅನ್ನ ಹಾಕಿದ ನಾವು ಭಿಕ್ಷೆ ಬೇಡುವ ಪರಿಸ್ಥಿತಿ ಇದೆ, ನಾವು ಅನಾಥರಾಗುತ್ತೇವೆ. ಫಲವತ್ತಾದ ಕೃಷಿ ಭೂಮಿ ಬಿಟ್ಟು ನಾವು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ರೈತ ಕೋಡಿಹಳ್ಳಿ ರಾಮೇಗೌಡ ಮಾತನಾಡಿ ಕೆಐಎಡಿಬಿ ಕಾಯ್ದೆ ಪ್ರಕಾರ ವ್ಯವಸಾಯಕ್ಕೆ ಸೂಕ್ತವಲ್ಲದ ಭೂಮಿಯಲ್ಲಿ ಕಾರ್ಖಾನೆಗಳನ್ನು ಮಾಡಬಹುದು, ಆದರೆ ಬಂಡವಾಳ ಶಾಹಿಗಳಿಗೆ ಇಲ್ಲಿಯ ಕೃಷಿ ಭೂಮಿಯೇ ಬೇಕಂತೆ. ಇಲ್ಲಿ ಯಾವ ರೈತನೂ ಭೂಮಿಯನ್ನು ಪಾಳು ಬಿಟ್ಟಿಲ್ಲ, ಬೇಕಾದರೆ ನಾವು ದ್ರೋಣ ಬಿಟ್ಟು ಸ್ವಂತ ಖರ್ಚಿನಲ್ಲಿ ವಿಡಿಯೋ ಮಾಡಿ ಕಳಿಸುತ್ತೇವೆ. ಅಧಿಕಾರಿಗಳು ಪರಿಶೀಲನೆ ಮಾಡಿಕೊಳ್ಳಲಿ ಎಂದರು.
ನಿಜಕ್ಕೂ ನಿಮಗೆ ಎಲ್ಲ ಜನರ ಕೈಗೆ ಉದ್ಯೋಗ ನೀಡುವ ಮನಸ್ಸಿದ್ದರೆ ಸಮಗ್ರ ಕರ್ನಾಟಕ ಪರಿಕಲ್ಪನೆಯನ್ನು ಸಾಕಾರಗೊಳಿಸಲು ರಾಜ್ಯದ ಬಂಜರು ಭೂಮಿಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿ ಎಂದು ಸವಾಲು ಎಸೆದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಕೆಎಂ.ರಾಮಾಂಜಿನಪ್ಪ, ರೈತ ಮುಖಂಡರಾದ ಕೋಡಿಹಳ್ಳಿ ಸಿ.ಕೃಷ್ಣಪ್ಪ ನರಸಿಂಹಮೂರ್ತಿ, ಡಿ.ರಾಮಾಂಜಿನಪ್ಪ, ಮಧುರೆ ರಮೇಶ್, ರಂಗಸ್ವಾಮಿ ವಿ.ಆನಂದ್ ಕೋಡಿಹಳ್ಳಿ ಕೆಂಪಣ್ಣ, ಅಂಗಡಿ ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.