ಹೊಸಹಳ್ಳಿ ಪೊಲೀಸ್ ಠಾಣೆಯನ್ನು ಮಾದರಿ‌‌ ಪೊಲೀಸ್ ಠಾಣೆಯನ್ನಾಗಿಸಿದ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯನ್ನು ಮಾದರಿ, ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸಲು ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಅವಿರತವಾಗಿ ಪ್ರಯತ್ನ ಪಡೆಯುತ್ತಲೇ ಇದ್ದಾರೆ.

ರಾವ್ ಗಣೇಶ್ ಜನಾರ್ಧನ್ ಅವರು ಹೊಸಹಳ್ಳಿ ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಆಗಿ ಬಂದಾಗಿನಿಂದಲೂ ಠಾಣೆಗೆ ಹೊಸ ರೂಪ ಕೊಡಲು ಮುಂದಾಗುತ್ತಿದ್ದಾರೆ. ಮೊದಲು ಠಾಣಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಹುಳ-ಹುಪ್ಪಟೆ, ಹಾವುಗಳ ತಾಣವಾಗಿತ್ತು. ಇದೀಗ ಠಾಣಾ ಸುತ್ತಮುತ್ತ ಇರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹೂ, ಹಣ್ಣು ನೆರಳು ಕೊಡುವ ಸಸಿಗಳನ್ನು ನೆಟ್ಟು, ಸಸಿಗಳಿಗೆ ನಿತ್ಯ ನೀರು ಸರಬರಾಜುಗಾಗಿ ಈಗಾಗಲೇ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಜೊತೆಗೆ ಸ್ಪ್ರಿಂಕ್ಲರ್ ಕೂಡ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಠಾಣೆಯನ್ನಾಗಿಸಿದ್ದಾರೆ.

ಒಳಿತು,‌ ನ್ಯಾಯ ಯಾರಿಗೆ ತಾನೆ ಬೇಡ? ಅದು ಎಲ್ಲರಿಗೂ ಬೇಕಷ್ಟೆ. ಅದರಲ್ಲೂ ನಮ್ಮ ಸದ್ಯದ ಕಾಲಕ್ಕಂತೂ ಇದು ತುಂಬ ತುರ್ತಾಗಿ ಬೇಕಾಗಿದೆ. ಒಳಿತು ಎಂದರೆ ಯಾವುದು? ಮಂಗಳಕರವಾದದ್ದೇ ಒಳಿತು. ಎಲ್ಲರ ಹಿತವನ್ನು ಎತ್ತಿಹಿಡಿಯುವಂಥದ್ದೇ ‘ಮಂಗಳ’. ಒಳಿತು, ನ್ಯಾಯ, ಶಾಂತಿ, ಶುಭ್ರತೆ, ಮಂಗಳದ ಸಂಕೇತವೇ ಬುದ್ಧ. ಈ‌‌ ಬುದ್ಧನ ಪ್ರತಿಮೆಯನ್ನು ಠಾಣಾ ಆವರಣದಲ್ಲಿ ಪ್ರತಿಷ್ಟಾಪಿಸಿ ಠಾಣೆಗೆ ಬಂದವರಿಗೆ ನ್ಯಾಯ, ಶಾಂತಿ, ಒಳಿತನ್ನು ನೀಡಲು ಪ್ರಯತ್ನಿಸಲಾಗುವುದು ಎಂಬುದನ್ನು ಪರೋಕ್ಷವಾಗಿ ಸಂದೇಶ ನೀಡಲಾಗಿದೆ.

ಠಾಣೆಯ ಕಾಂಪೌಂಡ್ (ಗೋಡೆ) ಮೇಲೆ ಪೊಲೀಸ್ ವ್ಯವಸ್ಥೆ ಬಗೆಗಿನ ಚಿತ್ರಗಳನ್ನು ಪೇಂಟಿಂಗ್ ಮಾಡಿಸಲಾಗಿದೆ. ನೆರಳಲ್ಲಿ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಠಾಣೆಯನ್ನಾಗಿ ಮಾರ್ಪಾಡಿಸಿದ್ದಾರೆ.

ಈ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಪತ್ತೆಹಚ್ಚುವ ಸಲುವಾಗಿ ಕೆಲವು ಸೂಕ್ಷ್ಮ‌, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ಸುಮಾರು 23 ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಠಾಣಾ ವ್ಯಾಪ್ತಿಯ ವಿವಿಧ ಕೂಡು ರಸ್ತೆ, ಪ್ರಮುಖ ವೃತ್ತಗಳು, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಹೊಸಹಳ್ಳಿ ಗ್ರಾಮ ಪಂಚಾಯಿತಿ, ಅರೂಢಿ ಗ್ರಾಮ ಪಂಚಾಯಿತಿ, ದಾನಿಗಳು ಮತ್ತು ಸ್ಥಳೀಯ ಮುಖಂಡರುಗಳು ಸಿಸಿಟಿವಿ ಕ್ಯಾಮೆರಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಸೋಲಾರ್ ಸಿಸಿಟಿವಿಗಳು 180 ಡಿಗ್ರಿ ಧ್ವನಿಸಹಿತ ಗ್ರಹಿಸುವ ವ್ಯವಸ್ಥೆ ಹಾಗೂ ಸ್ಪೀಕರ್ ಹೊಂದಿದ್ದು, ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಠಾಣೆಯ ಮಾನಿಟರ್ ಗೆ ನೇರ ಸಂಪರ್ಕ ಮಾಡಲಾಗಿದ್ದು, 24/7 ಮಾನಿಟರ್ ಮಾಡಲಾಗುತ್ತದೆ. ಇದರ ಜೊತೆಗೆ ಠಾಣಾ ಸಿಬ್ಬಂದಿಯ ಮೊಬೈಲ್ ಗೆ ಲಿಂಕ್ ಮಾಡಲಾಗಿದ್ದು, ತುರ್ತು ಸಂಧರ್ಭಗಳಲ್ಲಿ ಮೊಬೈಲ್ ಮುಖಾಂತರ ಎಚ್ಚರಿಕೆಗಳನ್ನು ನೀಡುವ ವ್ಯವಸ್ಥೆ ಹೊಂದಿವೆ ಎಂದು ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ತಿಳಿಸಿದ್ದಾರೆ.

ಅಪರಾಧ ತಡೆಯುವ ಮತ್ತು ಪತ್ತೆ ಹಚ್ಚುವಲ್ಲಿ ಅತ್ಯಂತ ಅಗತ್ಯವಿದ್ದ ಸಿಸಿಟಿವಿಗಳ ಅಳವಡಿಕೆಯಿಂದ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ. ಇದಕ್ಕೆ ಸ್ಪಂದಿಸಿದ ಎಲ್ಲಾ ದಾನಿಗಳಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಠಾಣಾ ವ್ಯಾಪ್ತಿಯ ದೊಡ್ಡಹಳ್ಳ ರಸ್ತೆ, ಇತರೆ‌ ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ಕಾರಣದಿಂದ ಮಣ್ಣು ಕೊಚ್ಚಿ ಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದ್ದರಿಂದ ರಸ್ತೆಯ ಬದಿಯ ಗುಂಡಿಗಳಿಗೆ ಮಣ್ಣು ತುಂಬಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ಹೊಸಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯ ಘಾಟ್ ಪ್ರದೇಶದಲ್ಲಿ ಇತ್ತೀಚೆಗೆ ಅಪಘಾತಗಳು ಸಂಭವಿಸುತ್ತಿದ್ದು, ಅಂತಹ ಅಪಘಾತಗಳನ್ನು ತಡೆಯುವ ಸಲುವಾಗಿ ರಾತ್ರಿವೇಳೆ  ಸಂಚರಿಸುವ ವಾಹನಗಳ ಚಾಲಕರಿಗೆ ಗೋಚರಿಸುವಂತೆ ರಸ್ತೆಯ ತಿರುವುಗಳಲ್ಲಿ ರಿಫ್ಲೆಕ್ಟರ್ ಗಳನ್ನು ಅಳವಡಿಸಿದ್ದಾರೆ.

ಅದೇರೀತಿ‌ ಉತ್ತಮ ಕಾರ್ಯದಕ್ಷತೆ ತೋರಿದ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕ (DG&IGP)ರ ಹೆಸರಿನಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಪ್ರಶಂಸನಾ ಸೇವಾ ಪದಕಕ್ಕೆ 200 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಭಾಜನರಾಗಿದ್ದರು.

ಒಟ್ಟಿನಲ್ಲಿ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಜನರಿಗೆ ನ್ಯಾಯ ಒದಗಿಸಿಕೊಡುವುದಲ್ಲದೇ ತಾನು ಕೆಲಸ ಮಾಡುವ ಠಾಣೆಯನ್ನೂ ಅಭಿವೃದ್ಧಿಪಡಿಸುವಲ್ಲೂ ಮುಂದೆ ಇದ್ದಾರೆ. ಜನ ಸ್ನೇಹಿ, ಪರಿಸರ ಸ್ನೇಹಿ, ಸಿಬ್ಬಂದಿ ಸ್ನೇಹಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Ramesh Babu

Journalist

View Comments

Recent Posts

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

5 hours ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

12 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

13 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

1 day ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago