ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ ರಸ್ತೆ ದಾಟುವಿಕೆಗೆ 17 ಸ್ಕೈವಾಕ್‌ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಇನ್ನೂ ಪೂರ್ಣಗೊಳ್ಳದೇ ಉಳಿದಿದೆ. ಕಾಮಗಾರಿ ಆರಂಭವಾಗಿ ಸಾಕಷ್ಟು ಸಮಯ ಕಳೆದರೂ ಬಹುತೇಕ ಸ್ಕೈವಾಕ್‌ಗಳು ಅರ್ಧಕ್ಕೆ ನಿಂತಿದ್ದು, ಹೆದ್ದಾರಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಜೀವದ ಹಂಗು ತೊರೆದು ರಸ್ತೆ ದಾಟುವ ದುಸ್ಥಿತಿ ಎದುರಿಸುತ್ತಿದ್ದಾರೆ.

ಈ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಕಾರುಗಳು, ಬಸ್‌ಗಳು ಹಾಗೂ ಭಾರೀ ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತವೆ. ವೇಗವಾಗಿ ಚಲಿಸುವ ವಾಹನಗಳ ನಡುವೆ ರಸ್ತೆ ದಾಟುವುದು ಸಾರ್ವಜನಿಕರಿಗೆ ನಿತ್ಯದ ಸವಾಲಾಗಿದೆ. ವಿಶೇಷವಾಗಿ ಬೆಳಗ್ಗೆ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಂಜೆ ಮನೆಗೆ ಮರಳುವ ವೇಳೆ ಅಪಾಯದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ.

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

ಹೆದ್ದಾರಿಯ ಹಲವು ಕಡೆಗಳಲ್ಲಿ ಸ್ಕೈವಾಕ್ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ. ಕೆಲವೆಡೆ ಪಿಲ್ಲರ್ ನಿರ್ಮಾಣದ ಹಂತದಲ್ಲೇ ಕೆಲಸ ಸ್ಥಗಿತಗೊಂಡಿದ್ದರೆ, ಇನ್ನೂ ಕೆಲವೆಡೆ ಮೇಲ್ಭಾಗದ ರಚನೆ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬದಿಂದ ಯೋಜನೆಯ ಮೂಲ ಉದ್ದೇಶವೇ ಹಿನ್ನಡೆ ಅನುಭವಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಅವೈಜ್ಞಾನಿಕ ನಿರ್ಮಾಣದ ಆರೋಪ

ಕೆಲವು ಸ್ಕೈವಾಕ್‌ಗಳ ನಿರ್ಮಾಣದಲ್ಲಿ ತಾಂತ್ರಿಕ ದೋಷಗಳಿರುವ ಆರೋಪವೂ ಕೇಳಿಬರುತ್ತಿದೆ. ಸ್ಕೈವಾಕ್‌ಗಳ ಎತ್ತರ ಹಾಗೂ ವಿನ್ಯಾಸ ಸಮರ್ಪಕವಾಗಿಲ್ಲದ ಕಾರಣ, ಭಾರೀ ಗಾತ್ರದ ಸರಕು ಸಾಗಾಣಿಕೆ ವಾಹನಗಳು ಮೇಲ್ಭಾಗಕ್ಕೆ ತಾಗಿ ಹೆದ್ದಾರಿಯಲ್ಲೇ ನಿಲ್ಲುವ ಘಟನೆಗಳು ನಡೆದಿವೆ ಎನ್ನಲಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುವುದರ ಜೊತೆಗೆ ಅಪಘಾತಗಳ ಅಪಾಯವೂ ಹೆಚ್ಚುತ್ತಿದೆ.

ಶಾಲಾ ಮಕ್ಕಳಿಗೆ ಹೆಚ್ಚಿದ ಆತಂಕ

ಸ್ಕೈವಾಕ್‌ಗಳಿಲ್ಲದ ಕಾರಣ ಶಾಲಾ ಮಕ್ಕಳು ಪ್ರತಿದಿನ ಪೋಷಕರ ನೆರವಿನಿಂದಲೇ ಹೆದ್ದಾರಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ನಿರಂತರ ಸಂಚಾರದಿಂದ ಮಕ್ಕಳು ಸುರಕ್ಷಿತವಾಗಿ ರಸ್ತೆ ದಾಟುವುದು ಕಷ್ಟಕರವಾಗಿದ್ದು, ಪೋಷಕರು ಆತಂಕದಲ್ಲಿದ್ದಾರೆ.

ರೈತರಿಗೂ ಸಂಕಷ್ಟ

ಮಳೆಗಾಲ ಆರಂಭವಾಗಿರುವುದರಿಂದ ರೈತರು ತಮ್ಮ ಹೊಲ-ತೋಟಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನು ಹೆದ್ದಾರಿ ದಾಟಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಬೇಕಾಗಿದೆ. ಸುರಕ್ಷಿತ ದಾಟುವ ವ್ಯವಸ್ಥೆ ಇಲ್ಲದ ಕಾರಣ ರೈತರು ಪ್ರತಿದಿನ ಅಪಾಯವನ್ನು ಎದುರಿಸುತ್ತಿದ್ದಾರೆ.

ಪ್ರತಿಭಟನೆಗಳಾದರೂ ಫಲವಿಲ್ಲ

ಸ್ಕೈವಾಕ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿ, ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಆದರೂ, ಕಾಮಗಾರಿ ವೇಗ ಪಡೆಯದೇ ಇರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಸಂಸ್ಥೆ ತಕ್ಷಣ ಕ್ರಮ ಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಯೋಜನಾ ನಿರ್ದೇಶಕರ ನಿರ್ಲಕ್ಷ್ಯ?

ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರ ಸ್ಕೈವಾಕ್ ಕಾಮಗಾರಿ ವಿಳಂಬ, ಪ್ರಗತಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಯ್ ಕುಮಾರ್ ಅವರನ್ನು ಪ್ರತಿನಿಧಿ ವರದಿಗಾರರು ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ಕರೆ ಸ್ವೀಕರಿಸದೇ, ಬಳಿಕವೂ ವಾಪಸ್ ಕರೆ ಮಾಡದೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾರ್ವಜನಿಕ ಹಿತದ ಮಹತ್ವದ ವಿಷಯದಲ್ಲಿ ಅಧಿಕಾರಿಯ ಈ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಗೊಂಡ 17 ಸ್ಕೈವಾಕ್ ಯೋಜನೆ ಇಂದು ವಿಳಂಬದ ಸಂಕೇತವಾಗಿ ಪರಿಣಮಿಸಿದೆ. ಅಪೂರ್ಣ ಕಾಮಗಾರಿ ಮತ್ತು ತಾಂತ್ರಿಕ ದೋಷಗಳಿಂದ ಜನರು ಪ್ರತಿದಿನ ಜೀವದ ಹಂಗು ತೊರೆದು ಹೆದ್ದಾರಿ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ರೈತರು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿ, ಅಗತ್ಯ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಹೆದ್ದಾರಿಯನ್ನು ಸುರಕ್ಷಿತಗೊಳಿಸಬೇಕೆಂಬುದು ಸ್ಥಳೀಯರ ಒಕ್ಕೊರಲಿನ ಆಗ್ರಹವಾಗಿದೆ.

ನಮ್ಮೂರ ಬಳಿ ಹೆದ್ದಾರಿ ಆದ ನಂತರ ರಸ್ತೆ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ. ರಸ್ತೆ ದಾಟುವಷ್ಟರಲ್ಲಿ ಬಸ್ ಹೋಗಿಬಿಡುತ್ತದೆ. ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ವಾಹನಗಳು ವೇಗ ಕಡಿಮೆ ಮಾಡದೇ ದೌಡಾಯಿಸುತ್ತವೆ. ಕೂಡಲೇ ಸ್ಕೈವಾಕ್ ಅಥವಾ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ವಿದ್ಯಾರ್ಥಿನಿ ಇಂದು ಹೇಳಿದರು.

ರಸ್ತೆ ದಾಟಲು ಕೆಲವೊಮ್ಮೆ ಅರ್ಧ ಗಂಟೆಯಾದರೂ ಕಾಯಬೇಕಾಗುತ್ತದೆ. ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುತ್ತಿದ್ದೇವೆ. ಅಂಗವಿಕಲರು, ಮಕ್ಕಳು, ಬಾಣಂತಿಯರು ಮತ್ತು ವೃದ್ಧರಿಗೆ ರಸ್ತೆ ದಾಟುವುದೇ ಅಸಾಧ್ಯವಾಗಿದೆ. ಅನೇಕ ಅಪಘಾತಗಳು ನಡೆದಿದ್ದರೂ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿನಿ ರಕ್ಷಿತಾ ತಿಳಿಸಿದರು.

ಮನೆ ಒಂದು ಕಡೆ, ಹೊಲ ಇನ್ನೊಂದು ಕಡೆ ಇದೆ. ಹೆದ್ದಾರಿ ದಾಟುವುದು ಅನಿವಾರ್ಯ. ಸ್ಕೈವಾಕ್ ಕಾಮಗಾರಿ ಆರಂಭವಾಗಿ ಬಹಳ ದಿನಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಜಾನುವಾರುಗಳೊಂದಿಗೆ ರಸ್ತೆ ದಾಟುವುದು ದೊಡ್ಡ ಸಾಹಸವಾಗಿದೆ ಎಂದು ರೈತ ಮಹಿಳೆ ಗಾಯತ್ರಮ್ಮ ಹೇಳಿದರು.

Ramesh Babu

Journalist

Recent Posts

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

7 hours ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

11 hours ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

11 hours ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

14 hours ago

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

1 day ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

1 day ago