ಹನಿ ಟ್ರ್ಯಾಪ್……….
ಇತ್ತೀಚಿನ ಭಯೋತ್ಪಾದಕ ಸುದ್ದಿಗಳು…….
ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿ ಟ್ರ್ಯಾಪ್ ಬ್ಲಾಕ್ ಮೇಲ್ ಗೆ ಒಳಗಾಗಿ ಸಾಕಷ್ಟು ಆತಂಕ ಭಯದ ವಾತಾವರಣದಲ್ಲಿ ನಲುಗಿ ಕೊನೆಗೆ ಅನೇಕ ಹಿತೈಷಿಗಳ ಸಹಾಯ ಪಡೆದು ಪೊಲೀಸ್ ಸ್ಟೇಷನ್ ಗೆ ದೂರು ದಾಖಲಿಸುವವರೆಗೂ ಪಟ್ಟ ಕಷ್ಟಗಳನ್ನು ಹೇಳಿಕೊಂಡರು.
ಅಂದರೆ ಕೆಲವು ತಂಡಗಳು ಈ ಹನಿ ಟ್ರ್ಯಾಪ್ ಎಂಬ ವಂಚಕ ಜಾಲವನ್ನು ವ್ಯವಸ್ಥಿತವಾಗಿ ಹೊಂದಿದೆ ಎಂಬುದು ವಾಸ್ತವ ಸಂಗತಿ. ಮನೆ ಕಳ್ಳತನ, ಸರ ಕದಿಯುವುದು, ವೇಶ್ಯಾವಾಟಿಕೆ, ಮಾದಕವಸ್ತುಗಳ ಮಾರಾಟ, ಜೂಜು ಕೇಂದ್ರಗಳು ಮುಂತಾದ ರೀತಿ ಹೊಸ ಆಧುನಿಕ ತಂತ್ರಜ್ಞಾನದ ಧಂಧೆ ಈ ಹನಿ ಟ್ರ್ಯಾಪ್.
ಬಿಪಿ, ಶುಗರ್ ರೀತಿಯಲ್ಲಿ ಇದೂ ಸಹ ಸಾಮಾನ್ಯವಾಗಿ ಹಣವಂತರು – ಜನಪ್ರಿಯರೇ ಮುಖ್ಯ ಟಾರ್ಗೆಟ್ ಆಗಿರುತ್ತಾರೆ. ಆದರೆ ಕೆಲವೊಮ್ಮೆ ಅಮಾಯಕ ಸಾಮಾನ್ಯರು ಸಹ ಇದಕ್ಕೆ ಬಲಿಯಾಗುವುದು ಇದೆ.
ಹೆಣ್ಣೊಬ್ಬಳು ನಿರ್ದಿಷ್ಟ ಗಂಡಸನ್ನು ಗುರಿಯಾಗಿಸಿ ಆಕರ್ಷಕವಾಗಿ – ಭಾವನಾತ್ಮಕವಾಗಿ – ದೈನೇಸಿಯಾಗಿ ಅಥವಾ ಬೇರೆ ಇನ್ಯಾವುದೋ ರೀತಿಯಲ್ಲಿ ಆಮಿಷಕ್ಕೆ ಒಳಪಡಿಸಿ ಅವರೊಂದಿಗೆ ಸ್ನೇಹ ಬೆಳೆಸಿ ನಂತರದಲ್ಲಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಅಥವಾ ಬೆಳೆಸಿದಂತೆ ನಟಿಸಿ ಅದನ್ನು ತನ್ನ ತಂಡದ ಸದಸ್ಯರು ಗುಪ್ತವಾಗಿ ಚಿತ್ರೀಕರಿಸಿ ನಂತರ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ ಅವರಿಂದ ಹಣ ವಸೂಲಿ ಮಾಡುವುದೇ ಈ ಸಾಮಾನ್ಯ ಹನಿ ಟ್ರ್ಯಾಪ್.
ಕೆಲವೊಮ್ಮೆ ಇತ್ತೀಚೆಗೆ ಸುಮ್ಮನೆ ವಿಡಿಯೋ ಕಾಲ್ ಮಾಡಿ ಅದನ್ನು ಸ್ವೀಕರಿಸಿದ ತಕ್ಷಣ ಆ ಕೊನೆಯಲ್ಲಿ ಹೆಣ್ಣು ಅಶ್ಲೀಲ ಭಂಗಿ ಪ್ರದರ್ಶಿಸಿ ಅದನ್ನು ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಿಸಿ ನಮ್ಮದು ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದಾಗಿ ಹೆದರಿಸುವುದು ಸಹ ನಡೆಯುತ್ತಿದೆ.
ಇಲ್ಲಿ ಬಲಾತ್ಕಾರ ಅಥವಾ ಅತ್ಯಾಚಾರದ ಲಕ್ಷಣಗಳು ಇರುವುದಿಲ್ಲ. ಇದು ಗಂಡಿನ ಆಸೆ – ದುರಾಸೆ ಅಥವಾ ವೀಕ್ ನೆಸ್ ಅನ್ನು ದುರುಪಯೋಗಿಸಿಕೊಂಡು ಹಣ ಮಾಡುವ ಒಂದು ವಂಚಕ ತಂತ್ರಗಾರಿಕೆ. ಇದು ಹೆಚ್ಚು ಕಡಿಮೆ ಒಪ್ಪಿತ ಕ್ರಿಯೆ. ಅದರ ಕ್ರಾಸ್ ಫೈರ್ ನಲ್ಲಿ ಕೆಲವೊಮ್ಮೆ ಅಮಾಯಕರ ಬಲಿ.
ಮನುಷ್ಯನ ವಂಚಕ ಇತಿಹಾಸಕ್ಕೆ ಮತ್ತೊಂದು ಮಾರ್ಗದ ಸೇರ್ಪಡೆ. ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ?
ಮೊದಲನೆಯದಾಗಿ, ಎಂದಿನಂತೆ ಮಾನಸಿಕ ಸ್ವಯಂ ನಿಯಂತ್ರಣ ಅತ್ಯುತ್ತಮ ಪರಿಹಾರ. ನಮ್ಮೊಳಗೆ ಒಂದು ನೈಜ ಒಳ್ಳೆಯತನ ನಾವು ಇದಕ್ಕೆ ಸಿಲುಕದಂತೆ ತಡೆಯುತ್ತದೆ.
ಎರಡನೆಯದಾಗಿ,
ಅಪರಿಚಿತರನ್ನು ನಾವು ಆತ್ಮೀಯವಾಗಿ ಸ್ವೀಕರಿಸುವ ಮೊದಲು ಸಾಕಷ್ಟು ಮಾನಸಿಕ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಒಂದಷ್ಟು ದೀರ್ಘ ಸಮಯ ತೆಗೆದುಕೊಳ್ಳಬೇಕು.
ಮೂರನೆಯದಾಗಿ,
ಕೆಲವೊಮ್ಮೆ ಎಲ್ಲಾ ಎಚ್ಚರಿಕೆಗಳ ಹೊರತಾಗಿಯೂ ಎಡವುವ ಸಾಧ್ಯತೆ ಇರುತ್ತದೆ. ಆಗ ಅದರ ಪರಿಣಾಮಗಳನ್ನು ಎದುರಿಸುವ ಧೈರ್ಯ ಪ್ರದರ್ಶಿಸಬೇಕು. ಅಂದರೆ ಅದನ್ನು ಒಪ್ಪಿಕೊಳ್ಳುವ ಮತ್ತು ಕಾನೂನಾತ್ಮಕ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ತಕ್ಷಣಕ್ಕೆ ವಿಚಿಲಿತರಾಗಿ ವಂಚಕರ ಬಲೆಯೊಳಗೆ ಬೀಳದೆ ಅವಮಾನ ಸಹಿಸಿಕೊಂಡು ತಾಳ್ಮೆಯಿಂದ ಎದುರಿಸಬೇಕು.
ನಾಲ್ಕನೆಯದಾಗಿ,
ಒಂದು ವೇಳೆ ನಮ್ಮ ಯಾವ ತಪ್ಪೂ ಇಲ್ಲದೆಯೇ ವಂಚನೆಗೆ ಒಳಗಾದರೆ ಅದನ್ನು ಪೋಲೀಸರಿಗೆ ದೂರು ನೀಡಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು. ನಮ್ಮ ಒಳ್ಳೆಯ ಹಿನ್ನೆಲೆ ಇಲ್ಲಿ ಸಹಾಯಕವಾಗುತ್ತದೆ.
ಐದನೆಯದಾಗಿ,
ಈ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಇದೆಲ್ಲಾ ಸಹಜ ಎಂದು ಅರ್ಥಮಾಡಿಕೊಂಡು ನಿರ್ಲಕ್ಷಿಸಬೇಕು. ಇಲ್ಲದಿದ್ದರೆ ವ್ಯವಸ್ಥೆ ನಮ್ಮನ್ನೇ ಬಲಿ ಪಡೆಯುತ್ತದೆ. ಜೊತೆಗೆ ನಮ್ಮ ಸುತ್ತಮುತ್ತಲಿನ ಗೆಳೆಯರು ಸಹ ಹನಿ ಟ್ರ್ಯಾಪ್ ಬಗ್ಗೆ ಅತಿರಂಜಿತ ವರದಿಗಳನ್ನು ನಂಬದೆ ನಿರ್ಲಕ್ಷಿಸಬೇಕು.
ಆರನೆಯದಾಗಿ,
ಕೆಲವು ಕಚ್ಚೆ ಹರುಕು ವ್ಯಕ್ತಿಗಳು ಇದರಲ್ಲಿ ಸುಲಭವಾಗಿ ಸಿಲುಕುತ್ತಾರೆ. ಅವರ ಸ್ವಭಾವವೇ ಹಾಗಿರುತ್ತದೆ. ಅಂತಹವರು ಅದನ್ನು ಅನುಭವಿಸಲೇ ಬೇಕು.
ಒಟ್ಟಿನಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸವಾಲು ಎದುರಾಗಿದೆ. ನಾವು ಅತ್ಯಂತ ವಿವೇಚನೆಯಿಂದ ಇದನ್ನು ನೋಡಬೇಕಿದೆ. ನಮ್ಮ ಗೆಳೆಯರು ಇದರಲ್ಲಿ ಸಿಲುಕಿದಾಗ ಅವರ ಬಗ್ಗೆ ನಮಗೆ ಸಾಕಷ್ಟು ವರ್ಷಗಳ ಮಾಹಿತಿ ಇರುವಾಗ ಅವರನ್ನು ಸಿನಿಕವಾಗಿ ಮಾತನಾಡಿಸಿ ಮತ್ತಷ್ಟು ಹಿಂಸಿಸದೆ ಧೈರ್ಯ ತುಂಬಬೇಕು. ಅನಾವಶ್ಯಕವಾಗಿ ಅವರನ್ನು ಅನುಮಾನದಿಂದ ನೋಡಬಾರದು. ಸಮಾಜದ ಪ್ರತಿಕ್ರಿಯೆ ಇಲ್ಲಿ ಬಹಳ ಮುಖ್ಯವಾಗುತ್ತದೆ.
ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತರ ಸ್ಪಷ್ಟವಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕೆಟ್ಟವರು ಒಳ್ಳೆಯವರನ್ನು ಕೆಟ್ಟವರೆಂದು ಬಿಂಬಿಸಿ ತಮ್ಮ ಕೆಟ್ಟ ಕೆಲಸಗಳಿಗೆ ಸಾರ್ವಜನಿಕ ಮಾನ್ಯತೆ ಪಡೆದು ಆರಾಮವಾಗಿ ಕೆಟ್ಟ ಕೆಲಸ ಮಾಡಿಕೊಂಡು ಆರಾಮವಾಗಿ ಇರುತ್ತಾರೆ ಈಗಿನ ಕೆಲವು ಕ್ಷೇತ್ರಗಳ ಗಣ್ಯರಂತೆ.
ಎಚ್ಚರವಿರಲಿ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…