ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣಕ್ಕೆ ‌ಪೂರಕ- ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಶಿಕ್ಷಣಕ್ಕೆ ‌ಪೂರಕವಾಗಿದೆ. ಇದನ್ನು ‌ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ತಿಳಿಸಿದರು.

ತಾಲೂಕಿನ ರೈಲ್ವೆ ಸ್ಟೇಷನ್ ಸಮೀಪದಲ್ಲಿರುವ ಅನಿಬೆಸೆಂಟ್ ಪಾರ್ಕ್‌ನಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ವಿಷನ್ 2034 ಕಾರ್ಯಾಗಾರದಲ್ಲಿ ‌ಮಾತನಾಡಿದರು.

ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಯಾರು ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿಲ್ಲ. ಜತೆಗೆ ಸಾಕಷ್ಟು ವಿದ್ಯಾರ್ಥಿಗಳು ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಪಿಯುಸಿಯಲ್ಲೂ‌ ಕೂಡ ಅನೇಕ ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ ಎಂದರು.

ಈ ಕಾರ್ಯಾಗಾರದಲ್ಲಿ 2034ಕ್ಕೆ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯಾವ ಪ್ರಮಾಣದಲ್ಲಿ ಬೆಳೆಯಬೇಕು ‌ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ. ಎಲ್ಲಾ‌ ಕಡೆಗಳಲ್ಲಿ ಸಮಸ್ಯೆ ಇದೆ.‌ ಇದನ್ನು ನಮ್ಮ ‌ಬೆಳವಣಿಗೆಗೆ ಹೇಗೆ ತೆಗೆದುಕೊಳ್ಳಬೇಕು ಎಂಬುದು‌ ಮುಖ್ಯವಾಗುತ್ತದೆ‌ ಎಂದರು.

ರಾಜ್ಯದಲ್ಲಿ ಸದ್ಯ 8.65ಲಕ್ಷ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಇದ್ದಾರೆ. 2034 ಕ್ಕೆ 15 ಲಕ್ಷ ಹೆಚ್ಚು ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಇರುವಂತೆ ಕೆಲಸ ಮಾಡಬೇಕಿದೆ. ರಾಜ್ಯದಾದ್ಯಂತ 2 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಮುಂದಿನ‌ 8 ವರ್ಷದಲ್ಲಿ ‌ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ 15 ಲಕ್ಷ ವಿದ್ಯಾರ್ಥಿಗಳು ನೋಂದಣಿ ಆಗಬೇಕು. 200 ತಾಲೂಕುಗಳಲ್ಲಿ ಒಬ್ಬ ಟ್ರೈನರ್ ಇರಬೇಕು. ಇದಕ್ಕೆ ಅಗತ್ಯವಾದ ಕ್ರಮವಹಿಸಬೇಕು ಎಂದರು.

ಆಪದ್ ಮಿತ್ರ ಪುಸ್ತಕದ ಮೂಲಕ ಕೇಂದ್ರ ಸರಕಾರವೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿಪತ್ತು ನಿರ್ವಹಣೆ ತರಬೇತಿ ಪಡೆದವರು ಹೇಗೆ ಕೆಲಸ ಮಾಡಬೇಕು ಎಂದು ತಿಳಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ವತಿಯಿಂದ ಈ ಪುಸ್ತಕ ಬಿಡುಗಡೆ ಮಾಡಲಾಗಿದೆ. 12 ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣೆ ತರಬೇತಿ ನೀಡಲಾಗಿದೆ. ದಾನಿಗಳ ಸಹಕಾರದೊಂದಿಗೆ ಈ ವರ್ಷ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸ್ಕೌಟ್ ಗೈಡ್ ಕೇಂದ್ರ ಮಾಡಲಾಗುತ್ತದೆ. ಸಾಕಷ್ಟು ದೇಗುಲಗಳಲ್ಲಿ ವಿಶೇಷ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸೇವೆ ಸಲ್ಲಿಸಿದ್ದಾರೆ ಎಂದರು.

ತುರ್ತು ಪರಿಸ್ಥಿಯಲ್ಲಿ ಮೊದಲ ವಾರ ನನ್ನನ್ನು ಬಂಧಿಸಲಾಯಿತು. ದೇಶ ಭದ್ರತೆಯ ಹಿತದೃಷ್ಟಿಯಿಂದ ಇನ್ನೂ ನಾಲ್ಕು ತಿಂಗಳು ಜೈಲಿನಲ್ಲಿ ಇರಬೇಕು ಎಂದು ಪತ್ರ ಬರುತ್ತಿತ್ತು. ಆದರೆ ಕೆಲ ತಿಂಗಳುಗಳ ಕಾಲ ನಮ್ಮನ್ನು ಬಿಡುಗಡೆ ಮಾಡಲೇ ಇಲ್ಲ. ಆಗ ಜೈಲಿನಲ್ಲಿ ಯೋಗ ಕಲಿತೆ, ಪ್ರತಿದಿನ ಯಾವುದಾದರೂ ಒಂದು ವಿಷಯದ ಬಗ್ಗೆ ಕಾರ್ಯಾಗಾರ ನಡೆಯುತ್ತಿತ್ತು. ನನಗೆ ನಿಜವಾದ ಯೂನಿರ್ವಸಿಟಿ ಸಿಕ್ಕಿದ್ದು ಜೈಲಿನಲ್ಲಿ. ಸಾಮಾನ್ಯ ಯೂನಿರ್ವಸಿಟಿಗಿಂತ ಜೈಲಿನ ಪಾಠಗಳೇ ನಮ್ಮನ್ನು ಪರಿಪಕ್ವವಾಗಿಸಿವೆ. ದೇಶದಲ್ಲಿ ನಿರುದ್ಯೋಗ ಇದೆ. ಸಾಮಾಜಿಕ ಬದಲಾವಣೆ ನಮ್ಮ ಅಸ್ತ್ರವಾಗಬೇಕು.ಸೇವೆ ಮೂಲಕ ನಾವು ನಾಯಕತ್ವ ತೆಗೆದುಕೊಳ್ಳಬೇಕು ಎಂದರು.

ಕಾರ್ಯಾಗಾರದ ಮಹತ್ವ ವಿವರಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಾಮಾಜಿಕ ಸೇವಾ ಕಾರ್ಯ ಹಾಗೂ ಶಿಸ್ತುಬದ್ದ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ನಮ್ಮ ಮುಂದಿನ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದರು.

ಕಾರ್ಯಾಗಾರದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್ ಅಪರ ರಾಷ್ಟ್ರೀಯ ಮುಖ್ಯ ಆಯುಕ್ತ ಎಂ.ಎ.ಖಾಲಿದ್‌, ಸಹಾಯಕ ನಿರ್ದೇಶಕ ಅನಲೇಂದ್ರ ಶರ್ಮ, ರಾಜ್ಯ ಉಪಾಧ್ಯಕ್ಷ ಮಹೇಶ್, ಸಹಾಯಕ ನಿರ್ದೇಶಕ ಅವಲೇಂದ್ರ ಶರ್ಮ, ಕಾರ್ಯಾಗಾರದ ಸಂಯೋಜಕ ಮಧುಸೂಧನ್‌, ಜಿಲ್ಲಾ ಆಯುಕ್ತರುಗಳಾದ ನಾಗರಾಜ್‌, ವಿಶ್ವನಾಥ್‌, ಶಕುಂತಲಾ, ಆಶಾ ಪ್ರಸನ್ನ ಕುಮಾರ್‌, ರಾಧಾ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!