ಸರ್ಕಾರದಿಂದ ಮಾವು ಖರೀದಿಗೆ ನೋಂದಣಿ ಆರಂಭ:‌ ಮಾವು ಬೆಳೆಗಾರರು ಕೂಡಲೇ ನೋಂದಾಯಿಸಿ

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿ ಅಡಿ ಮಾವು ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾವು ಬೆಳೆಗಾರರು ಕೂಡಲೇ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕೇಂದ್ರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮಾವು ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಮಾವು ಗೆ ರೂ 1,750/-(ಮಾರುಕಟ್ಟೆ ಮಧ್ಯ ಪ್ರವೇಶ ದರ ಮತ್ತು ಪ್ರಚಲಿತ ಮಾರುಕಟ್ಟೆ ಧಾರಣೆಯ ಶೇಕಡ 25ರ ಮಿತಿಗೊಳಪಟ್ಟಿರತಕ್ಕದ್ದು) ಗಳಂತೆ ದರ ನಿಗದಿಪಡಿಸಿದೆ(ಪ್ರತಿ ಕೆಜಿಗೆ ರೂ. 4.37/-). ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಸಂಸ್ಥೆ ವತಿಯಿಂದ ಖರೀದಿ ಮಾಡಲಾಗುತ್ತದೆ.

*ನೋಂದಣಿ ಕೇಂದ್ರಗಳ ವಿಳಾಸ*
1. ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ಹೊಸಕೋಟೆ ತಾಲ್ಲೂಕು, ಸರ್ಕಾರಿ ಆಸ್ಪತ್ರೆ ಹತ್ತಿರ, ಕೋಲಾರ ಹೈವೇ, ಹೊಸಕೋಟೆ.
2. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ದೊಡ್ಡಬಳ್ಳಾಪುರ ತಾಲೂಕು, ಹೊಸ ಬಸ್ಟಾಂಡ್ ಹತ್ತಿರ, ತಾಲ್ಲೂಕು ಪಂಚಾಯಿತಿ ಮುಂಭಾಗ, ದೊಡ್ಡಬಳ್ಳಾಪುರ.

*ಖರೀದಿ ಕೇಂದ್ರಗಳ ವಿಳಾಸ*
1. ಕೃಷಿ ಉತ್ಪನ್ನ ಮಾರುಕಟ್ಟೆ, ಶ್ರೀನಿವಾಸಪುರ, ಕೋಲಾರ ಜಿಲ್ಲೆ.
2. ಕೃಷಿ ಉತ್ಪನ್ನ ಮಾರುಕಟ್ಟೆ, ಮುಳಬಾಗಿಲು ಮತ್ತು ಚಿಂತಾಮಣಿ.
3. ತಾಯಲೂರು ಉಪ ಮಾರುಕಟ್ಟೆ, ತಾಯಾಲೂರು.

ಮಾವು ಖರೀದಿಗೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಮಾವು ಬೆಳೆಗಾರರು ತಮ್ಮ ಜಮೀನಿನ ಪಹಣಿ/ RTC, ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ (ಆಧಾರ್ ಜೋಡಣೆ ಕಡ್ಡಾಯ), ಭಾವಚಿತ್ರ ದಾಖಲೆಗಳನ್ನು ಹತ್ತಿರದ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಾಯಿಸಿಕೊಳ್ಳಬಹುದು.

ಮಾವು ಬೆಳೆದು ಬೆಳೆ ಸಮೀಕ್ಷೆಯಲ್ಲಿ ಮಾವು ಬೆಳೆ ಎಂದು RTC ವಾರು ನಮೂದಾಗಿರುವ ರೈತರು ಮಾತ್ರ ಅರ್ಹರಾಗಿರುತ್ತಾರೆ. ಈ ಯೋಜನೆಯಡಿಯಲ್ಲಿ ಎಕರೆಗೆ 40 ಕ್ವಿಂಟಾಲ್ ನಂತೆ ಗರಿಷ್ಟ 05 ಎಕರೆಗೆ 200 ಕ್ವಿಂಟಾಲ್ ವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡಲಾಗುವುದು, ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ DBT ಮುಖಾಂತರ ಹಣ ಪಾವತಿಸಲಾಗುವುದು.

ಜಿಲ್ಲೆಯಲ್ಲಿ ಮಾವು ಬೆಳೆಯನ್ನು 5081.14 ಹೆ, ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಬಾದಾಮಿ, ರಸಪುರಿ, ತೋತಾಪುರಿ, ಮಲ್ಗೋವಾ, ಮಲ್ಲಿಕಾ, ಸೇಂದೂರಾ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದೆ. ವಾರ್ಷಿಕ ಉತ್ಪಾದನೆಯು 40653.4 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಲಾಗಿತ್ತು. ಜಿಲ್ಲೆಯಲ್ಲಿ ತೋತಾಪುರಿ ತಳಿಯು ಶೇ.15 ರಿಂದ 20 ರಷ್ಟು ಇದೆ ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹೊಸಕೋಟೆ – 9880210892, ದೇವನಹಳ್ಳಿ – 9480461234, ದೊಡ್ಡಬಳ್ಳಾಪುರ – 9482129648, ನೆಲಮಂಗಲ – 9880461607, ಸಹಾಯಕ ತೋಟಗಾರಿಕೆ ನಿರ್ದೇಶಕರು ನೆಲಮಂಗಲ-9902581832, ಹೊಸಕೋಟೆ – 8453966868, ಕಾರ್ಯದರ್ಶಿಗಳು, ಹೊಸಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ)- 9742888865 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!