Categories: ಲೇಖನ

ರೈತ ಜಾಗೃತಿ ಮತ್ತು ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ…..

ಪ್ರತಿಭಟನೆಗಳು – ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ,
ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರನ್ನು ಅವರ ಜನ್ಮದಿನದ – ಫೆಬ್ರವರಿ 13 – ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ….

ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು ಪ್ರೊಫೆಸರ್ ಎಂ. ಡಿ. ನಂಜುಂಡ ಸ್ವಾಮಿಯವರದು…..

ರೈತ ಹೋರಾಟಕ್ಕೆ ತನ್ನ ಸಮಕಾಲೀನರ ಜೊತೆ ಸೇರಿ ಸಂಘಟನಾತ್ಮಕ ಧ್ವನಿ ನೀಡಿದ ಕೀರ್ತಿ ನಂಜುಂಡಸ್ವಾಮಿಯವರಿಗೆ ಸಲ್ಲುತ್ತದೆ…..

ರಾಜಕೀಯ ಆಡಳಿತಗಾರರು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಎಂಬ ಮೂರು ವರ್ಗಕ್ಕೂ ಒಂದು ರೀತಿಯಲ್ಲಿ ಸಿಂಹ ಸ್ವಪ್ನವಾಗಿದ್ದವರು ಎಂ ಡಿ ಎನ್……

ಖಾಸಗೀಕರಣದ ವಿರುದ್ಧ, ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳ ಮಾರುಕಟ್ಟೆ ಪ್ರವೇಶದ ವಿರುದ್ಧ, ಬ್ಯಾಂಕುಗಳ ಸಾಲ ವಸೂಲಾತಿಯ ದೌರ್ಜನ್ಯದ ವಿರುದ್ಧ, ರೈತರ ಅನೇಕ ಬೇಡಿಕೆಗಳ ಪರವಾಗಿ ನಿರಂತರ ಪ್ರತಿಭಟನೆ ಮತ್ತು ಹೋರಾಟ ರೂಪಿಸಲು ಶ್ರಮಿಸಿದವರು ನಂಜುಂಡಸ್ವಾಮಿಯವರು….

ಅಲ್ಲಿಯವರೆಗೂ ರೈತರನ್ನು ಬಹಳ ಲಘುವಾಗಿ ಪರಿಗಣಿಸಲಾಗುತ್ತಿತ್ತು. ಅವರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯದ ಮನೋಭಾವ ಪ್ರದರ್ಶಿಸಲಾಗುತ್ತಿತ್ತು. ನಂಜುಂಡ ಸ್ವಾಮಿ ಮತ್ತು ಅವರ ಸಮಕಾಲೀನ ಹೋರಾಟಗಾರರು ರೈತ ಶಕ್ತಿಯ ಮಹತ್ವವನ್ನು ವಿಧಾನಸೌಧಕ್ಕೆ ಮನವರಿಕೆ ಮಾಡಿಕೊಟ್ಟು ಒಂದು ಸಂದರ್ಭದಲ್ಲಿ ವಿಧಾನಸೌಧವನ್ನೇ ನಡುಗಿಸಿದ್ದರು.

ಎಪ್ಪತ್ತು ಎಂಬತ್ತರ ದಶಕದ ಕನ್ನಡ ಚಳವಳಿ, ದಲಿತ ಚಳವಳಿ, ಬಂಡಾಯ ಚಳವಳಿ ಸಮಯದಲ್ಲಿಯೇ ರೈತ ಚಳವಳಿ ಸಹ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆಗ ವಿಧಾನಸೌಧದ ಮುಂದಿನ ಕಬ್ಬನ್ ಪಾರ್ಕ್ ನಲ್ಲಿ ಸೇರುತ್ತಿದ್ದ ಲಕ್ಷಾಂತರ ರೈತ ಸಮುದಾಯದ ಜನರ ಹೋರಾಟಗಳು ಈಗಲೂ ಮನಸ್ಸಿನಾಳದಲ್ಲಿ ಕಣ್ಣಿಗೆ ಕಟ್ಟುವಂತೆ ಹಸಿಹಸಿಯಾಗಿದೆ…..

ಹಸಿರು ಶಾಲುಗಳು, ಊಟದ ಬುತ್ತಿಗಳು, ಹೋರಾಟದ ಹಾಡುಗಳು, ಆಕ್ರೋಶದ ಆಡಿಯೋ ಕ್ಯಾಸೆಟ್ ಗಳು, ಕೈಯಲ್ಲಿ ಭಿತ್ತಿ ಪತ್ರಗಳು, ಲಾರಿ, ಟ್ರ್ಯಾಕ್ಟರು, ಎತ್ತಿನ ಗಾಡಿಗಳು, ಸರ್ಕಾರ ವಿರುದ್ಧ ಉಗ್ರ ಭಾಷಣಗಳು, ಮಧ್ಯೆ ಪೋಲೀಸರು ಎಲ್ಲವೂ ಯುದ್ಧ ಭೂಮಿಯಂತೆ ಕಾಣುತ್ತಿತ್ತು.

ಆಗಿನ ಪತ್ರಿಕೆಗಳಲ್ಲಿ ಈ ಬಗ್ಗೆ ರೋಚಕ ಸುದ್ದಿಗಳು ಮುಖಪುಟದಲ್ಲಿಯೇ ಪ್ರಸಾರವಾಗುತ್ತಿತ್ತು. ಮುಖ್ಯವಾಗಿ ಲಂಕೇಶ್ ಪತ್ರಿಕೆ ಈ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಭರಿತವಾಗಿ ಇದಕ್ಕೆ ಬೆಂಬಲ ನೀಡಿತು. ಹಾಗಾಗಿ ಆಗಿನ ಎಲ್ಲಾ ಚಳವಳಿಗಳು ಜನ ಮತ್ತು ಸರ್ಕಾರದ ಗಮನ ಸೆಳೆದವು ಹಾಗೂ ಅತ್ಯಂತ ಪರಿಣಾಮಕಾರಿಯಾಗಿದ್ದವು.

ಈ ದೇಶದ ಬೆನ್ನೆಲುಬು ರೈತರು. ಅವರು ಮಹಾನ್ ಸ್ವಾಭಿಮಾನಿಗಳು. ಅವರಿಗೆ ಸಿಗಬೇಕಾದ ಗೌರವ ಮತ್ತು ಸೌಕರ್ಯಗಳನ್ನು ಒದಗಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯ ಎಂದು ಬಲವಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಕೀರ್ತಿ ಅಂದಿನ ರೈತ ನಾಯಕರಿಗೆ ಸಲ್ಲುತ್ತದೆ. ಅದು ಸ್ವಲ್ಪ ಹೆಚ್ಚು ಕಡಿಮೆ ಈಗಲೂ ಅದೇ ಅಭಿಪ್ರಾಯ ಮುಂದುವರಿದಿದೆ.

ಮಹತ್ವಾಕಾಂಕ್ಷಿಯಾಗಿದ್ದ ನಂಜುಂಡ ಸ್ವಾಮಿಯವರು ರಾಜಕೀಯ ಪ್ರವೇಶಿಸಿ ಚುನಾವಣಾ ಅಖಾಡದಲ್ಲಿ ರೈತ ಸಂಘಟನೆಯ ಮುಖಾಂತರ ಅಧಿಕಾರಕ್ಕೇರುವ ಕನಸು ಕಂಡವರು. ಜನರೇ ತಮ್ಮ ಕ್ಷೇತ್ರದ ಶಾಸಕರನ್ನು ತಮ್ಮಲ್ಲಿಯೇ ಒಬ್ಬರನ್ನು ಅಭ್ಯರ್ಥಿಯಾಗಿಸಿ ಆಯ್ಕೆ ಮಾಡಿಕೊಳ್ಳುವ ಮುಖಾಂತರ ರಾಜಕೀಯ ಕ್ರಾಂತಿ ಸಾಧ್ಯವಾಗಿಸಬಹುದು ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಅದರಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ ಮತ್ತು ರೈತ ಸಂಘಟನೆ ಹಲವು ವಿಭಾಗಗಳಾಗಿ ಒಡೆದು ಹೋಯಿತು ಎಂಬುದು ನಂತರದ ಇತಿಹಾಸ. ಅವರು ಕೇವಲ ಶಾಸಕರಾಗುವಷ್ಟು ಮಾತ್ರ ಯಶಸ್ವಿಯಾದರು.

ಎಲ್ಲಕ್ಕಿಂತ ಮುಖ್ಯವಾಗಿ ಅಂದಿನ ದಿನಗಳಲ್ಲಿ ಹೋರಾಟಗಳಿಗೆ ಜನರು ಸ್ಪಂದಿಸುತ್ತಿದ್ದ ರೀತಿಯನ್ನು ಗಮನಿಸಿದರೆ ಇಂದು ಬಹುತೇಕ ಜನ ನಿರ್ವೀರ್ಯವಾಗಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಬೆಲೆ ಏರಿಕೆ, ಅಮಾಯಕರ ಮೇಲಿನ ದೌರ್ಜನ್ಯ, ರಾಜಕೀಯ ಭ್ರಷ್ಠಾಚಾರ, ಖಾಸಗಿ ಕಂಪನಿಗಳ ವಂಚನೆ ಮುಂತಾದ ವಿಷಯಗಳಲ್ಲಿ ಆಗಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸ್ವತಃ ತಾವೇ ಮುನ್ನುಗ್ಗಿ ಭಾಗವಹಿಸುತ್ತಿದ್ದರು.
ಸಾಮಾಜಿಕ ಜಾಲತಾಣಗಳು ಇಲ್ಲದಿದ್ದ ಸಮಯದಲ್ಲಿಯೇ ಇದು ಸಾಧ್ಯವಾಗಿತ್ತು.

ಆದರೆ ಇಂದು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನಸ್ಥಿತಿಯೇ ಕಡಿಮೆಯಾಗಿದೆ. ಇಲ್ಲದ ಉಸಾಬರಿ ನಮಗೇಕೆ ಎಂಬ ಗುಲಾಮಿ ಮನೋಭಾವದ ಭಕ್ತಗಣ ಸಮುದಾಯ ಸೃಷ್ಟಿಯಾಗಿದೆ. ಬಹಳಷ್ಟು ಜನರು ತಮ್ಮ ಸ್ವಾಭಿಮಾನವನ್ನೇ ಜಾತಿ, ಧರ್ಮ, ಹಣಕ್ಕಾಗಿ ಮಾರಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ಕೆಚ್ಚೆದೆಯ ಹೋರಾಟಗಾರ – ದೂರದೃಷ್ಟಿಯ ನಾಯಕ – ಧೈರ್ಯವಂತ ಮುಂದಾಳು ಪ್ರೊಫೆಸರ್ ನಂಜುಂಡ ಸ್ವಾಮಿಯವರು ಪದೇ ಪದೇ ನೆನಪಾಗುತ್ತಾರೆ.

ಬಹುತೇಕ ಸರ್ಕಾರಿ ಆಸ್ತಿಗಳು ದಿನೇ ದಿನೇ ಮುಕ್ತ ವ್ಯಾಪಾರ ನೀತಿಯ ಫಲವಾಗಿ ಮಾರಾಟವಾಗುತ್ತಿರುವ ಸನ್ನಿವೇಶದಲ್ಲಿ ಆಗಿನ ಕೇವಲ ಒಂದು ಈಸ್ಟ್ ಇಂಡಿಯಾ ಕಂಪನಿ ನಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿತು. ಈಗ ಆ ರೀತಿಯ ಹಲವಾರು ಇನ್ನೂ ಬಲಿಷ್ಠ ಕಂಪನಿಗಳು ನಮ್ಮನ್ನು ಆಕ್ರಮಿಸುತ್ತಿವೆ. ಜನ ಆರ್ಥಿಕ ಅನಿವಾರ್ಯತೆಯ ಜೀತದಾಳುಗಳಾಗುತ್ತಿದ್ದಾರೆ. ಮೇಲ್ನೋಟಕ್ಕೆ ಅಭಿವೃದ್ಧಿ ಎಂದು ಕಾಣುತ್ತಿದ್ದರೂ ಆಂತರ್ಯದಲ್ಲಿ ಸ್ವಾತಂತ್ರ್ಯ ಕಳೆದುಕೊಂಡು ಗುಲಾಮರಾಗುತ್ತಿದ್ದಾರೆ. ಅದರ ಅರಿವು ಕೂಡ ಇವರಿಗೆ ಆಗುತ್ತಿಲ್ಲ.

ಇಂದಿನ ಯುವ ಪೀಳಿಗೆಗೆ ಸಂಘಟನೆ ಮತ್ತು ಹೋರಾಟದ ದೃಷ್ಟಿಯಲ್ಲಿ ನಂಜುಂಡ ಸ್ವಾಮಿಯವರು ಒಂದು ಮಾದರಿ. ಅವರಿಗೆ ಜನುಮ ದಿನದ ಶುಭಾಶಯಗಳು ಮತ್ತು ಯುವ ಜನಾಂಗಕ್ಕೆ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ರೈತ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವುದು ಪ್ರತಿ ಆಹಾರ ಸೇವಿಸುವ ಮನುಷ್ಯ ಪ್ರಾಣಿಯ ಪ್ರಪ್ರಥಮ ಕರ್ತವ್ಯ ಎಂದು ಜವಾಬ್ದಾರಿಯನ್ನು ನೆನಪಿಸುತ್ತಾ…..

ಮಾಧ್ಯಮಗಳು ಕೆಟ್ಟ ಬ್ರೇಕಿಂಗ್ ನ್ಯೂಸ್ ಗಳ ಹಿಂದೆ ಬಿದ್ದಿದ್ದಾರೆ. ಸಾಮಾನ್ಯ ಜನರಾದ ನಾವು ಆದರ್ಶಗಳನ್ನು ಸ್ಮರಿಸುವ ಮೌಲ್ಯಗಳ ಹಿಂದೆ ಸಾಗೋಣ.
ಏಕೆಂದರೆ ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು….

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಮತ್ತೊಮ್ಮೆ ಟಿಸಿಲೊಡೆಯುವ ಸಂದರ್ಭ ಕೂಡಿಬಂದಿದೆ. ಆದ್ದರಿಂದ ಈ ಸಂದರ್ಭದಲ್ಲಿ ನಿಸ್ವಾರ್ಥ ಹೋರಾಟಗಾರರು, ಸಂವೇದನಾಶೀಲ ಬರಹಗಾರರು, ಜವಾಬ್ದಾರಿಯುತ ಜಾಗೃತ ಮತದಾರರು ಒಟ್ಟಾಗಿ ಸೇರಲು ಈ ಸುಸಂದರ್ಭವನ್ನು ಉಪಯೋಗಿಸಿಕೊಳ್ಳಬೇಕಾಗಿದೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಸವನಹಳ್ಳಿಯಲ್ಲಿ ಅದ್ವಿತಾ ಜನ್ಮದಿನ ಅರ್ಥಪೂರ್ಣ ಆಚರಣೆ

ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…

7 hours ago

ಕಾರಿಗೆ ಅಡ್ಡ ಬಂದ ನಾಯಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…

10 hours ago

ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…

22 hours ago

ಜೂ..7ರಂದು ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ- ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ

ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…

23 hours ago

ಜೂ. 20 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಂಭ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…

1 day ago

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

  ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ…

1 day ago