Categories: ಲೇಖನ

ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಆಡಳಿತ ವ್ಯವಸ್ಥೆ…..

 

ಸಂವಿಧಾನ ಜಾರಿಗೆ ಬಂದು ಸುಮಾರು 76 ವರ್ಷಗಳ ನಂತರವೂ ಇದೇನಿದು ರಾಜ್ಯಗಳ ಎರಡು ಪ್ರಮುಖ ಅಧಿಕಾರ ಕೇಂದ್ರಗಳ ನಡುವೆ ಈ ಬೀದಿ ಜಗಳ…

ಸರ್ಕಾರದಲ್ಲಿ ಯಾವುದೇ ಸ್ಥಾನಮಾನ, ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ದಯವಿಟ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ……

ಭಾರತ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಒಂದಷ್ಟು ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗುತ್ತಿದೆ.

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳು ಯಾವ ಹಂತಕ್ಕೆ ತಲುಪಿದೆ ಎಂದರೆ……

ಹಿಂದೆಯೂ ಈ ರೀತಿಯ ಭಿನ್ನಾಭಿಪ್ರಾಯಗಳು ಇದ್ದವು. ಆಗಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಇದನ್ನು ಒಂದು ಹಂತಕ್ಕೆ ನಿಯಂತ್ರಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಅತಿರೇಕವನ್ನು ಮುಟ್ಟಿದೆ. ಈ ನಡುವೆ ಕೆಲವು ರಾಜ್ಯಗಳಲ್ಲಿ ಸ್ಪೀಕರ್ ಅವರ ಹುದ್ದೆಯೂ ಸಹ ಇದೇ ರೀತಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ……

ಸಂವಿಧಾನದಲ್ಲಿ ಕಾನೂನುಗಳನ್ನು ಸ್ಪಷ್ಟವಾಗಿ ರಚಿಸಿದ್ದರೂ ಸಹ ” ವಿವೇಚನಾ ಅಧಿಕಾರ ” ಎಂಬ ಪದವನ್ನು ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಬಳಸಿಕೊಂಡು ವಿವಾದಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಹಾಗೆಯೇ ಪಕ್ಷಪಾತದ ತೀರ್ಮಾನಗಳನ್ನು ಅವರವರ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳಲಾಗುತ್ತಿದೆ…..

ವಾಸ್ತವದಲ್ಲಿ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಅಧಿಕಾರ ಇರುತ್ತದೆ. ಅವರು ಬಹುತೇಕ ಜನರಿಗೆ ಉತ್ತರದಾಯಿತ್ವ ಹೊಂದಿರುತ್ತಾರೆ. ಹಾಗೆಯೇ ಜನಪ್ರಿಯತೆಯ ನಡುವೆ ಕಾನೂನುಗಳು ಸಹ ಅಷ್ಟೇ ಮುಖ್ಯವಾಗುತ್ತದೆ. ಆ ಕಾನೂನುಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯಪಾಲರನ್ನು ನೇಮಿಸಲಾಗಿರುತ್ತದೆ. ಇಬ್ಬರೂ ಕೂಡ ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡಿಕೊಂಡು ಹೋದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ರಾಜಕೀಯ ಪಕ್ಷಗಳು ಅಧಿಕಾರದ ದಾಹಕ್ಕೆ ಒಳಗಾಗಿ ಜನಪ್ರಿಯತೆಯನ್ನು, ಕಾನೂನನ್ನು ಅದಕ್ಕಾಗಿ ಬಳಸಿಕೊಂಡಾಗ ಈ ವಿವಾದ ಸೃಷ್ಟಿಯಾಗುತ್ತದೆ……

ಇಲ್ಲಿ ನಾವುಗಳು ಮುಕ್ತ ಮನಸ್ಸಿನಿಂದ ನೋಡಬೇಕಾಗಿರುವುದು ಜನಪ್ರಿಯತೆ ಅಥವಾ ಬಹುಮತವೇ ಅಂತಿಮ ಸತ್ಯವೆಂದಲ್ಲ. ಒಂದು ಸರ್ಕಾರ ಜನಪ್ರಿಯವಾಗಿದೆ ಎಂದ ತಕ್ಷಣ ಅದು ಐದು ವರ್ಷದ ಅವಧಿಯಲ್ಲಿ ತಮಗಿಷ್ಟ ಬಂದಂತೆ ಆಡಳಿತ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಾನೂನಿನ ಇತಿಮಿತಿಗಳು ಇದ್ದೇ ಇರುತ್ತದೆ. ಒಂದು ವ್ಯವಸ್ಥೆ ದೀರ್ಘಕಾಲ ಕ್ರಮಬದ್ಧವಾಗಿ ಮುನ್ನಡೆಯಲು ನೀತಿ ನಿಯಮಗಳು ಬೇಕೇ ಬೇಕು….

ಹಾಗೆಯೇ ನೀತಿ ನಿಯಮಗಳೇ ಸಂಪೂರ್ಣ ಪರಮಾಧಿಕಾರವೂ ಅಲ್ಲ. ನೀತಿ ನಿಯಮಗಳನ್ನು ರೂಪಿಸಿರುವುದು ಜನರ ಕಲ್ಯಾಣಕ್ಕಾಗಿಯೇ ಹೊರತು ನಿಯಮಗಳಿಗಾಗಿಯೇ ನಾವಿಲ್ಲ, ನಮಗಾಗಿ ನಿಯಮಗಳಿರುವುದು. ಆ ಕೆಲವು ಅಂಶಗಳನ್ನೇ ಉಪಯೋಗಿಸಿಕೊಂಡು ಬಹುಮತದಿಂದ ಆಯ್ಕೆಯಾದ ಸರ್ಕಾರಗಳಿಗೆ ತೊಂದರೆ ಕೊಡುವುದು ಕೂಡ ತಪ್ಪಾಗುತ್ತದೆ….

ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶ ಮುಂತಾದ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಮುಖ್ಯಮಂತ್ರಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹಿಂದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ನಿಜಕ್ಕೂ ಸಂವಿಧಾನದಲ್ಲಿ ಏನಾದರೂ ಲೋಪಗಳಿವೆಯೇ ಎಂದು ಪರಿಶೀಲಿಸಿದಾಗ ಖಂಡಿತ ಇಲ್ಲ, ಈ ವಿವಾದಗಳು ಕೃತಕ ಸೃಷ್ಟಿ. ಏಕೆಂದರೆ ಒಂದೇ ಪಕ್ಷದ ಆಡಳಿತಗಳು ಎರಡೂ ಕಡೆ ಇರುವಾಗ ಸಾಮಾನ್ಯವಾಗಿ ಯಾವುದೇ ವಿವಾದಗಳಾಗುವುದಿಲ್ಲ. ಎರಡು ವಿಭಿನ್ನ ಪಕ್ಷಗಳು ಆಯ್ಕೆಯಾದಾಗ ಮಾತ್ರ ಈ ಸಮಸ್ಯೆ ತಲೆದೋರುತ್ತದೆ. ಅಂದರೆ ಇದು ಬೇಕಂತಲೇ ಸಮಸ್ಯೆ ಉಂಟುಮಾಡುವ ಪ್ರಕ್ರಿಯೆಗಳು ಎಂಬುದು ಸ್ಪಷ್ಟವಾಗುತ್ತದೆ…..

ಮಾಧ್ಯಮಗಳು ಮತ್ತು ರಾಜಕೀಯ ಆಸಕ್ತರು ಇದನ್ನು ಸಮಗ್ರವಾಗಿ ನೋಡದೆ ಅವರು ಸರಿ, ಇವರು ಸರಿ, ಅವರು ತಪ್ಪು, ಇವರ ತಪ್ಪು ಎಂದು ವಿಮರ್ಶೆಗೆ ಇಳಿಯುತ್ತಾರೆ. ಇಲ್ಲಿ ಸರಿ ತಪ್ಪುಗಳ ಪ್ರಶ್ನೆಯೇ ಬರುವುದಿಲ್ಲ. ಇವೆಲ್ಲವೂ ಉದ್ದೇಶಪೂರ್ವಕ ಚಟುವಟಿಕೆಗಳು. ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ತುಂಬಾ ಅಪರಿಚಿತರು ಅಥವಾ ಶತ್ರುಗಳೇನು ಅಲ್ಲ. ಈಗಿನ ಕಾಲದಲ್ಲಿ ಸಂಪರ್ಕದ ಕೊರತೆಯೂ ಇರುವುದಿಲ್ಲ. ಯಾವಾಗ ಬೇಕಾದರೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕುಳಿತು, ಚರ್ಚಿಸಿ, ಮಾತನಾಡಿ ವಿವಾದ ಬಗೆಹರಿಸಿಕೊಳ್ಳಬಹುದು ಅಥವಾ ನೈತಿಕ ಮತ್ತು ಕಾನೂನಿನ ಜವಾಬ್ದಾರಿ ನಿರ್ವಹಿಸಬಹುದು. ಆದರೆ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಬೇಕಂತಲೇ ತೊಂದರೆ ಕೊಡುತ್ತಾರೆ……

ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ತುಂಬಾ ಕಷ್ಟ. ಏಕೆಂದರೆ ಸಮಸ್ಯೆಯೇ ಇಲ್ಲದ ಕಡೆ ಸಮಸ್ಯೆಯನ್ನು ಹುಟ್ಟು ಹಾಕಲಾಗುತ್ತದೆ….

ಇಲ್ಲಿ ನಾವು ಮುಖ್ಯವಾಗಿ ಚರ್ಚಿಸಬೇಕಾಗಿರುವುದು ಪ್ರಜಾಪ್ರಭುತ್ವದ ಯಶಸ್ಸಿನ ಮಾನದಂಡಗಳು ಮತ್ತು ಗುಣಮಟ್ಟ. ಎಲ್ಲಿ ಬುದ್ದಿವಂತ, ಪ್ರಾಮಾಣಿಕ ಮತದಾರರು ಮತ್ತು ಚುನಾವಣಾ ಅಭ್ಯರ್ಥಿಗಳು ಇರುತ್ತಾರೋ ಅಲ್ಲಿ ಸಹಜವಾಗಿಯೇ ಪ್ರಜಾಪ್ರಭುತ್ವ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಆದರೆ ಎಲ್ಲಿ ವ್ಯಕ್ತಿಗಳು ಅಥವಾ ಮತದಾರರು ಮತ್ತು ಅಭ್ಯರ್ಥಿಗಳು ಅಪ್ರಬುದ್ಧ, ಅಪ್ರಾಮಾಣಿಕ, ಅದಕ್ಷ, ಭ್ರಷ್ಟ, ಧರ್ಮಾಂಧ, ಜಾತಿವಾದಿಗಳು ಇರುತ್ತಾರೋ ಅಲ್ಲಿ ಪ್ರಜಾಪ್ರಭುತ್ವ ಕೆಳಹಂತಕ್ಕೆ ಇಳಿಯುತ್ತದೆ…..

ಸಮಸ್ಯೆಯ ಮೂಲ ಇರುವುದೇ ಇಲ್ಲಿ. ಆದ್ದರಿಂದಲೇ ಒಂದು ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ವ್ಯಕ್ತಿಗಳ ಗುಣಮಟ್ಟ ಉತ್ತಮವಾಗಿರಬೇಕು, ಅಂದರೆ ಮೌಲ್ಯಯುತವಾಗಿರಬೇಕು. ನಮ್ಮೆಲ್ಲ ಕಾರ್ಯಯೋಜನೆಗಳು, ಚಿಂತನೆಗಳು, ವ್ಯಕ್ತಿತ್ವ ನಿರ್ಮಾಣದ ಕಡೆಗಿರಲಿ ಎಂದು ಆಶಿಸುತ್ತಾ……

ಆಗ ಮಾತ್ರ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಸುಧಾರಿಸಬಹುದು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗೃಹಜ್ಯೋತಿಗೆ ಮನೆಮನೆ ಬಾಗಿಲು ತಟ್ಟಿದ ಬೆಸ್ಕಾಂ:

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗ…

20 minutes ago

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

14 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

17 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

1 day ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

1 day ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

2 days ago