ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಬಚ್ಚಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗೆ ಕೆಲ ಪುಂಡ ಬಾಲಕರು ವಿಷದ ಅಂಟು ದ್ರವ ಕುಡಿಸಿ ಕೊಲೆಗೆ ಯತ್ನ ಆರೋಪ ಕೇಳಿಬಂದಿದ್ದು, ಘಟನೆ ಮುಚ್ಚಿಹಾಕಲು ಶಾಲೆಯ ಸಿಬ್ಬಂದಿ ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ನೆಲಮಂಗಲದ ಲೋಹಿತ್ ನಗರದ ವಿದ್ಯಾರ್ಥಿ ನಾಗಾರ್ಜುನ ಎಂಬ ಬಾಲಕನಿಗೆ ಪುಂಡರು ವಿಷದ ಅಂಟು ದ್ರವ ಕುಡಿಸಿದ್ದು, ಬಾಲಕ ಅಸ್ವಸ್ಥಗೊಂಡು ಯಶವಂತಪುರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಸತಿ ಶಾಲೆಯ ಪುಂಡರ ಈ ಕೃತ್ಯವನ್ನು ಮುಚ್ಚಿಹಾಕಲು ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಮತ್ತು ಆರೋಗ್ಯ ಸಹಾಯಕಿ ಪ್ರಯತ್ನಿಸಿದ್ದಾರೆ ಎಂದು ಅಸ್ವಸ್ಥ ಬಾಲಕನ ಸಂಬಂಧಿಯಾದ ಬಿ.ಆರ್.ಭಾಸ್ಕರಪ್ರಸಾದ್ ಆರೋಪಿಸಿದ್ದಾರೆ.
ನನ್ನ ಸಹೋದರಿ ಹಾಗೂ ಆಕೆಯ ಪತಿ ಇಬ್ಬರೂ ಮೃತಪಟ್ಟಿದ್ದಾರೆ. ಹಾಗಾಗಿ ನಾಗಾರ್ಜುನನನ್ನು ನಾನೇ ಸಾಕಿಕೊಂಡಿದ್ದೇನೆ. ಕಳೆದ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಾಖಲು ಮಾಡಿದ್ದೆ. ಚೆನ್ನಾಗಿ ಓದುತ್ತಿದ್ದ. ಕಳೆದ ನಾಲ್ಕು ದಿನಗಳ ಹಿಂದೆ ನಾಗಾರ್ಜುನ ಮಲಗಿದ್ದ ವೇಳೆ ನಾಲ್ವರು ಪುಂಡರು ಬಾಯಿಗೆ ಕಳ್ಳಿ ಹಾಲು ಮತ್ತು ಯಾವುದೋ ವಿಷ ಬೀಜದ ರಸ ಕುಡಿಸಿದ್ದಾರೆ ಎಂಬುದು ಅಲ್ಲಿನ ಸಿಬ್ಬಂದಿಯೊಬ್ಬರಿಂದ ತಿಳಿದುಬಂದಿದೆ. ಶಾಲೆಯ ಪ್ರಾಂಶುಪಾಲ, ನಿಲಯಪಾಲಕರನ್ನು ಕೇಳಿದರೆ ಅಂತದ್ದೇನೂ ಆಗಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಭಾಸ್ಕರ ಪ್ರಸಾದ್ ದೂರಿದ್ದಾರೆ.
ಬಾಲಕ ನಾಗಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶ್ವಾಸಕೋಶ, ಗಂಟಲು, ಕರುಳು ಮತ್ತು ರಕ್ತಕ್ಕೆ ನಂಜು ಉಂಟಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಘಟನೆ ಗೊತ್ತಾಗಿದ್ದು ಹೇಗೆ?
ಮೂರು ದಿನದ ಹಿಂದೆ ವಸತಿ ಶಾಲೆಯಿಂದ ಭಾಸ್ಕರಪ್ರಸಾದ್ ಅವರಿಗೆ ಕರೆ ಬಂದಿದೆ. ಕರೆ ಮಾಡಿದ್ದ ವಸತಿ ಶಾಲೆಯ ಆರೋಗ್ಯ ಸಹಾಯಕಿ, ನಿಮ್ಮ ಹುಡುಗನಿಗೆ ಜ್ವರ ಮತ್ತು ಗಂಟಲು ನೋವಿದೆ. ತುಂಬಾ ಸುಸ್ತಾಗಿದ್ದಾನೆ. ಅವನಿಗೆ ಎರಡು ದಿನ ವಿಶ್ರಾಂತಿ ಬೇಕಿದೆ. ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಅದರಂತೆ ಭಾಸ್ಕರಪ್ರಸಾದ್ ಅವರು ಬಚ್ಚಹಳ್ಳಿಯಲ್ಲಿರುವ ತಮ್ಮ ಸಂಬಂಧಿ ಮಂಜುನಾಥ ಮೂಲಕ ನಾಗಾರ್ಜುನನನ್ನು ಮನೆಗೆ ಕರೆಸಿಕೊಂಡಿದ್ದರು.
ಅಸ್ವಸ್ಥವಾಗಿದ್ದ ನಾಗಾರ್ಜುನನನ್ನು ಯಶವಂತಪುರದ ಖಾಸಗಿ ಆಸ್ಪತ್ರೆ ದಾಖಲಿಸಿ ರಕ್ತ ಪರೀಕ್ಷೆ, ಎಕ್ಸರೇ, ಸ್ಕ್ಯಾನಿಂಗ್ ಮಾಡಿಸಿದಾಗ ಗಂಟಲು, ರಕ್ತ, ಶ್ವಾಸಕೋಶ ಹಾಗೂ ಸಣ್ಣ ಕರುಳಿನಲ್ಲಿ ನಂಜು ಹರಡಿದೆ.
ಶ್ವಾಸಕೋಶದಲ್ಲಿ ಕಫದಂತಹ ವಸ್ತು ಸೇರಿ ಉಸಿರಾಟ ಸಮಸ್ಯೆ ಆಗಿದೆ. ನಾಗಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಾಂಶುಪಾಲರಿಗೆ ತಿಳಿಸಲು ನನ್ನ ಸಂಬಂಧಿ ಮಂಜುನಾಥ ವಸತಿ ಶಾಲೆಗೆ ಹೋದಾಗ ಮಗುವಿನ ಅನಾರೋಗ್ಯದ ಹಿಂದಿನ ನಿಜವಾದ ಕಾರಣ ತಿಳಿದುಬಂದಿದೆ. ಜೊತೆಗೆ ನಾಗಾರ್ಜುನ ಕೂಡ ಭಯದಿಂದಲೇ ಘಟನೆ ವಿವರಿಸಿದ. ಆದ್ದರಿಂದ ನಮ್ಮ ಮಗುವಿಗೆ ನ್ಯಾಯ ಮತ್ತು ರಕ್ಷಣೆ ಕೊಡಿಸಬೇಕು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಸೋಮವಾರ(ಇಂದು) ದೂರು ಸಲ್ಲಿಸಲಿದ್ದೇನೆ ಎಂದು ಭಾಸ್ಕರಪ್ರಸಾದ್ ತಿಳಿಸಿದ್ದಾರೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ ಇಂದು
ವಸತಿ ಶಾಲೆಯ ಪ್ರಾಂಶುಪಾಲ, ವಾರ್ಡನ್ ಹಾಗೂ ಆರೋಗ್ಯ ಸಹಾಯಕಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಚಲನಾಸಮಿತಿಯ ಪ್ರೊ.ಹರಿರಾಮ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…