ಮಳೆ ಕೈಕೊಟ್ಟಿತು, ರಾಗಿ ಕೈಬಿಟ್ಟಿತು: ಬೆಳೆಗೇ ಟ್ರ್ಯಾಕ್ಟರ್ ಹರಿಸಿದ ರೈತ: ದೊಡ್ಡಬಳ್ಳಾಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ: 3.5 ಎಕರೆ ರಾಗಿ ಬೆಳೆ ನಾಶ

ದೊಡ್ಡಬಳ್ಳಾಪುರ: ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ್ದ ರಾಗಿ ಬೆಳೆ ಒಣಗಿ, ಕೈಗೆ ಬಾರದ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರೊಬ್ಬರು ತಮ್ಮ ಜಮೀನಿಗೆ ಟ್ರ್ಯಾಕ್ಟರ್ ಹರಿಸಿ ಬೆಳೆಯನ್ನೇ ನಾಶಪಡಿಸಿರುವ ಘಟನೆ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಕೆ. ಮುಕುಂದ ಅವರು ತಮ್ಮ 3.5 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಸಾಲ ಮಾಡಿ ಸುಮಾರು 45 ಸಾವಿರ ಖರ್ಚು ಮಾಡಿ ಎರಡು ಬಾರಿ ರಾಗಿ ಬಿತ್ತನೆ ಮಾಡಿದ್ದರು. ಕಳೆದ ವರ್ಷ ಇದೇ ಜಮೀನಿನಲ್ಲಿ ಸುಮಾರು 35 ಮೂಟೆ ರಾಗಿ ಬೆಳೆದಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ಉತ್ತಮ ಇಳುವರಿ ನಿರೀಕ್ಷಿಸಿದ್ದರು.

ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ರಾಗಿ ಪೈರು ಬೆಳವಣಿಗೆಯಾಗದೆ ಒಣಗುವ ಹಂತಕ್ಕೆ ತಲುಪಿದೆ. ಬಿತ್ತನೆ ಮಾಡಿದ್ದ ಬೆಳೆ ಉಳಿಯುವುದಿಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟ್ರ್ಯಾಕ್ಟರ್ ಮೂಲಕ ಜಮೀನನ್ನು ಉಳುಮೆ ಮಾಡಿ ರಾಗಿ ಬೆಳೆಯನ್ನೇ ನಾಶಪಡಿಸಿದ್ದಾರೆ.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತನಿಗೆ ಮಳೆ ಕೊರತೆ ಮತ್ತೊಂದು ಆಘಾತ ನೀಡಿದ್ದು, ಸುಮಾರು 3ರಿಂದ 4 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಮುಕುಂದ ಅವರು ಅಳಲು ತೋಡಿಕೊಂಡಿದ್ದಾರೆ.

ರಾಗಿ ಒಂದು ಕ್ವಿಂಟಲ್‌ಗೆ ಸರ್ಕಾರ ಸುಮಾರು 5 ಸಾವಿರ ದರ ನಿಗದಿಪಡಿಸಿದ್ದರೂ, ಬೆಳೆ ಕೈಗೆ ಬಾರದ ಕಾರಣ ಈ ಬಾರಿ ಯಾವುದೇ ಆದಾಯ ದೊರೆಯದಂತಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರೈತ ಮುಕುಂದ, ಸಾಲ ಮಾಡಿ ಹಣ ಖರ್ಚು ಮಾಡಿ ಎರಡು ಬಾರಿ ರಾಗಿ ಬಿತ್ತನೆ ಮಾಡಿದ್ದೇನೆ. ಆದರೆ ಮಳೆಯೇ ಬರಲಿಲ್ಲ. ಕಣ್ಣೆದುರೇ ಬೆಳೆ ಒಣಗಿ ಹೋಯಿತು. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ಈಗ ದಿಕ್ಕೇ ತೋಚದಂತಾಗಿದೆ. ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ ದೊಡ್ಡಬಳ್ಳಾಪುರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಾಸ್ತವ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡಿಲ್ಲ. ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ದೊಡ್ಡಬಳ್ಳಾಪುರ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ, ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮುಕುಂದ ಒತ್ತಾಯಿಸಿದರು.

‘ಮಳೆ ಇಲ್ಲ… ಬೆಳೆ ಇಲ್ಲ… ಆದಾಯವೂ ಇಲ್ಲ…’ ಎಂಬ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜೊತೆಗೆ ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ರೈತರಾದ ಚೇತನ್ ಕುಮಾರ್, ಭೈರೇಗೌಡ, ತ್ಯಾಗರಾಜು, ಲೋಹಿತ್ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.

Ramesh Babu

Journalist

Recent Posts

ಚಿಕ್ಕನಹಳ್ಳಿ ಡೇರಿಗೆ 2.07 ಲಕ್ಷ ನಿವ್ವಳ ಲಾಭ: ಹೈನುಗಾರಿಕೆ ರೈತರ ಆರ್ಥಿಕ ಮೂಲ- ಸಿ.ಅಮರೇಶ್

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹2.07 ಲಕ್ಷ ನಿವ್ವಳ ಲಾಭ…

6 hours ago

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು ಗ್ರಾಮಾಂತರ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ…

1 day ago

ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ: ನಷ್ಟ ಬೆಳೆ, ಮೆಣಸಿನಕಾಯಿ ಹಾಗೂ ಜಾನುವಾರುಗಳ ಸಮೇತ ಪ್ರತಿಭಟನೆ

ಕೋಲಾರ: ಬರದಿಂದ ತತ್ತರಿಸಿರುವ ರೈತರ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಬೆಸ್ಕಾಂ…

1 day ago

ಘಾಟಿ ತೇರಿನಬೀದಿ ಒತ್ತುವರಿ ತೆರವು; ವ್ಯಾಪಾರಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ತೇರಿನಬೀದಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಒತ್ತುವರಿ…

1 day ago

ಹೃದಯ ವೈಶಾಲ್ಯತೆ ಮತ್ತು ಶುದ್ಧತೆ…

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ....... ಜೊತೆಗೆ ಹೃದಯ ಅಥವಾ ಮನಸ್ಸು…

2 days ago

ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ: ಪಿಡಿಒ ಗೌರಮ್ಮ

ಚಿಕ್ಕನಾಯಕನಹಳ್ಳಿ ಸೆ.07: ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ ಹಾಗಾಗಿ ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಕ್ಷಿ…

2 days ago